

ಬೆಂಗಳೂರು: ಸಿಎಂ ಮಾಧ್ಯಮ ಕಾರ್ಯದರ್ಶಿ-3 ಹುದ್ದೆಗೆ ನೇಮಕವಾಗಿದ್ದ ರಾಘವೇಂದ್ರ ಭಟ್ ನೇಮಕಾತಿ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತಿನಲ್ಲಿರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜುಲೈ 8ರಂದು ಮಾಧ್ಯಮ ಕಾರ್ಯದರ್ಶಿ-1 ಹುದ್ದೆಗೆ ಟಿ. ತ್ಯಾಗರಾಜ್, ಮಾಧ್ಯಮ ಕಾರ್ಯದರ್ಶಿ-2 ಹುದ್ದೆಗೆ ಆರ್. ಜಯಪ್ರಕಾಶ್ ಮತ್ತು ಮಾಧ್ಯಮ ಕಾರ್ಯದರ್ಶಿ-3 ಹುದ್ದೆಗೆ ರಾಘವೇಂದ್ರ ಭಟ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಈಗ ರಾಘವೇಂದ್ರ ಭಟ್ ನೇಮಕಾತಿಯನ್ನು ವಾಪಸ್ ಪಡೆದಿರುವುದಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನೂತನ ಅಧಿಸೂಚನೆ ಹೊರಡಿಸಿದೆ.
ರಾಘವೇಂದ್ರ ಭಟ್ ನೇಮಕಾತಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ವಿರುದ್ಧ ರಾಘವೇಂದ್ರ ಭಟ್ ಟೀಕಿಸಿದ್ದರು ಎನ್ನಲಾದ ಪೋಸ್ಟ್ ಇತ್ತೀಚೆಗೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಸರ್ಕಾರ ಅವರ ನೇಮಕಾತಿಯನ್ನು ಅಮಾನತಿನಲ್ಲಿ ಇರಿಸಿ ಆದೇಶ ಹೊರಡಿಸಿದೆ ಎನ್ನಲಾಗಿದೆ.