

ಮೈಸೂರು: ದಿಗ್ಗಜ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರಿಗೆ ಅಂತಿಮ ನಮನ ಸಲ್ಲಿಸಲು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಮುಖಂಡರು ಭಾರಿ ಸಂಖ್ಯೆಯಲ್ಲಿ ಸೇರಿ ಅಭಿಮಾನಿಗಳ ಮುಖದಲ್ಲಿ ದುಃಖದ ವಾತಾವರಣ ಮಡುಗಟ್ಟಿತ್ತು.
ಅಂತಿಮ ನಮನ ಸಲ್ಲಿಸಿದ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, ಜಾನಕಿ ಅವರ ಅಂತ್ಯಸಂಸ್ಕಾರ ನಡೆಯಲಿರುವ ಹೆಚ್.ಡಿ. ಕೋಟೆ ತಾಲೂಕಿನ ಕಣಿಯನಹುಂಡಿಯಲ್ಲಿ ಅವರ ಸ್ಮಾರಕ ನಿರ್ಮಿಸಲು ಎಲ್ಲ ಕಲಾವಿದರು ಒಟ್ಟಾಗಿ ಮುಂದಾಗಲಿದ್ದಾರೆ ಎಂದು ತಿಳಿಸಿದರು. ಇಂದು ಅಪರಾಹ್ನ ಸುಮಾರು 3 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ಜಯಮಾಲಾ, "ಮೈಸೂರಿನ ರಾಜಾರಾಂ ಅವರ ಪತ್ನಿಯಾಗಿದ್ದ ಕಾರಣ ಜಾನಕಿ ಅವರು ಮೈಸೂರಿನ ಸೊಸೆ. ತಮ್ಮ ಜೀವನಯಾತ್ರೆಯನ್ನು ಮೈಸೂರಿನಲ್ಲೇ ಮುಗಿಸಿದ್ದಾರೆ. ಅವರ ಸಂಗೀತ ಸಾಧನೆಯನ್ನು ಅಧ್ಯಯನ ಮಾಡಿ ದಾಖಲಿಸುವುದಕ್ಕಾಗಿ ಹಾಗೂ ಮುಂದಿನ ಪೀಳಿಗೆಗೆ ಪ್ರೇರಣೆಯಾಗುವಂತೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಸ್. ಜಾನಕಿ ಅಧ್ಯಯನ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಗಾಯಕ ವಿಜಯ್ ಪ್ರಕಾಶ್ ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದ ಮಕ್ಕಳ ತಂಡದೊಂದಿಗೆ ಆಗಮಿಸಿ ಎಸ್. ಜಾನಕಿ ಅವರ ಜನಪ್ರಿಯ ಹಾಡುಗಳಾದ 'ನೋಡು ಬಾ ನೋಡು ಬಾ ನಮ್ಮೂರ...' ಸೇರಿದಂತೆ ಹಲವು ಗೀತೆಗಳನ್ನು ಹಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಜಾನಕಿ ಅವರು ಎಲ್ಲ ಗಾಯಕ-ಗಾಯಕಿಯರಿಗೂ ಆದರ್ಶ ಮತ್ತು ಸ್ಫೂರ್ತಿ ಎಂದು ವಿಜಯ್ ಪ್ರಕಾಶ್ ಹೇಳಿದರು.
ನಟಿ ತಾರಾ, ಜಾನಕಿ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ತಮ್ಮ ಅಮರ ಗೀತೆಗಳ ಮೂಲಕ ಎಂದೆಂದಿಗೂ ಜೀವಂತವಾಗಿರುತ್ತಾರೆ ಎಂದು ಭಾವುಕರಾದರು.
ಜಾನಕಿ ಅವರ ಆರೈಕೆ ಹಾಗೂ ಅಂತಿಮ ವಿಧಿವಿಧಾನಗಳ ವ್ಯವಸ್ಥೆಯನ್ನು ಅವರ ಆತ್ಮೀಯ ಅಭಿಮಾನಿಗಳಾದ ನವೀನ್ ಮತ್ತು ಪವನ್ ನೋಡಿಕೊಳ್ಳುತ್ತಿದ್ದಾರೆ. ಹೆಚ್.ಡಿ. ಕೋಟೆ ತಾಲೂಕಿನ ಕಣಿಯನಹುಂಡಿಯಲ್ಲಿರುವ ನವೀನ್ ಮತ್ತು ಪವನ್ ಅವರ ತೋಟದಲ್ಲೇ ಅಂತ್ಯಸಂಸ್ಕಾರ ನಡೆಯಲಿದೆ.
ಜಾನಕಿ ಅವರ ಮೊಮ್ಮಗಳು ಅಪ್ಸರಾ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಚಿತ್ರ ನಿರ್ಮಾಪಕ ಕೆ. ಮಂಜು, ನಟ ಜಿಮ್ ರವಿ, ನಟ ಜಯಪ್ರಕಾಶ್, ಯೋಗೀಶ್ ದ್ವಾರಕೀಶ್ ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು ಅಂತಿಮ ನಮನ ಸಲ್ಲಿಸಿದರು.
ರಾಜಕೀಯ ಮುಖಂಡರಾದ ಹೆಚ್.ಸಿ. ಮಹದೇವಪ್ಪ, ಟಿ.ಎಸ್. ಶ್ರೀವತ್ಸ, ಶ್ರೀರಾಮುಲು ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದು, ಜಾನಕಿ ಅವರಿಗೆ ಗೌರವ ನಮನ ಸಲ್ಲಿಸಿದರು.
ಉರಿಲಿಂಗಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರೂ ಆಗಮಿಸಿ ದಿಗ್ಗಜ ಗಾಯಕಿಗೆ ಅಂತಿಮ ಶ್ರದ್ಧಾಂಜಲಿ ಅರ್ಪಿಸಿದರು.