'ರಾಮ ಮಂದಿರ ನಿರ್ಮಾಣದ ಶ್ರೇಯಸ್ಸು ಪಡೆದವರು 'ಚಂದಾ ಚೋರಿ'ಯ ಹೊಣೆಯನ್ನೂ ಹೊರಿ': RSS ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ-Video

ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನೂ ಪ್ರಶ್ನಿಸಿದರು. ದೇಣಿಗೆ ಹಣ ಕಳವು ಮಾಡಿದವರ ಹೆಸರುಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ ಅವರು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಬಹಿರಂಗ ಸುದ್ದಿಗೋಷ್ಠಿ ನಡೆಸುವಂತೆ ಸವಾಲು ಹಾಕಿದರು.
Priyank Kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಅವರು ಶುಕ್ರವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಮ ಮಂದಿರ ನಿರ್ಮಾಣದ ಶ್ರೇಯಸ್ಸು ಪಡೆದಿದ್ದರೆ, ದೇಣಿಗೆ ಹಣದ ಕಳ್ಳತನದ ಹೊಣೆಯನ್ನೂ ಸಂಘವೇ ಹೊತ್ತುಕೊಳ್ಳಬೇಕು ಎಂದು ವ್ಯಂಗ್ಯವಾಡಿದರು.

ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನೂ ಪ್ರಶ್ನಿಸಿದರು. ದೇಣಿಗೆ ಹಣ ಕಳವು ಮಾಡಿದವರ ಹೆಸರುಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ ಅವರು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಬಹಿರಂಗ ಸುದ್ದಿಗೋಷ್ಠಿ ನಡೆಸುವಂತೆ ಸವಾಲು ಹಾಕಿದರು.

ರಾಮ ಮಂದಿರ ನಿರ್ಮಾಣದ ಶ್ರೇಯಸ್ಸನ್ನು ನೀವು ಪಡೆದಿದ್ದರೆ, 'ಚಂದಾ ಚೋರಿ'ಯ ಶ್ರೇಯಸ್ಸನ್ನೂ ನೀವೇ ಪಡೆಯಬೇಕು. ನೀವು ನೋಂದಾಯಿತ ಸಂಸ್ಥೆಯಲ್ಲದಿದ್ದರೂ 'ದಕ್ಷಿಣೆ' ಪಡೆಯುತ್ತೀರಿ. ಅದರಲ್ಲಿ ಎಷ್ಟು ಹಣ ನಿಮ್ಮ ಬಳಿ ಬಂದಿದೆ? ನಿಮ್ಮೊಳಗೇ ಕುಳಿತು ಚರ್ಚೆ ಮಾಡುವ ಬದಲು ಸಾರ್ವಜನಿಕರ ಮುಂದೆ ಬನ್ನಿ. ಕಳ್ಳರು ಯಾರು, ಎಷ್ಟು ಹಣ ನಿಮ್ಮ ಬಳಿ ಬಂದಿದೆ, ನೀವು ಮತ್ತು ಪ್ರಧಾನಮಂತ್ರಿ ಏಕೆ ಮೌನವಾಗಿದ್ದೀರಿ ಎಂಬುದನ್ನು ತಿಳಿಸಿ. ಮೋಹನ್ ಭಾಗವತ್ ಹಾಗೂ ಉಳಿದವರಿಗೆ ನಾನು ಬಹಿರಂಗ ಸುದ್ದಿಗೋಷ್ಠಿ ನಡೆಸುವಂತೆ ಸವಾಲು ಹಾಕುತ್ತೇನೆ ಎಂದು ಹೇಳಿದರು.

ರಾಮ ಮಂದಿರದ ದೇಣಿಗೆ ಹಣದ ದುರುಪಯೋಗದ ಆರೋಪ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಈ ಹೇಳಿಕೆ ನೀಡಿದ್ದಾರೆ.

