

ಬೆಂಗಳೂರು: ಮೂರು ರಾಜ್ಯಗಳಲ್ಲಿ ನಾಲ್ಕು ವೋಟರ್ ಐಡಿ ಕಾರ್ಡ್ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಅವರಿಗೆ ಬೆಂಗಳೂರು ಕೋರ್ಟ್ ಶುಕ್ರವಾರ ಬಿಗ್ ರಿಲೀಫ್ ನೀಡಿದ್ದು, ನಟನಿಗೆ ಜಾಮೀನು ಮಂಜೂರು ಮಾಡಿದೆ.
ನಟ ಪ್ರಕಾಶ್ ರೈ ಅವರು ದೇಶದ ವಿವಿಧ ರಾಜ್ಯಗಳಲ್ಲಿ ನಾಲ್ಕು ಮತದಾರರ ಚೀಟಿ ಹೊಂದಿದ್ದಾರೆ ಎಂದು ಆರೋಪಿಸಿ ಕೆ.ದಿಲೀಪ್ ಕುಮಾರ್ ಎಂಬುವವರು ಕೇಸ್ ದಾಖಲಿಸಿದ್ದರು. ಈ ಸಂಬಂಧ ಬೆಂಗಳೂರಿನ 48ನೇ ಮ್ಯಾಜಿಸ್ಟ್ರೇಟ್ ಕೋರ್ಟ್ ನಟನ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿತ್ತು. ವಾರಂಟ್ ರೀಕಾಲ್ ಮಾಡಿಸಲು ಪ್ರಕಾಶ್ ರೈ ಅವರು ಕೋರ್ಟ್ ಹಾಜರಾಗಿದ್ದರು.
ನಟ ಪ್ರಕಾಶ್ ರೈ ಪರ ವಕೀಲರು ಇಂದು ಬೆಳಗ್ಗೆ ವಾರಂಟ್ ಹಿಂಪಡೆಯುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಪ್ರಕರಣದಲ್ಲಿ ಜಾಮೀನು ಪಡೆಯಲು ನಟ ಖುದ್ದು ಕೋರ್ಟ್ಗೆ ಹಾಜರಾಗಿದ್ದರು.
ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ನಟನಿಗೆ ಜಾಮೀನು ಮಂಜೂರು ಮಾಡಿದ್ದು, 4 ಸಾವಿರ ನಗದು ಶ್ಯೂರಿಟಿ ನೀಡಲು ಕೋರ್ಟ್ ಸೂಚಿಸಿದೆ. ಬಳಿಕ ಪ್ರಕಾಶ್ ರೈ ಅವರು ಕೋರ್ಟ್ನಿಂದ ನಿರ್ಗಮಿಸಿದ್ದು, ಸದ್ಯ ಬಂಧನ ಭೀತಿಯಿಂದ ಪಾರಾಗಿದ್ದಾರೆ.
ಪ್ರಕಾಶ್ ರೈ ಅವರು ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮತದಾರರ ಗುರುತಿನ ಚೀಟಿಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಚುನಾವಣಾ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಗೆ ಕೇವಲ ಒಂದು ಮಾನ್ಯ ಮತದಾರರ ಗುರುತಿನ ಚೀಟಿ ಪಡೆಯಲು ಮಾತ್ರ ಅವಕಾಶವಿದೆ ಹಾಗೂ ಅವರು ಒಂದೇ ಸ್ಥಳದಲ್ಲಿ ಮತದಾರರಾಗಿ ನೋಂದಾಯಿತರಾಗಿರಬೇಕು.