

ಬೆಂಗಳೂರು: ಬೀದರ್ ಜಿಲ್ಲೆ ಕಾರಂಜಾ ಬಲದಂಡೆ ಕಾಲುವೆ 100ರಿಂದ 131ನೇ ಕಿ.ಮೀ.ವರೆಗಿನ ಮುಖ್ಯ ಕಾಲುವೆ ಮತ್ತು ವಿತರಣಾ ಕಾಲುವೆ, ಉಪ ವಿತರಣಾ ಕಾಲುವೆ ಆಧುನೀಕರಣ ಕಾಮಗಾರಿಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಿ.ಮೀ 0ರಿಂದ 100ರವರೆಗಿನ ಕಾಲುವೆ ಆಧುನೀಕರಣ ಕಾಮಗಾರಿಯಲ್ಲಿ ಬಿಟ್ಟುಹೋಗಿರುವ ವಿತರಣಾ ಕಾಲುವೆ, ಉಪ ಕಾಲುವಗಳನ್ನೂ ಆಧುನೀಕರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಕಾಮಗಾರಿಗಳ ಒಟ್ಟು ವೆಚ್ಚ 2023-24ರ ದರಪಟ್ಟಿಯನ್ವಯ 180 ಕೋಟಿ ರೂ. ಅನುಮೋದಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದುಳಿದ ಕಲ್ಯಾಣ ಕರ್ನಾಟಕದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಸಮೀಪ ಕಾರಂಜಾ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟೆಯ ಸಂಗ್ರಹಣಾ ಸಾಮರ್ಥ್ಯ 7.69 ಟಿಎಂಸಿ ಆಗಿದೆ. ಯೋಜನೆಯಡಿ ಹಂಚಿಕೆಯಾಗಿರುವ 9.27 ಟಿಎಂಸಿ ನೀರು ಬಳಸಿ, ಬೀದರ್ ಜಿಲ್ಲೆಯ 29227 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಈ ಕಾಲುವೆ ಆಧುನೀಕರಣ ನರವಾಗಲಿದೆ ಎಂದು ಅವರು ಹೇಳಿದ್ದಾರೆ.
ಕಾರಂಜಾ ಯೋಜನೆಯಡಿ 0.687 ಟಿ.ಎಂ.ಸಿ ನೀರನ್ನು ಕುಡಿಯುವ ನೀರಿನ ಯೋಜನೆಗೆ ಬಳಸಲು ಅವಕಾಶ ಕಲ್ಪಿಸಲಾಗಿದೆ. ಬಲದಂಡೆ ಕಾಲುವೆಡಯಿ 131 ಕಿ.ಮೀ ಕಾಲುವೆಯಿಂದ 19217 ಹೆಕ್ಟೇರ್ ಎಡದಂಡೆ ಕಾಲುವೆಗಳ 31 ಕಿ.ಮೀನಿಂದ 2521 ಹೆಕ್ಟೇರ್, ಏತ ನೀರಾವರಿ ಕಾಲುವೆ 24 ಕಿ.ಮೀಗಳಿಂದ 3873 ಹೆಕ್ಟೇರ್, ಅತಿವಾಳ ಏತ ನೀರಾವರಿ ಕಾಲುವೆಯಡಿ 3616 ಹೆಕ್ಟೇರ್ ನೀರಾವರಿ ಸೌಲಭ್ಯಕ್ಕೆ ಯೋಜನೆ ರೂಪಿಸಲಾಗಿದೆ ಎಂದೂ ಈಶ್ವರ ಖಂಡ್ರೆ ವಿವರಿಸಿದ್ದಾರೆ.
ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದ ಈ ಕಾಲುವೆ ಆಧುನೀಕರಣ ಕಾಮಗಾರಿ ಆರಂಭಿಸುವಂತೆ ತಾವು ನಿರಂತರವಾಗಿ ಪ್ರಯತ್ನ ಮಾಡದ್ದು, ಯೋಜನೆಗೆ ಅನುಮೋದನೆ ನೀಡಿದ ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ, ವಿಶೇಷವಾಗಿ ಮುಖ್ಯಮಂತ್ರಿಗಳು ಮತ್ತು ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಧನ್ಯವಾದ ಅರ್ಪಿಸುವುದಾಗಿ ತಿಳಿಸಿದ್ದಾರೆ.