ನೀರಾವರಿ ಮುಖ್ಯವೋ, ಕುಡಿಯುವ ನೀರು ಮುಖ್ಯವೋ? ಕಾವೇರಿ ನೀರು ಬಿಡುಗಡೆ ಮುನ್ನ ವಾಸ್ತವ ಸ್ಥಿತಿಯ ಪರಿಶೀಲನೆಗೆ ಮುಂದಾದ ರಾಜ್ಯ ಸರ್ಕಾರ

ಸರ್ಕಾರ ಸಭೆ ನಡೆಸಿದ ಬಳಿಕವೇ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು ಎಂದು ಹೇಳುವ ಮೂಲಕ ಯಾವುದೇ ಭರವಸೆ ಅವರಿಂದ ಸಿಕ್ಕಿಲ್ಲ. ಅನಿಶ್ಚಿತ ಮುಂಗಾರು ಪರಿಸ್ಥಿತಿಯಲ್ಲಿ ನೀರಾವರಿ ಬೇಡಿಕೆ ಮತ್ತು ಕುಡಿಯುವ ನೀರಿನ ಸಂಗ್ರಹದ ನಡುವೆ ಸಮತೋಲನ ಸಾಧಿಸುವ ಸವಾಲು ರಾಜ್ಯ ಸರ್ಕಾರದ ಮುಂದಿದೆ.
Water resource experts warn that Karnataka is heading towards one of its most challenging monsoon years, and that deficit rainfall
ಕರ್ನಾಟಕವು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಸವಾಲಿನ ಮುಂಗಾರು ಅವಧಿಯೊಂದನ್ನು ಎದುರಿಸುತ್ತಿದ್ದು, ಮಳೆ ಕೊರತೆ ಮುಂದುವರಿದರೆ ಸರ್ಕಾರ ನೀರಾವರಿಗಿಂತ ಕುಡಿಯುವ ನೀರಿನ ಅಗತ್ಯಕ್ಕೆ ಆದ್ಯತೆ ನೀಡುವ ಅನಿವಾರ್ಯತೆ ಎದುರಾಗಬಹುದು.
Updated on

ಬೆಂಗಳೂರು: ಕಾವೇರಿ ನೀರನ್ನು ನೀರಾವರಿಗೆ ಬಿಡುಗಡೆ ಮಾಡುವಂತೆ ಮಂಡ್ಯ, ಕೆಆರ್ ಎಸ್ ಭಾಗದ ರೈತರಿಂದ ಒತ್ತಡ ಹೆಚ್ಚುತ್ತಿರುವ ನಡುವೆಯೇ, ಈ ಕುರಿತು ಮಂಡ್ಯ ಮತ್ತು ಶ್ರೀರಂಗಪಟ್ಟಣದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮನ್ನು ಭೇಟಿ ಮಾಡಿರುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೃಢಪಡಿಸಿದ್ದಾರೆ.

ಆದರೆ, ಸರ್ಕಾರ ಸಭೆ ನಡೆಸಿದ ಬಳಿಕವೇ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು ಎಂದು ಹೇಳುವ ಮೂಲಕ ಯಾವುದೇ ಭರವಸೆ ಅವರಿಂದ ಸಿಕ್ಕಿಲ್ಲ. ಅನಿಶ್ಚಿತ ಮುಂಗಾರು ಪರಿಸ್ಥಿತಿಯಲ್ಲಿ ನೀರಾವರಿ ಬೇಡಿಕೆ ಮತ್ತು ಕುಡಿಯುವ ನೀರಿನ ಸಂಗ್ರಹದ ನಡುವೆ ಸಮತೋಲನ ಸಾಧಿಸುವ ಸವಾಲು ರಾಜ್ಯ ಸರ್ಕಾರದ ಮುಂದಿದೆ.

ಜಲಸಂಪನ್ಮೂಲ ತಜ್ಞರ ಪ್ರಕಾರ, ಕರ್ನಾಟಕವು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಸವಾಲಿನ ಮುಂಗಾರು ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಮಳೆ ಕೊರತೆ ಮುಂದುವರಿದರೆ ಸರ್ಕಾರ ನೀರಾವರಿಗಿಂತ ಕುಡಿಯುವ ನೀರಿಗೆ ಆದ್ಯತೆ ನೀಡುವ ಅನಿವಾರ್ಯತೆ ಎದುರಾಗಬಹುದು.

