ಬಂಟ್ವಾಳ: ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯ ಬರ್ಬರ ಹತ್ಯೆ; ಆರೋಪಿ ಚೇತನ್ ಅರೆಸ್ಟ್; Video

ಘಟನೆ ನಡೆದ 24 ಗಂಟೆಯೊಳಗೇ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Lavanya, Chetan(File photo)
ಲಾವಣ್ಯ, ಚೇತನ್(ಸಂಗ್ರಹ ಚಿತ್ರ)
Updated on

ಮಂಗಳೂರು: ಬಂಟ್ವಾಳ ತಾಲ್ಲೂಕಿನ ಬಿ.ಸಿ. ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿನ್ನೆ ಗುರುವಾರ ಸಂಜೆ ಲಾವಣ್ಯ ಎಂಬ ಯುವತಿಯನ್ನು ಬಸ್ಸಿನಿಂದ ಹೊರಗೆಳೆದು ಯದ್ವಾತದ್ವಾ ಮಚ್ಚಿನಿಂದ ದಾಳಿ ನಡೆಸಿ ಸಾರ್ವಜನಿಕರ ಎದುರಲ್ಲೇ ಹಾಡಹಗಲೇ ಹತ್ಯೆಗೈದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಚೇತನ್ ನನ್ನು ಬಂಧಿಸಿದ್ದಾರೆ.

ಘಟನೆ ನಡೆದ 24 ಗಂಟೆಯೊಳಗೇ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಮಂಗಳೂರು ಬಳಿಯ ವಾಮಂಜೂರು ಪಚ್ಚನಾಡಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 25 ವರ್ಷದ ಬಂಟ್ವಾಳದ ಕಕ್ಯಪದವು ನಿವಾಸಿ ಲಾವಣ್ಯ ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಂನಲ್ಲಿ ಕೆಲಸ ನಿರ್ವಹಿಸುತ್ತಿದ್ದಳು.

ನಿನ್ನೆ ಎಂದಿನಂತೆ ಸಾಯಂಕಾಲ ಕೆಲಸ ಮುಗಿಸಿ ಮನೆಗೆ ಹಿಂತಿರುಗಲು ಬಿ.ಸಿ. ರೋಡಿನಿಂದ ಕಕ್ಯಪದವು ಹೋಗುವ ಸರಕಾರಿ ಬಸ್ಸಿನಲ್ಲಿ ಯುವತಿ ಕುಳಿತಿದ್ದಾಗ ಏಕಾಏಕಿ ಆರೋಪಿ ಚೇತನ್ ಬಸ್ಸಿನ ಒಳಗಡೆ ಬಂದು ಹೊರಗಡೆ ಎಳೆದೊಯ್ದು ಮಚ್ಚಿನಿಂದ ದಾಳಿ ನಡೆಸಿದ್ದಾನೆ.

ಯುವತಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ತೀವ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ನಂತರ ಸ್ಥಳೀಯರು ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಾಗಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು.

ನಿನ್ನೆ ಸಂಜೆ 5.30 ಸುಮಾರಿಗೆ ಘಟನೆ ನಡೆದಿದ್ದು ಕೃತ್ಯದ ಬೆನ್ನಲ್ಲೇ ಆರೋಪಿ ಚೇತನ್ ಪರಾರಿಯಾಗಿದ್ದನು. ಆರೋಪಿ ಚೇತನ್ ಯುವತಿಯ ಸಂಬಂಧಿ ಎನ್ನಲಾಗಿದೆ. ಪ್ರೀತಿ ನಿರಾಕರಣೆಯ ಹಿನ್ನೆಲೆಯಲ್ಲಿ ಕೃತ್ಯ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

Lavanya, Chetan(File photo)
ಮಂಗಳೂರು: ಹಾಡಹಗಲೇ ಭಯಾನಕ ಘಟನೆ; ಜನರ ಎದುರೇ ಮಚ್ಚಿನಿಂದ ಕೊಚ್ಚಿ ಯುವತಿಯ ಕಗ್ಗೊಲೆ!

ನಾಲ್ಕು ವರ್ಷಗಳ ಹಿಂದೆ ಬ್ರೇಕಪ್​​

ನಾಲ್ಕು ವರ್ಷಗಳ ಹಿಂದೆ ಲಾವಣ್ಯ ಮತ್ತು ಚೇತನ್ ನಡುವೆ ಪ್ರೇಮ ಸಂಬಂಧವಿದ್ದಿತ್ತು ಎನ್ನಲಾಗಿದೆ. ಆದರೆ ಯಾವುದೋ ಕಾರಣಕ್ಕೆ ಅವರ ನಡುವೆ ಬ್ರೇಕಪ್ ಆಗಿತ್ತು. ಆದರೂ ಚೇತನ್ ಲಾವಣ್ಯಳನ್ನು ಬಿಡದೆ ತೊಂದರೆ ನೀಡುತ್ತಿದ್ದ. ಪ್ರೀತಿ ಮಾಡಲು ಒತ್ತಾಯ ಮಾಡುತ್ತಿದ್ದ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ನಿನ್ನೆ ಕೂಡ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

ಎನ್ ಕೌಂಟರ್ ಮಾಡಲು ವ್ಯಾಪಕ ಒತ್ತಾಯ

ಆರೋಪಿ ಚೇತನ್ ಮಾಡಿರುವ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಆತನನ್ನು ಎನ್ ಕೌಂಟರ್ ಮಾಡಿ ಹತ್ಯೆ ಮಾಡಬೇಕೆಂಬ ಒತ್ತಾಯ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.

ನಕಲಿ ಎಡಿಟಿಂಗ್ ಫೋಟೋ

ಆರೋಪಿ ಚೇತನ್ ಭಜರಂಗದಳಕ್ಕೆ ಸೇರಿದವನು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿದ್ದು, ಅದು ಎಡಿಟಿಂಗ್ ಫೋಟೋ ಎಂದು ಭಜರಂಗದಳ ಸ್ಪಷ್ಟನೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com