RSS ನವರು ಬ್ರಹ್ಮಚಾರಿಗಳಲ್ವಾ? ಅವರೇಕೆ ಜನಸಂಖ್ಯೆ ಬಗ್ಗೆ ಮಾತಾಡ್ತಾರೆ: 3-4 ಮಕ್ಕಳು ಹುಟ್ಟಿಸಿ, ಧರ್ಮ ರಕ್ಷಣೆಗೆ ಬಿಡಿ ಎಂದು ಏಕೆ ಹೇಳ್ತಾರೆ? ಖರ್ಗೆ ಲೇವಡಿ

ರಾಮ ಮಂದಿರ ದೇಣಿಗೆ ಅಕ್ರಮದ ವಿಚಾರಕ್ಕೆ ಆರ್‌ಎಸ್‌ಎಸ್‌ನಿಂದ ವಿಷಾದ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಾಗಾದರೆ ಕದ್ದಿದ್ದಾರೆ ಅಂತ ವಿಷಾದ ವ್ಯಕ್ತಪಡಿಸಿದ್ದಾರಾ? ಮೊದಲು ಅವರು ನಮ್ಮಿಂದ ತಪ್ಪಾಗಿದೆ ಅಂತ ಒಪ್ಪಿಕೊಳ್ಳಬೇಕು.
Priyank Kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ಪಾಕಿಸ್ತಾನ ಜೊತೆ ಸಂಬಂಧ ಬೆಳೆಸಬೇಕು ಎಂಬುದು ಆರ್‌ಎಸ್‌ಎಸ್‌ನ ಅಭಿಪ್ರಾಯ. ಹಾಗಾದ್ರೆ ನರೇಂದ್ರ ಮೋದಿ ವಿದೇಶಾಂಗ ನೀತಿಯನ್ನು ಆರ್‌ಎಸ್‌ಎಸ್‌ಗೆ ಕೊಟ್ಟಿದ್ದಾರಾ? ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಮ ಮಂದಿರ ದೇಣಿಗೆ ಅಕ್ರಮದ ವಿಚಾರಕ್ಕೆ ಆರ್‌ಎಸ್‌ಎಸ್‌ನಿಂದ ವಿಷಾದ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಾಗಾದರೆ ಕದ್ದಿದ್ದಾರೆ ಅಂತ ವಿಷಾದ ವ್ಯಕ್ತಪಡಿಸಿದ್ದಾರಾ? ಮೊದಲು ಅವರು ನಮ್ಮಿಂದ ತಪ್ಪಾಗಿದೆ ಅಂತ ಒಪ್ಪಿಕೊಳ್ಳಬೇಕು. ತಪ್ಪು ಒಪ್ಪಿಕೊಂಡು ಸಾರ್ವಜನಿಕರಲ್ಲಿ ಕ್ಷಮೆ ಕೇಳಬೇಕು. ಸುಮ್ಮನೆ ಪ್ರೆಸ್ ನೋಟ್ ಕೊಡೋದು ಅಲ್ಲ ಎಂದು ಕಿಡಿಕಾರಿದ್ದಾರೆ.

ಎಲ್ಲಾ ವಿಹೆಚ್‌ಪಿ ಪದಾಧಿಕಾರಿಗಳು, ಕಾರ್ಯಕರ್ತರು ಅಕ್ರಮ ಮಾಡಿದ್ದಾರೆ. ಆರ್‌ಎಸ್‌ಎಸ್‌ದು ಅಧಿಕೃತ ಅಂಗ ಸಂಸ್ಥೆ ವಿಹೆಚ್‌ಪಿ. ಇದನ್ನು ಹುಟ್ಟುಹಾಕಿದ್ದೇ ಆರ್‌ಎಸ್‌ಎಸ್. ಅಧಿಕೃತವಾಗಿ ಆರ್‌ಎಸ್‌ಎಸ್-ವಿಹೆಚ್‌ಪಿಗೆ ನಂಟಿದೆ. ಅವರೆಲ್ಲ ಸಂಬಂಧಿಕರೇ ಆಗಿದ್ದಾರೆ. ವಿಷಾದ ವ್ಯಕ್ತಪಡಿಸೋದಲ್ಲ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು.

ಮಿಕ್ಕಿದೆಲ್ಲ ಪಬ್ಲಿಕ್‌ನಲ್ಲಿ ಮಾಡ್ತೀರಾ. ಮೋಹನ್ ಭಾಗವತ್ ನಾವು ಮುಚ್ಚಿಮರೆ ಮಾಡಲ್ಲ ಅಂದಿದ್ದಾರೆ. ಹಾಗಾದ್ರೆ ಇದನ್ನ ಯಾಕೆ ಮುಚ್ಚುಮರೆ ಮಾಡಿದ್ರಿ. ಸಾರ್ವಜನಿಕವಾಗಿ ಬಂದು ಸಾರಿ ಕೇಳಿ. ಭಕ್ತರ ಭಾವನೆಗೆ ನೋವಾಗಿದೆ ಎಂದಿದ್ದಾರೆ.

