350 ಕಿ.ಮೀ ಸುದೀರ್ಘ ಸಂಚಾರ: ನಾಗರಹೊಳೆ ಹುಲಿ ಅಂಕೋಲಾ ಅರಣ್ಯದಲ್ಲಿ ಪತ್ತೆ !

ಇತ್ತೀಚಿನ ಕೆನರಾ ವೃತ್ತದ ಹುಲಿ ಗಣತಿಯಲ್ಲಿ, ಅಂಕೋಲಾ ಅರಣ್ಯದಲ್ಲಿನ ಈ ಎರಡು ಹುಲಿಗಳು ಗುಳೆ ಮತ್ತು ಕೋಟಿಬಾವಿ ಅರಣ್ಯ ಪ್ರದೇಶಗಳಲ್ಲಿ ಪತ್ತೆಯಾಗಿವೆ. ಸಾಮಾನ್ಯವಾಗಿ ಹುಲಿಗಳು ತಮ್ಮ ಮೂಲ ವಾಸಸ್ಥಳವನ್ನು ಬಿಟ್ಟು ಹೊಸ ಪ್ರದೇಶದಲ್ಲಿ ನೆಲೆಸುವುದು ಅಪರೂಪ.
The tiger which was camera-trapped in Nagarhole
ನಾಗರಹೊಳೆನಲ್ಲಿ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆ ಸಿಕ್ಕಿದ್ದ ಹುಲಿ
Updated on

ಅಂಕೋಲಾ: ಕ್ಯಾಮೆರಾ ಟ್ರ್ಯಾಪ್‌ಗಳ ಮೂಲಕ ನಡೆಸಿದ ಹುಲಿ ಗಣತಿಯ ಪ್ರಕಾರ, ಅಂಕೋಲಾ ಅರಣ್ಯ ಪ್ರದೇಶದಲ್ಲಿ ಎರಡು ಹುಲಿಗಳಿರುವುದು ದೃಢಪಟ್ಟಿದೆ. ವಿಶೇಷವೆಂದರೆ, ಈ ಎರಡೂ ಹುಲಿಗಳು ವಲಸೆ ಬಂದದ್ದಾಗಿವೆ. ಒಂದು ಹುಲಿ 350 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದ ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಬಂದಿದ್ದರೆ, ಮತ್ತೊಂದು ಪಕ್ಕದ ಕಾಳಿ ಹುಲಿ ಸಂರಕ್ಷಿತ ಪ್ರದೇಶದಿಂದ ಬಂದಿದೆ.

ಇತ್ತೀಚಿನ ಕೆನರಾ ವೃತ್ತದ ಹುಲಿ ಗಣತಿಯಲ್ಲಿ, ಅಂಕೋಲಾ ಅರಣ್ಯದಲ್ಲಿನ ಈ ಎರಡು ಹುಲಿಗಳು ಗುಳೆ ಮತ್ತು ಕೋಟಿಬಾವಿ ಅರಣ್ಯ ಪ್ರದೇಶಗಳಲ್ಲಿ ಪತ್ತೆಯಾಗಿವೆ. ಸಾಮಾನ್ಯವಾಗಿ ಹುಲಿಗಳು ತಮ್ಮ ಮೂಲ ವಾಸಸ್ಥಳವನ್ನು ಬಿಟ್ಟು ಹೊಸ ಪ್ರದೇಶದಲ್ಲಿ ನೆಲೆಸುವುದು ಅಪರೂಪ.

ಹುಲಿಗಳು ತಮ್ಮ ಪ್ರದೇಶದ ಮೇಲೆ ಅತ್ಯಂತ ಪ್ರಬಲ ಸ್ವಾಮ್ಯಭಾವ ಹೊಂದಿರುವ ಪ್ರಾಣಿಗಳು. ಸಾಮಾನ್ಯವಾಗಿ ಅವು 6 ರಿಂದ 12 ಕಿಲೋಮೀಟರ್ ವ್ಯಾಪ್ತಿಯ ತಮ್ಮ ವಾಸಸ್ಥಳವನ್ನು ಕಾಪಾಡಿಕೊಳ್ಳುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವು ಸಮೀಪದ ಅರಣ್ಯಗಳಿಗೆ ಪ್ರವೇಶಿಸುತ್ತಿರುವುದು ಹಾಗೂ ಕೆಲವು ಸಂದರ್ಭಗಳಲ್ಲಿ ನೂರಾರು ಕಿಲೋಮೀಟರ್ ದೂರ ಪ್ರಯಾಣಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪಾಲಕ ಕುಮಾರ್ ಪುಷ್ಕರ್ ಹೇಳುತ್ತಾರೆ.