ಇದೇ ವೇಳೆ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ಕುರಿತು ಪ್ರಧಾನಿ ಮೋದಿ ವಿರುದ್ಧವೂ ಅವರು ಟೀಕಾಪ್ರಹಾರ ನಡೆಸಿದರು. ಪ್ರಧಾನಿ ಮೋದಿ ನಡೆಸುವ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮವನ್ನು ಉಲ್ಲೇಖಿಸಿದ ಅವರು, "ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪೇ ಚರ್ಚಾ" ಅಥವಾ "ಒಎಸ್‌ಎಂ (ಆನ್-ಸ್ಕ್ರೀನ್ ಮಾರ್ಕಿಂಗ್) ಪೇ ಚರ್ಚಾ" ಯಾವಾಗ ನಡೆಸುತ್ತಾರೆ ಎಂದು ಪ್ರಶ್ನಿಸಿದರು.

ಕಳೆದ 10 ವರ್ಷಗಳಲ್ಲಿ ಸುಮಾರು 90 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿವೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.

Priyank Kharge
ಸರ್ಕಾರ ಅಸಮರ್ಥವಾಗಿ ಜನರ ಗೊಂದಲ, ತಳಮಳ ಹೆಚ್ಚಾದಾಗ ಕಾಕ್ರೋಚ್ ಜನತಾ ಪಾರ್ಟಿಯಂಥವು ಹುಟ್ಟಿಕೊಳ್ಳುತ್ತದೆ: ಪ್ರಿಯಾಂಕ್ ಖರ್ಗೆ; Video

ಸರ್ಕಾರದ ಅಸಮರ್ಥತೆಯಿಂದ ಲಕ್ಷಾಂತರ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸಿದ್ದಾರೆ. ಇದಕ್ಕೆ ಯಾರು ಹೊಣೆ? ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಎಲ್ಲಿದ್ದಾರೆ? ಅವರು ಇನ್ನೂ ರಾಜೀನಾಮೆ ನೀಡದಿರುವುದೇಕೆ? ಕಳೆದ 10 ವರ್ಷಗಳಲ್ಲಿ ಸುಮಾರು 90 ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಆದರೆ ಸರ್ಕಾರಕ್ಕೆ ಅದರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಭಾರತದ ಭವಿಷ್ಯವನ್ನು ಹೀಗೆ ನೋಡಿಕೊಳ್ಳುತ್ತೀರಾ? 'ವಿಕಸಿತ ಭಾರತ' ನಿರ್ಮಿಸಬೇಕಾದ ಯುವಜನರೊಂದಿಗೆ ಇದೇ ರೀತಿಯ ವರ್ತನೆಯೇ? ಪ್ರಧಾನಮಂತ್ರಿ 'ಪರೀಕ್ಷಾ ಪೇ ಚರ್ಚಾ' ನಡೆಸಲು ಆಸಕ್ತಿ ತೋರಿಸುತ್ತಾರೆ. ಹಾಗಾದರೆ 'ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪೇ ಚರ್ಚಾ' ಅಥವಾ 'ಒಎಸ್‌ಎಂ ಪೇ ಚರ್ಚಾ' ಯಾವಾಗ ನಡೆಸುತ್ತಾರೆ?" ಎಂದು ಪ್ರಶ್ನಿಸಿದರು.

ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ, ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಪ್ರಶ್ನೆಪತ್ರಿಕೆ ಸೋರಿಕೆ, ಯುಜಿಸಿ-ನೆಟ್ ಪರೀಕ್ಷೆಯ ರದ್ದು ಹಾಗೂ ಸಿಬಿಎಸ್‌ಇ ಉತ್ತರಪತ್ರಿಕೆಗಳ ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಸಂಬಂಧಿತ ವ್ಯತ್ಯಾಸಗಳು ದೇಶದಾದ್ಯಂತ ಚರ್ಚೆಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಪ್ರಿಯಾಂಕ್ ಖರ್ಗೆ ಈ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com