Water resource experts warn that Karnataka is heading towards one of its most challenging monsoon years, and that deficit rainfall
KRS ನಿಂದ ನೀರು ಬಿಡುಗಡೆ ವಿಳಂಬ: ಮಂಡ್ಯದಲ್ಲಿ ತೀವ್ರಗೊಂಡ ರೈತರ ಪ್ರತಿಭಟನೆ

ಇದಕ್ಕೂ ಮೊದಲು ನೀರಾವರಿ ಸಚಿವ ರಾಮಲಿಂಗಾ ರೆಡ್ಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ನೀರಾವರಿಗಾಗಿ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದು, ಮುಂದಿನ ಎರಡು ವಾರಗಳಲ್ಲಿ ಮಳೆ ಸುಧಾರಿಸಿದರೆ ಮಾತ್ರ ಜಲಾಶಯಗಳ ಪರಿಸ್ಥಿತಿಯನ್ನು ಮರುಪರಿಶೀಲಿಸಲಾಗುವುದು ಎಂದು ತಿಳಿಸಿದ್ದರು.

ಪ್ರಸ್ತುತ ಕೆಆರ್‌ಎಸ್ ಜಲಾಶಯದಲ್ಲಿ ಸುಮಾರು 40 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಬೆಂಗಳೂರು, ಮೈಸೂರು, ಮಂಡ್ಯ, ಮದ್ದೂರು, ಚನ್ನಪಟ್ಟಣ ಸೇರಿದಂತೆ ಕಾವೇರಿ ನೀರನ್ನು ಅವಲಂಬಿಸಿರುವ ನಗರಗಳು ಮತ್ತು ಪಟ್ಟಣಗಳು ತಿಂಗಳಿಗೆ ಒಟ್ಟಾರೆ 5ರಿಂದ 6 ಟಿಎಂಸಿ ಅಡಿ ನೀರನ್ನು ಬಳಸುತ್ತವೆ. ಇದಕ್ಕೆ ಸುಮಾರು ಶೇ.10ರಷ್ಟು ಆವಿಯಾಗುವ ನಷ್ಟವನ್ನೂ ಸೇರಿಸಿದರೆ, ಮುಂಗಾರು ಮಳೆ ಸಮರ್ಪಕವಾಗಿ ಬರದಿದ್ದರೆ ಈಗಿರುವ ನೀರಿನ ಸಂಗ್ರಹ ಕೇವಲ ಆರು ತಿಂಗಳು ಮಾತ್ರ ಸಾಕಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಪ್ರಸ್ತುತ ಕರ್ನಾಟಕದ ನಾಲ್ಕು ಕಾವೇರಿ ಜಲಾಶಯಗಳ ಒಟ್ಟು ಸಂಗ್ರಹಕ್ಕೆ ಸಮಾನವಾದಷ್ಟು ನೀರು ಇದೆ ಎಂದು ತಜ್ಞರು ಸೂಚಿಸುತ್ತಾರೆ. ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಬೀಳುವ ಈಶಾನ್ಯ ಮುಂಗಾರು ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದ ನೀರನ್ನು ನೀಡುವುದಿಲ್ಲ. ಆದರೆ ಅದು ತಮಿಳುನಾಡಿಗೆ ಅನುಕೂಲಕರವಾಗಿರುವುದರಿಂದ, ಕರ್ನಾಟಕವು ಬರ ಪರಿಸ್ಥಿತಿಯನ್ನು ಎದುರಿಸಲು ಈಗಲೇ ನೀರನ್ನು ಸಂರಕ್ಷಿಸಿಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನೀರಾವರಿ ಸಚಿವ ರಾಮಲಿಂಗಾ ರೆಡ್ಡಿಯವರ ಹೇಳಿಕೆ ಪರಿಸ್ಥಿತಿಯ ಮಿತಿಗಳನ್ನು ಒಪ್ಪಿಕೊಂಡಿರುವುದೇ ಆಗಿದ್ದು, ರೈತರ ಒತ್ತಡಕ್ಕೆ ಮಣಿದು ಈಗಲೇ ನೀರಾವರಿಗಾಗಿ ನೀರು ಬಿಡುಗಡೆ ಮಾಡಿದರೆ ಮತ್ತು ಮುಂಗಾರು ಮತ್ತಷ್ಟು ದುರ್ಬಲವಾದರೆ, ರಾಜ್ಯವು ತೀವ್ರ ಕುಡಿಯುವ ನೀರಿನ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಜುಲೈ 15ರಂದು ನಡೆಯಲಿರುವ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಸಭೆಯು ಮಳೆ ಕೊರತೆಯ ವರ್ಷದ ಹಿನ್ನೆಲೆಯಲ್ಲಿ ಕರ್ನಾಟಕದ ಕಾರ್ಯತಂತ್ರಕ್ಕೆ ಮೊದಲ ಪ್ರಮುಖ ಪರೀಕ್ಷೆಯಾಗುವ ಸಾಧ್ಯತೆಯಿದೆ. ಈ ವರ್ಷ ಜಲಾಶಯಗಳ ನಿರ್ವಹಣೆ ಲಭ್ಯವಿರುವ ನೀರಿನ ಹರಿವು ಮತ್ತು ಕುಡಿಯುವ ನೀರಿನ ಭದ್ರತೆಯನ್ನು ಆಧರಿಸಿಯೇ ನಡೆಯಬೇಕು, ನಿಯಮಿತವಾಗಿ ನೀರು ಬಿಡುಗಡೆ ಮಾಡುವ ಪದ್ಧತಿಯನ್ನು ಅನುಸರಿಸಲು ಸಾಧ್ಯವಿಲ್ಲ ಎಂಬ ವಾದವನ್ನು ರಾಜ್ಯದ ಅಧಿಕಾರಿಗಳು ಮಂಡಿಸುವ ಸಾಧ್ಯತೆ ಇದೆ. ಇದೇ ವೇಳೆ ರೈತರು ಹಾಗೂ ಕೆಳಹರಿವಿನ ತಮಿಳುನಾಡಿನಿಂದ ನೀರಾವರಿಗಾಗಿ ಒತ್ತಡವೂ ಹೆಚ್ಚುತ್ತಿದೆ.

