

ಬೆಂಗಳೂರು: ಬೆಂಗಳೂರು: ಕವಿ ಕುವೆಂಪು ವಿರಚಿತ ನಾಡಗೀತೆಯಲ್ಲಿ 'ಬೌದ್ಧ' ಪದ ಮರು ಸೇರ್ಪಡೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರ ನೇತೃತ್ವದ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ನಾಡಗೀತೆಯಲ್ಲಿ ಇರುವ ‘ಪಾರಸಿಕ ಜೈನರುದ್ಯಾನ’ ಎಂಬ ಸಾಲನ್ನು ಪರಿಷ್ಕರಿಸಿ ‘ಬೌದ್ಧ’ ಪದವನ್ನೂ ಒಳಗೊಂಡಂತೆ ‘ಪಾರಸಿಕ ಜೈನ ಬೌದ್ಧರುದ್ಯಾನ’ ಎಂದು ಮಾರ್ಪಾಡು ಮಾಡಲು ಸಮಿತಿಯು ರಾಜ್ಯ ಸರ್ಕಾರಕ್ಕೆ ಸರ್ವಾನುಮತದಿಂದ ಶಿಫಾರಸು ಮಾಡಿದೆ. ರಾಷ್ಟ್ರಕವಿ ಕುವೆಂಪು ಅವರು 1924ರಲ್ಲಿ ಬರೆದಿದ್ದ ನಾಡಗೀತೆಯ ಮೊದಲ ಕರಡು ಪ್ರತಿಯಲ್ಲಿ ‘ಬೌದ್ಧರುದ್ಯಾನ’ ಎಂಬ ಪದವಿತ್ತು.
ಆದರೆ, 1930ರಲ್ಲಿ ಅವರ ‘ಕೊಳಲು’ ಕವನ ಸಂಕಲನದಲ್ಲಿ ಈ ಹಾಡು ಪ್ರಕಟವಾದಾಗ ಅದು ‘ಜೈನರುದ್ಯಾನ’ ಎಂದಾಗಿತ್ತು. ಬೌದ್ಧ ಧರ್ಮಕ್ಕೆ ಇರುವ ಐತಿಹಾಸಿಕ ಮಹತ್ವವನ್ನು ಪರಿಗಣಿಸಿ, ನಾಡಗೀತೆಯಲ್ಲಿ ಮತ್ತೆ ಬೌದ್ಧ ಪದವನ್ನು ಸೇರಿಸಬೇಕು ಎಂದು ಕೋರಿ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಅವರು 2025ರ ನವೆಂಬರ್ನಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.
ಈ ಪತ್ರದ ಹಿನ್ನೆಲೆಯಲ್ಲಿ ಅಂದಿನ ಸಿಎಂರ ಸೂಚನೆಯಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 8 ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು.