

ನವದೆಹಲಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಯನ್ನು ಡಿಸೆಂಬರ್ ಒಳಗೆ ನಡೆಸಲು ಅನುಮತಿ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ರಾಜ್ಯ ಸರ್ಕಾರ ಅರ್ಜಿ ಸ್ಲಲಿಸಿದೆ. ರಾಜ್ಯದಲ್ಲಿ ಎಸ್ಐಆರ್ ನಡೆಯುತ್ತಿರುವುದರಿಂದ ಆಗಸ್ಟ್ನಲ್ಲಿ ಚುನಾವಣೆ ನಡೆಸುವುದು ಕಷ್ಟ ಎಂದು ರಾಜ್ಯ ಸರ್ಕಾರದ ವಾದ ಮಂಡಿಸಿದೆ. .
ಬೆಂಗಳೂರಿನಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ. ಕರಡು ಮತದಾರರ ಪಟ್ಟಿ ಪ್ರಕಟಣೆ, ಆಕ್ಷೇಪಣೆಗಳ ಸ್ವೀಕಾರ ಮತ್ತು ಅವುಗಳ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಚುನಾವಣೆ ನಡೆಸುವ ಸಿಬ್ಬಂದಿಯೇ ಎಸ್ಐಆರ್ ಕೆಲಸದಲ್ಲೂ ನಿರತರಾಗಿದ್ದಾರೆ.
ಸುಮಾರು 8,972 ಬಿಎಲ್ಓಗಳು, 938 ಮೇಲ್ವಿಚಾರಕರು, 28 ಇಆರ್ಒ, 75 ಸಹಾಯಕ ಇಆರ್ಒಗಳು ಸೇರಿದಂತೆ ಸಾವಿರಾರು ಸಿಬ್ಬಂದಿ ಈಗಾಗಲೇ ಎಸ್ಐಆರ್ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದೆ.
ಐದು ಬೆಂಗಳೂರು ನಗರ ಪಾಲಿಕೆಗಳಿಗೆ ಚುನಾವಣೆಗಳುನಡೆಯಬೇಕಾಗಿತ್ತು. 31 ಆಗಸ್ಟ್ 2026 ರೊಳಗೆ ಚುನಾವಣೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. 20 ಮೇ 2026 ರ ಆದೇಶವನ್ನು ಮಾರ್ಪಡಿಸುವಂತೆ ಸರ್ಕಾರ ಕೋರಿದೆ.
ಜಿಬಿಎ ಚುನಾವಣೆಗೆ ಸುಮಾರು 60 ಸಾವಿರ ಸಿಬ್ಬಂದಿ ಅಗತ್ಯವಿದೆ. ಮತದಾನ ಕೇಂದ್ರ ಸಿಬ್ಬಂದಿ, ರಿಟರ್ನಿಂಗ್ ಆಫಿಸರ್, ಭದ್ರತಾ ಸಿಬ್ಬಂದಿ ಸೇರಿದಂತೆ ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲ ಬೇಕಾಗುತ್ತದೆ. ಇದೇ ವೇಳೆ, ಎಸ್ಐಆರ್ ಕೂಡ ನಡೆಯುತ್ತಿರುವುದರಿಂದ ಸಿಬ್ಬಂದಿ ಕೊರತೆ ಉಂಟಾಗುತ್ತದೆ.
ಬೆಂಗಳೂರು ಮತದಾರರ ಸಂಖ್ಯೆ ಅತ್ಯಂತ ದೊಡ್ಡದಾಗಿದ್ದು, ಸುಮಾರು 1.03 ಕೋಟಿ ಮತದಾರರಿದ್ದಾರೆ. ಸುಮಾರು 40 ಲಕ್ಷ ಮನೆಗಳಿಗೆ ಭೇಟಿ ನೀಡಿ ಮತಪಟ್ಟಿಪರಿಶೀಲನೆ ನಡೆಸಬೇಕಿದೆ, ಕರಡು ಮತದಾರರ ಪಟ್ಟಿಗೆ ಲಕ್ಷಾಂತರ ಆಕ್ಷೇಪಣೆಗಳು ಬರಬಹುದು. ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಒಂದು ಲಕ್ಷಕ್ಕೂ ಹೆಚ್ಚು ಅರ್ಜಿಗಳು/ಆಕ್ಷೇಪಣೆಗಳು ಬರಬಹುದು ಎಂದು ಸರ್ಕಾರ ಅಂದಾಜಿಸಿದೆ.
ಪ್ರತಿಯೊಂದನ್ನೂ ವಿಚಾರಣೆ ನಡೆಸಿ ಆದೇಶ ನೀಡುವುದು ಕಡ್ಡಾಯವಾಗಿದೆ. ನಿಖರ ಮತದಾರರ ಪಟ್ಟಿಯಿಲ್ಲದೆ ಚುನಾವಣೆ ನಡೆಸುವುದು ಸೂಕ್ತವಲ್ಲ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಅಂತಿಮ ಹಾಗೂ ಸರಿಯಾದ ಮತದಾರರ ಪಟ್ಟಿ ಅಗತ್ಯ. ಹೀಗಾಗಿ, ಚುನಾವಣೆ ನಡೆಸಲು ಡಿಸೆಂಬರ್ತನಕ ಸಮಯ ಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.