ಭಾರತೀಯ ಹವಾಮಾನ ಇಲಾಖೆ (IMD) ಸಾಮಾನ್ಯಕ್ಕಿಂತ ಕಡಿಮೆ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚರಿಕೆಯ ನಿಲುವು ತಾಳಿದೆ. ಮಳೆ ಕೊರತೆ ಮುಂದುವರಿದರೆ ಕೃಷ್ಣರಾಜ ಸಾಗರ, ಕಬಿನಿ, ಹೇಮಾವತಿ ಹಾಗೂ ಹರಂಗಿ ಸೇರಿದಂತೆ ಕಾವೇರಿಯ ನಾಲ್ಕು ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಸಮರ್ಪಕವಾಗದೇ, ನೀರಾವರಿ ಮತ್ತು ಕುಡಿಯುವ ನೀರಿನ ಬೇಡಿಕೆ ಎರಡನ್ನೂ ಪೂರೈಸುವುದು ಕಷ್ಟವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಹೆಸರು ಬಹಿರಂಗಪಡಿಸಲು ಇಚ್ಛಿಸದ ತಜ್ಞರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ (The New Indian Express) ಸಿಬ್ಬಂದಿ ಜೊತೆ ಮಾತನಾಡಿ, ಹಿಂದಿನ ಬರಗಾಲಗಳಲ್ಲಿ ಮಾಡಿದ ತಪ್ಪನ್ನು ಈ ಬಾರಿ ರಾಜ್ಯ ಪುನರಾವರ್ತಿಸಬಾರದು ಎಂದು ಹೇಳಿದ್ದಾರೆ. ಕುಡಿಯುವ ನೀರಿನ ಅಗತ್ಯವನ್ನು ಸಮರ್ಪಕವಾಗಿ ಮೀಸಲಿಡದೆ ನೀರು ಬಿಡುಗಡೆ ಮಾಡುವ ಸ್ಥಿತಿ ಬರಬಾರದು. ಮುಂದಿನ ಮುಂಗಾರು 2027ರ ಜೂನ್‌ನಲ್ಲಿ ಮಾತ್ರ ಆರಂಭವಾಗಲಿದ್ದು, ಅಷ್ಟರವರೆಗೆ ಲಭ್ಯವಿರುವ ನೀರನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಈಗ ಕೇವಲ ಬೆಳೆಗಳಿಗೆ ನೀರು ನೀಡಬೇಕೇ ಎಂಬ ನಿರ್ಧಾರವನ್ನು ತೆಗೆದುಕೊಳ್ಳುತ್ತಿಲ್ಲ; ಇಂದಿನಿಂದ ಆರು ತಿಂಗಳ ಬಳಿಕ ಲಕ್ಷಾಂತರ ಜನರಿಗೆ ಕುಡಿಯುವ ನೀರಿನ ಭದ್ರತೆಯನ್ನು ಖಚಿತಪಡಿಸಬಹುದೇ ಎಂಬ ಗಂಭೀರ ಪ್ರಶ್ನೆಗೆ ಉತ್ತರ ಹುಡುಕುತ್ತಿದೆ ಎಂದು ಹಿರಿಯ ಜಲಸಂಪನ್ಮೂಲ ತಜ್ಞರೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com