ಇಂತಹ ವರ್ತನೆಯನ್ನು ಅಧ್ಯಯನ ಮಾಡಲು ವಿಶೇಷವಾಗಿ ಕ್ಯಾಮೆರಾ ಟ್ರ್ಯಾಪ್‌ಗಳಂತಹ ತಂತ್ರಜ್ಞಾನ ಬಹಳ ಸಹಕಾರಿಯಾಗಿದೆ ಎಂದು ಅವರು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಅಂಕೋಲಾ ಅರಣ್ಯದಲ್ಲಿ ಹುಲಿಗಳ ಉಪಸ್ಥಿತಿ ದಾಖಲಾಗಿರುವುದು ಇದೇ ಮೊದಲ ಬಾರಿ. ಕಾರವಾರ ಅರಣ್ಯ ಪ್ರದೇಶವು ಸುಮಾರು 1,18,561.352 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, ಇದು ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿದೆ. ಇಲ್ಲಿ ಪೊದೆ ಅರಣ್ಯ, ಒಣ ಪರ್ಣಪಾತಿ, ತೇವಾಂಶಯುಕ್ತ ಪರ್ಣಪಾತಿ, ಅರೆ ಸದಾಹರಿದ್ವರ್ಣ ಹಾಗೂ ಸದಾಹರಿದ್ವರ್ಣ ಅರಣ್ಯಗಳ ಮಿಶ್ರಣವಿದೆ.

ಅಂಕೋಲಾ ಉಪ ವಿಭಾಗವು 24,768.411 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಹೊಂದಿದ್ದು, ಏಳು ಅರಣ್ಯ ವಿಭಾಗಗಳನ್ನು ಒಳಗೊಂಡಿದೆ. ಇಲ್ಲಿ ಚಿರತೆಗಳು ಹಾಗೂ ಕರಡಿಗಳ ಉತ್ತಮ ಸಂಖ್ಯೆಯ ಜೊತೆಗೆ ಕಾಡೆಮ್ಮೆ (ಗೌರ್), ಸಾಂಬಾರ್ ಜಿಂಕೆ, ಚುಕ್ಕೆ ಜಿಂಕೆ, ಬೊಗಳುವ ಜಿಂಕೆ, ಮುಳ್ಳುಹಂದಿ ಮತ್ತು ಕಾಡುಹಂದಿಗಳಂತಹ ಸಸ್ಯಾಹಾರಿ ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವು ಹುಲಿಗಳ ಪ್ರಮುಖ ಆಹಾರವಾಗಿವೆ.

ಇಂತಹ ಘಟನೆಗಳು ಈ ಹಿಂದೆಯೂ ನಡೆದಿದ್ದರೂ, ಹುಲಿಗಳ ವಲಸೆ ಮಾದರಿಯನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡಬೇಕೆಂದು ವನ್ಯಜೀವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಲವು ಸಂದರ್ಭಗಳಲ್ಲಿ ಹುಲಿಗಳು ಬಹಳ ದೂರ ಪ್ರಯಾಣಿಸಿ ಹೊಸ ಪ್ರದೇಶಗಳಲ್ಲಿ ನೆಲೆಸಿರುವುದನ್ನು ನೋಡಿದ್ದೇವೆ. ವಿಶೇಷವಾಗಿ ಗಂಡು ಹುಲಿಗಳು ಇಂತಹ ಸಾಹಸಕ್ಕೆ ಮುಂದಾಗುತ್ತವೆ. ಆದರೆ ಈ ವಲಸೆ ಮಾದರಿಯನ್ನು ಇನ್ನಷ್ಟು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು. ಇದಕ್ಕಾಗಿ ವ್ಯವಸ್ಥಿತ ಸಂಶೋಧನೆ ಅಗತ್ಯ ಎಂದು ಖ್ಯಾತ ವನ್ಯಜೀವಿ ತಜ್ಞ ಕೆ. ಉಲ್ಲಾಸ್ ಕಾರಂತ್ ಹೇಳಿದ್ದಾರೆ.

The tiger which was camera-trapped in Nagarhole
ಬಂಡೀಪುರದಲ್ಲಿ ಸೆರೆ ಸಿಕ್ಕ ಹುಲಿ, 5 ಮರಿಗಳು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಸ್ಥಳಾಂತರ..!

ಹುಲಿಗಳು ದೂರದೂರಿಗೆ ವಲಸೆ ಹೋದ ನಾಲ್ಕು ಪ್ರಮುಖ ಘಟನೆಗಳು

ಮೊದಲ ಘಟನೆಯಲ್ಲಿ, 2006ರಲ್ಲಿ ಭದ್ರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾಗಿದ್ದ ಒಂದು ಹುಲಿ ಮರಿಯು, ಸುಮಾರು 270 ಕಿಲೋಮೀಟರ್ ದೂರ ಪ್ರಯಾಣಿಸಿದ ಬಳಿಕ 2008ರಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮತ್ತೆ ಪತ್ತೆಯಾಗಿತ್ತು.

