

ಬೆಂಗಳೂರು: 50 ಸಾವಿರದ ಕೆಳಗೆ ಸಾಲ ಇರುವ ರೈತರ ಸಾಲ ಮನ್ನಾ ಮಾಡಿ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಬರೆದಿರುವ ಪತ್ರ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳು ಈ ಬಗ್ಗೆ ಪ್ರಶ್ನೆ ಕೇಳಿದಾಗ ಮೋದಿ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡಲು ಹೇಳಲಿ, ಯಾರು ಬೇಡ ಅಂದವರು ಎಂದು ಕೇಳಿದರು. ಬಿಜೆಪಿ ನಾಯಕ ಆರ್. ಅಶೋಕ್ ಅವರು ಬರ ಹಾಗೂ ಪ್ರವಾಹಪೀಡಿತ ರೈತರ ಕೃಷಿ ಸಾಲ ಮನ್ನಾಗೆ ಆಗ್ರಹಿಸುತ್ತಿರುವ ಬಗ್ಗೆ ಅವರು ಪ್ರಧಾನಮಂತ್ರಿಯನ್ನೇ ಕೇಳಬೇಕು. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಸ್ಥಳೀಯ ವರದಿಗಳು ಮತ್ತು ಅಂಕಿ-ಅಂಶಗಳ ಮೌಲ್ಯಮಾಪನದ ಬಳಿಕ ಮುಖ್ಯಮಂತ್ರಿ ಬರಪೀಡಿತ ಪ್ರದೇಶಗಳನ್ನು ಘೋಷಿಸಲಿದ್ದಾರೆ ಎಂದರು.
ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳನ್ನು, ವಿಬಿ ಜಿ ರಾಮ್ ಜಿ ಕಾರ್ಯಕ್ರಮಗಳು, ಜಲಜೀವನ್ ಮಿಷನ್, ರೈತರ ಸಾಲ ಮನ್ನಾ ಹೀಗೆ ಮೋದಿಯವರ ಹೆಸರು ಇರುವ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ನಾವು ಹಣ ಕೊಡಬೇಕು ಅಂತಾದರೆ ಮಾಡೋಣ ಹಾಗಾದರೆ ಇವರು ಏನು ಮಾಡುತ್ತಾರೆ ಎಂದು ಕೇಳಿದರು.
ರಾಜ್ಯ ಸರ್ಕಾರದ ಹಾಗೂ ಕೇಂದ್ರ ಸರ್ಕಾರದ ಜವಾಬ್ದಾರಿಗಳೇನು, ಬಿ ಎಸ್ ಯಡಿಯೂರಪ್ಪನವರು ಹಿಂದೆ ವಿಧಾನ ಪರಿಷತ್ತಿನಲ್ಲಿ ಸಾಲ ಮನ್ನಾ ಮಾಡಿ ಎಂದು ವಿ ಎಸ್ ಉಗ್ರಪ್ಪನವರು ಪ್ರಸ್ತಾಪಿಸಿದ್ದಾಗ ನೋಟು ಮುದ್ರಿಸುವ ಮೆಷಿನ್ ನಾನು ಇಟ್ಕೊಂಡಿದ್ದೀನಾ, ಸಾಲ ಮನ್ನಾ ಮಾಡಲಾಗುವುದಿಲ್ಲ ಎಂದು ಹೇಳಿದ್ದರು ಎಂದರು.
ಬಿಜೆಪಿಯವರಿಗೂ ನನ್ನ ಬಗ್ಗೆ ಮಾತನಾಡಿದರೆ ಪ್ರಚಾರ ಸಿಗುತ್ತದೆ ಎಂದು ಭಾವಿಸಿ ಮಾತನಾಡುತ್ತಾರೇನೋ, ಬಿಜೆಪಿಯವರ ಸಾಮಾಜಿಕ ಜಾಲತಾಣ ತೆಗೆದು ನೋಡಿ, ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಬಗ್ಗೆ ಟೀಕೆ ಮಾಡಿ ಬರೆದ ನಂತರ ನನ್ನ ಬಗ್ಗೆಯೂ ಮೂರು ಬಾರಿ ಬರೆಯುತ್ತಾರೆ. ಅವರಿಗೆ ಸಂಬಳ ಸಿಗುತ್ತಿರುವುದೇ ನನ್ನಿಂದ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ನನ್ನ ಹೆಸರು ಹೇಳದಿದ್ದರೆ ಬಿಜೆಪಿಯ ಐಟಿ ಸೆಲ್ ನವರಿಗೆ ಸಂಬಳ ಸಿಗುವುದಿಲ್ಲವೇನೋ, ನಿರುದ್ಯೋಗಿ ಆಗುತ್ತಿದ್ದರೇನೋ, ನಾನು ವಸ್ತುನಿಷ್ಠವಾಗಿ ಮಾತನಾಡುತ್ತಿದ್ದೇನೆ, ನಾನು ಕೇಳಿರುವ ಪ್ರಶ್ನೆ ಅಸಂವಿಧಾನಿಕವಾಗಿದೆಯೇ, ಅತಾರ್ಕಿಕವಾಗಿದೆಯೇ ಎಂದು ಕೇಳಿದರು.
ಮುಖ್ಯಮಂತ್ರಿಗಳು ವರದಿ ತರಿಸಿಕೊಂಡ ನಂತರ ರೈತರ ಸಾಲ ಮನ್ನಾ ಮಾಡಬೇಕು ಎಂದಾದರೆ ಮಾಡೋಣ, ಆದರೆ ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ, ಅವರು ಕೇವಲ ಪ್ರಧಾನಿಯವರ ಮನ್ ಕಿ ಬಾತ್ ಕೇಳೋದಿಕ್ಕಾ ಇರೋದು, ಮುಖ್ಯಮಂತ್ರಿಗಳು ಜಿಲ್ಲೆಗಳಿಗೆ ಹೋಗಿ ಅಲ್ಲಿ ಬರ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳುತ್ತಾರೆ, ಕೇಂದ್ರ ಸರ್ಕಾರದ ಮಾನದಂಡದ ಪ್ರಕಾರ ಬರಗಾಲ ಜಿಲ್ಲೆ ಪೀಡಿತ ಎಂದು ಘೋಷಿಸಬೇಕು, ಕೇಂದ್ರ ಸರ್ಕಾರಕ್ಕೆ ಘೋಷಣೆ ಮಾಡಲು ಹೇಳಲಿ, ನಮಗೆ ಪ್ರವಚನ ಮಾಡುವ ಬದಲು ಮೋದಿ ಸರ್ಕಾರವನ್ನು ಒತ್ತಾಯಿಸಲಿ ಎಂದರು.