ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡದಿದ್ದರೆ ವಿಧಾನಸೌಧ ಮುಂದೆ ಧರಣಿ: CM ಡಿ ಕೆ ಶಿವಕುಮಾರ್ ಗೆ ಪತ್ರ ಬರೆದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ

ಈ ಸಂಬಂಧ ಇಂದು ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಯೋಜನೆಯಿಂದ ಬಿಡದಿ ಸುತ್ತಮುತ್ತ ರೈತರಿಗೆ ಆಗುವ ತೊಂದರೆಗಳೇನು ಎಂಬುದನ್ನು ವಿವರಿಸಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಎಚ್ಚರಿಕೆ ನೀಡಿದ್ದಾರೆ.
D K Shivakumar and H D Deve Gowda (File photo)
ಡಿ ಕೆ ಶಿವಕುಮಾರ್ ಮತ್ತು ಹೆಚ್ ಡಿ ದೇವೇಗೌಡ (ಸಂಗ್ರಹ ಚಿತ್ರ)
Updated on

ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡದಿದ್ದರೆ ವಿಧಾನಸೌಧ ಮುಂದೆ ಧರಣಿ ಕೂರುವುದಾಗಿ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಇಂದು ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಯೋಜನೆಯಿಂದ ಬಿಡದಿ ಸುತ್ತಮುತ್ತ ರೈತರಿಗೆ ಆಗುವ ತೊಂದರೆಗಳೇನು ಎಂಬುದನ್ನು ವಿವರಿಸಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಎಚ್ಚರಿಕೆ ನೀಡಿದ್ದಾರೆ.

ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ಇದುವರೆಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹಾಗೂ ಇತರ ಜೆಡಿಎಸ್ ಮತ್ತು ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಹೇಳಿಕೆ ನೀಡುತ್ತಿದ್ದರು. ಇದೀಗ 93 ವರ್ಷದ ದೇವೇಗೌಡರೇ ಎಂಟ್ರಿಯಾಗುತ್ತಿರುವುದು ಪ್ರತಿಭಟನೆಗೆ ಮತ್ತಷ್ಟು ಬಲ ಬಂದಿದೆ.

ಬಿಡದಿ ಟೌನ್‌ಶಿಪ್ ಯೋಜನೆ ಕುರಿತಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ರಾಜಕೀಯ ಸಂಘರ್ಷವು ಬೆಂಗಳೂರು–ರಾಮನಗರ ಮಾರ್ಗದಲ್ಲಿನ ಭೂಮಿ, ಮೂಲಸೌಕರ್ಯ ಹಾಗೂ ರಿಯಲ್ ಎಸ್ಟೇಟ್ ರಾಜಕೀಯದ ಹಳೆಯ ಬಿರುಕುಗಳನ್ನು ಮತ್ತೆ ಬಯಲಿಗೆಳೆದಿದೆ.

ಸುಮಾರು 7,500 ಎಕರೆ ವ್ಯಾಪ್ತಿಯಲ್ಲಿ 18,000 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಸ್ತಾವಿಸಲಾದ ಈ ಯೋಜನೆಯು ಈಗ ಹೊಸ ರಾಜಕೀಯ ಸಂಘರ್ಷದ ಕೇಂದ್ರಬಿಂದುವಾಗಿದೆ. ದೇವೇಗೌಡ ಹಾಗೂ ಅವರ ಪುತ್ರ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

D K Shivakumar and H D Deve Gowda (File photo)
Bidadi township ಯೋಜನೆಗೆ ರೈತರ ವಿರೋಧ ಸ್ಪಷ್ಟ; ಯೋಜನೆ ಹಿಂಪಡೆಯಿರಿ: ರಾಜ್ಯ ಸರ್ಕಾರಕ್ಕೆ BJP ಆಗ್ರಹ

ಸಚಿವ ಸಂಪುಟ ಯೋಜನೆಗೆ ಅನುಮೋದನೆ ನೀಡಿದ ಬಳಿಕ ದೇವೇಗೌಡರು, ರೈತರ ಭೂಮಿಯನ್ನು "ಲಾಭದ ಉದ್ದೇಶಕ್ಕಾಗಿ" ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ, ಈ ಯೋಜನೆಯ ಹಿಂದೆ "ಭೂ ಮಾಫಿಯಾ" ಇದೆ ಎಂದು ದೂರಿದ್ದರು. ಅಲ್ಲದೆ, ಮಧ್ಯಪ್ರವೇಶಿಸುವಂತೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದರು.

ಕುಮಾರಸ್ವಾಮಿ ಅವರು, ಡಿ.ಕೆ. ಶಿವಕುಮಾರ್ ಈ ಯೋಜನೆಯನ್ನು "ರಿಯಲ್ ಎಸ್ಟೇಟ್ ವ್ಯವಹಾರ"ವನ್ನಾಗಿ ಪರಿವರ್ತಿಸಿದ್ದಾರೆ ಎಂದು ಆರೋಪಿಸಿ, ಪ್ರತಿಭಟಿಸುತ್ತಿರುವ ರೈತರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಈ ಆರೋಪಗಳನ್ನು ತಳ್ಳಿಹಾಕಿರುವ ಡಿ ಕೆ ಶಿವಕುಮಾರ್, ಸುಮಾರು 80 ಶೇಕಡಾ ರೈತರು ಯೋಜನೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಸರ್ಕಾರ ಜೂನ್‌ನಲ್ಲೇ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದೆ.

ಈ ವಿವಾದವು ಉದ್ಯಮಿ ಅಶೋಕ್ ಖೇಣಿ ಹಾಗೂ ದೇವೇಗೌಡರ ನಡುವಿನ ಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್ (NICE road) ಯೋಜನೆಗೆ ಸಂಬಂಧಿಸಿದ ಹಲವು ದಶಕಗಳ ಹಳೆಯ ಸಂಘರ್ಷವನ್ನು ಮತ್ತೆ ನೆನಪಿಸಿದೆ.

ಬೆಂಗಳೂರು ನಗರ ಹೊರವಲಯ ವೇಗವಾಗಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಈ ಭಾಗಗಳ ಭೂಮಿಯ ವಾಣಿಜ್ಯ ಮತ್ತು ರಾಜಕೀಯ ಮಹತ್ವ ಹೆಚ್ಚುತ್ತಿರುವುದರಿಂದ ಇಂತಹ ಭೂ ವಿವಾದಗಳು ಪದೇ ಪದೇ ಮರುಕಳಿಸುತ್ತಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಕುಮಾರಸ್ವಾಮಿ ಹಾಗೂ ದೇವೇಗೌಡರ ಕುಟುಂಬವು ಐತಿಹಾಸಿಕವಾಗಿ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳನ್ನು ಪ್ರತಿನಿಧಿಸುತ್ತ ಬಂದಿದ್ದರೆ, ಕನಕಪುರ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಈ ಭಾಗದಲ್ಲಿ ಕಾಂಗ್ರೆಸ್ ಪ್ರಭಾವವನ್ನು ವಿಸ್ತರಿಸಿದ್ದು, ಈಗ ಈ ಪ್ರದೇಶ ಎರಡೂ ರಾಜಕೀಯ ಪಕ್ಷಗಳ ನೇರ ಹಣಾಹಣಿಯ ಅಖಾಡವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com