ಇನ್ನೊಂದು ಘಟನೆಯಲ್ಲಿ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಈಸೂರು ಸಮೀಪದ ಗಾಮಾ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಕೊಂದು ಹಾಕಿದ್ದ ಹುಲಿಯು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ರೆ ಅರಣ್ಯ ವ್ಯಾಪ್ತಿಯಿಂದ ಸುಮಾರು 280 ಕಿಲೋಮೀಟರ್ ದೂರ ಪ್ರಯಾಣಿಸಿತ್ತು.

ನಂತರ ಆ ಹುಲಿಯನ್ನು ಭದ್ರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಬಿಡುಗಡೆಗೊಂಡ ಕೆಲವೇ ತಿಂಗಳಲ್ಲಿ ಮತ್ತೊಂದು ಹುಲಿಯೊಂದಿಗೆ ನಡೆದ ಸೆಣಸಾಟದಲ್ಲಿ ಮೃತಪಟ್ಟಿತ್ತು.

ಮತ್ತೊಂದು ಘಟನೆಯಲ್ಲಿ, ಮಹಾರಾಷ್ಟ್ರದಿಂದ ಬಂದ ಹುಲಿಯೊಂದು ಸುಮಾರು 250 ಕಿಲೋಮೀಟರ್ ಪ್ರಯಾಣಿಸಿ ಕಾಳಿ ಹುಲಿ ಸಂರಕ್ಷಿತ ಪ್ರದೇಶವನ್ನೇ ತನ್ನ ಹೊಸ ವಾಸಸ್ಥಳವನ್ನಾಗಿ ಮಾಡಿಕೊಂಡಿತ್ತು.

ಅಂಕೋಲಾದಲ್ಲಿ ಪತ್ತೆಯಾದ ಹುಲಿ ಸುಮಾರು 350 ಕಿಲೋಮೀಟರ್ ದೂರ ಪ್ರಯಾಣಿಸಿದ್ದು, ಇದುವರೆಗೆ ದಾಖಲಾಗಿರುವ ಘಟನೆಗಳಲ್ಲಿ ಅತಿ ಹೆಚ್ಚು ದೂರ ಸಂಚರಿಸಿದ ಹುಲಿಯಾಗಿರಬಹುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಅಂಕೋಲಾ ಅರಣ್ಯದಲ್ಲಿ ಹುಲಿ
ಅಂಕೋಲಾ ಅರಣ್ಯದಲ್ಲಿ ಹುಲಿ

ಆಸಕ್ತಿದಾಯಕ ಸಂಗತಿಯೆಂದರೆ, ದೂರ ಪ್ರಯಾಣಿಸಿದ ನಾಲ್ಕು ಹುಲಿಗಳಲ್ಲಿ ಮೂರೂ ಕಾಳಿ ಹುಲಿ ಸಂರಕ್ಷಿತ ಪ್ರದೇಶವನ್ನೇ ತಮ್ಮ ನೆಲೆಯಾಗಿ ಆರಿಸಿಕೊಂಡಿವೆ.

ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ್ ರೆಡ್ಡಿ “ಕಾಳಿ ಹುಲಿ ಸಂರಕ್ಷಿತ ಪ್ರದೇಶವು ಒಂದು ರೀತಿಯ ‘ಸಿಂಕ್’ (ಆಕರ್ಷಕ ಆಶ್ರಯ ಪ್ರದೇಶ) ಆಗಿ ಕಾರ್ಯನಿರ್ವಹಿಸುತ್ತದೆ. ಇಲ್ಲಿನ ಅರಣ್ಯ ವ್ಯಾಪಕವಾಗಿದ್ದು, ಒಂದು ಕಡೆ ಗೋವಾದ ಅರಣ್ಯಗಳಿಗೆ, ಮತ್ತೊಂದು ಕಡೆ ಭೀಮಗಡ ವನ್ಯಜೀವಿ ಅಭಯಾರಣ್ಯಕ್ಕೆ ನಿರಂತರ ಸಂಪರ್ಕ ಹೊಂದಿದೆ. ಜಿಲ್ಲೆಯ ವ್ಯಾಪ್ತಿಯ ಅರಣ್ಯಗಳು ಕಾಳಿ ಸಂರಕ್ಷಿತ ಪ್ರದೇಶದ ಅರಣ್ಯಗಳಂತೆಯೇ ಸ್ವರೂಪ ಹೊಂದಿವೆ. ಜೊತೆಗೆ ಇಲ್ಲಿ ಹುಲಿಗಳಿಗೆ ಸಾಕಷ್ಟು ಆಹಾರವಾಗುವ ಪ್ರಾಣಿಗಳ ಸಾಂದ್ರತೆಯೂ ಉತ್ತಮವಾಗಿದೆ ಎಂದು ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com