

ಉಡುಪಿ: ಮಠದ ಆವರಣದಲ್ಲಿ ಮಂಗಳವಾರ ನಡೆದ ಹರಿಕಥಾ ಕಾರ್ಯಕ್ರಮದ ಸಂದರ್ಭದಲ್ಲಿ ಶ್ರೀ ಆದಿಗುರು ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಘಟನೆಗೆ ಸಂಬಂಧಿಸಿದಂತೆ ಉಡುಪಿಯ ಶ್ರೀಕೃಷ್ಣ ಮಠವು ವಿಷಾದ ವ್ಯಕ್ತಪಡಿಸಿದ್ದು ಆಯೋಜಕರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಸೂಚಿಸಿದೆ.
ಜುಲೈ 11ರಂದು ಕೃಷ್ಣ ಮಠದ ರಾಜಾಂಗಣದಲ್ಲಿ ಅಂಕಿತಾ ನಾಯ್ಕ್ ಮತ್ತು ಗೌರಿ ಪಾಂಡುರಂಗಿ ಎಂಬುವವರು ನಮ್ಮಿಂದ ಒಂದು ಗಂಟೆಯ ಭರತನಾಟ್ಯ ಕಾರ್ಯಕ್ರಮ ಮತ್ತು ಮತ್ತೊಂದು ಗಂಟೆಯ ಹರಿವಾಣ ನೃತ್ಯ ಸೇವೆ ನಡೆಸಿಕೊಡುವುದಾಗಿ ಅನುಮತಿ ಪಡೆದಿದ್ದರು.
ಆದರೆ, ಕಾರ್ಯಕ್ರಮದ ನಡುವೆ ಆಯೋಜಕರಿಗೆ ತಿಳಿಸದೆ ಏಕಾಏಕಿ 'ಭಕ್ತ ಪ್ರಹ್ಲಾದ' ಎಂಬ ಹರಿಕಥಾ ಪ್ರಸಂಗವನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಲಾವಿದೆಯು ಜಗದ್ಗುರು ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿರುವುದು ನಮ್ಮ ಗಮನಕ್ಕೆ ಬಂದಿದೆ.
ಈ ಅನಪೇಕ್ಷಿತ ಘಟನೆಯ ಬಗ್ಗೆ ಮಠಕ್ಕೆ ತೀವ್ರ ವಿಷಾದವಿದ್ದು, ಧಾರ್ಮಿಕ ಭಾವನೆಗೆ ಧಕ್ಕೆ ತಂದ ಕಲಾವಿದೆಯರಿಗೆ ಸಾರ್ವಜನಿಕವಾಗಿ ಕ್ಷಮೆ ಕೇಳಲು ಸೂಚಿಸಲಾಗಿತ್ತು. ಅದರಂತೆ ಅವರು ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾರೆ ಪರ್ಯಾಯ ಶ್ರೀ ಶಿರೂರು ಮಠದ ದಿವಾನ್ (ಆಡಳಿತಗಾರ) ಎಂ. ಉದಯ ಕುಮಾರ್ ತಿಳಿಸಿದ್ದಾರೆ.
ಶಂಕರಾಚಾರ್ಯರ ಕುರಿತಾದ ಈ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಶಂಕರಾಚಾರ್ಯರ ಪೀಠಗಳ ಅನುಯಾಯಿಗಳು, ಮಠಾಧೀಶರು ಹಾಗೂ ಸನಾತನ ಧರ್ಮದ ಪ್ರಮುಖರು ತೀವ್ರ ಆಕ್ರೋಶ ಹೊರಹಾಕಿದ್ದರು. ಉಡುಪಿ ಮಠದ ಪಾವಿತ್ರ್ಯತೆಗೆ ಧಕ್ಕೆ ತರಲಾಗಿದೆ ಎಂದು ಭಕ್ತರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಈಗ ಈ ಕ್ಷಮೆಯಾಚನೆ ನಡೆದಿದೆ.