Priyank Kharge
ಪ್ರತಿ ಠಾಣೆಗಳಲ್ಲಿ 2ನೇ ಭಾನುವಾರ ಪರಿಶಿಷ್ಟರ ಸಭೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆದೇಶ

ಜನಸಂಖ್ಯಾ ನಿಯಂತ್ರಣದ ಬಗ್ಗೆ ಪ್ರಸ್ತಾಪಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜನಸಂಖ್ಯೆ ಬಗ್ಗೆ ಆರ್‌ಎಸ್‌ಎಸ್ ಅವರು ಮಾತಾಡ್ತಾರೆ. ಅವರು ಬ್ರಹ್ಮಚಾರಿಗಳು ಅಲ್ಲವಾ? ಬೇರೆ ಅವರಿಗೆ 3-4 ಮಕ್ಕಳು ಹುಟ್ಟಿಸಿ, ಅವರನ್ನು ಧರ್ಮ ರಕ್ಷಣೆ, ಗೋರಕ್ಷಣೆಗೆ ಬಿಡಿ ಅಂತ ಹೇಳ್ತಾರೆ.

ಇವರು ಬ್ರಹ್ಮಚಾರಿಗಳು ಅಂತ ಓಡಾಡ್ತಾರೆ. ಆರ್‌ಎಸ್‌ಎಸ್ ನೀತಿಯಲ್ಲಿ ಸಾಕಷ್ಟು ಗೊಂದಲ ಇದೆ. ಅವರಿಗೆ ಅವರ ಸಂಸ್ಥೆ ಏನು ಮಾಡ್ತಿದೆ? ಹೇಗೆ ಮಾಡ್ತಿದೆ? ಅವರ ಸಂವಿಧಾನ ಏನಿದೆ? ಅಂತ ಗೊತ್ತೇ ಇಲ್ಲ. ಸಂವಿಧಾನ ತೆಗೆದು ಓದಿ ಎಂದು ಲೇವಡಿ ಮಾಡಿದ್ದಾರೆ.

ನಮ್ಮ ದೇಶದಲ್ಲಿ ವಿದೇಶಾಂಗ ಸಚಿವರು ಇದ್ದಾರೋ ಇಲ್ಲವೋ? ಅಸಲು ನಮಗೊಂದು ವಿದೇಶಾಂಗ ನೀತಿ ಇದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಕಳೆದ ಬಾರಿ ಅಮೆರಿಕ-ಇರಾನ್ ಸಂಘರ್ಷದ ವೇಳೆ ಭಾರತ ಎಷ್ಟು ತೊಂದರೆ ಅನುಭವಿಸಿತು ಎಂಬುದು ಎಲ್ಲರಿಗೂ ಗೊತ್ತಿದೆ. ಆಗಿನ ಸಚಿವರು ಜನರನ್ನು ದಾರಿ ತಪ್ಪಿಸಿದ್ದರು. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 100 ಡಾಲರ್ ಇದ್ದಾಗ ಇಲ್ಲಿ ಇಂಧನ ಬೆಲೆ ಏರಿಸಿದವರು, ಅದು 40 ಡಾಲರ್‌ಗೆ ಕುಸಿದಾಗ ಬೆಲೆ ಇಳಿಸಲಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಪ್ರಧಾನಿ ಮೋದಿ ಅವರ ವಿದೇಶಿ ಪ್ರವಾಸಗಳನ್ನು ಲೇವಡಿ ಮಾಡಿದ ಸಚಿವರು, ಪ್ರಧಾನ ಮಂತ್ರಿಗಳು ವಿದೇಶಕ್ಕೆ ಹೋಗುವುದು ರೀಲ್ಸ್ ಮಾಡೋಕಾ ಅಥವಾ ದೇಶದ ನೀತಿ ರೂಪಿಸೋಕಾ? ಇಷ್ಟೊಂದು ದೇಶ ಸುತ್ತಿದ್ದರೂ, ಸಾಲು ಸಾಲು ಜಾಗತಿಕ ಪ್ರಶಸ್ತಿಗಳು ಬಂದಿದ್ದರೂ ಅದರಿಂದ ಸಾಮಾನ್ಯ ಭಾರತೀಯರಿಗೆ ಆದ ಲಾಭವಾದರೂ ಏನು? ಮೋದಿಯವರ ವಿದೇಶಿ ಪ್ರವಾಸಗಳು ಕೇವಲ ಅದಾನಿ-ಅಂಬಾನಿ ಉದ್ಯಮವನ್ನು ವೃದ್ಧಿಸಲು ನೆರವಾಗುತ್ತಿವೆಯೇ ಹೊರತು ದೇಶದ ಜನರಿಗಲ್ಲ. ಈ ಕೇಂದ್ರ ಸರ್ಕಾರದಿಂದ ನಮಗೆ ಯಾವುದೇ ನಿರೀಕ್ಷೆಗಳಿಲ್ಲ ಎಂದು ದೂರಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com