

ಬೆಂಗಳೂರು: ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ಸಂಪರ್ಕಿಸುವ ಉದ್ದೇಶಿತ ಉತ್ತರ-ದಕ್ಷಿಣ ಸುರಂಗ ರಸ್ತೆ ಯೋಜನೆಗಾಗಿ ಐತಿಹಾಸಿಕ ಲಾಲ್ಬಾಗ್ ಸಸ್ಯಶಾಸ್ತ್ರೀಯ ಉದ್ಯಾನವನದ 5 ಎಕರೆ ಜಾಗವನ್ನು ಬಳಸಿಕೊಳ್ಳುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ವಿರೋಧ ವ್ಯಕ್ತ ಪಡಿಸಿರುವ ಸಂಸದ ತೇಜಸ್ವಿ ಸೂರ್ಯ 'ಲಾಲ್ಬಾಗ್ ಮಾರಾಟಕ್ಕಿದೆ' ಎಂಬ ಸಂದೇಶವಿರುವ ಕರಪತ್ರಗಳನ್ನು ವಿತರಿಸುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಭಾನುವಾರ ಬೆಳಗ್ಗೆ ಲಾಲ್ಬಾಗ್ಗೆ ಭೇಟಿ ನೀಡಿ ನೂರಾರು ಸಾರ್ವಜನಿಕರು ಹಾಗೂ ನಿವಾಸಿಗಳನ್ನು ಭೇಟಿ ಮಾಡಿದ ತೇಜಸ್ವಿ ಸೂರ್ಯ, ಸರ್ಕಾರದ ಈ ಪ್ರಸ್ತಾವನೆಯ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆತಂಕವಿದೆ ಎಂದು ತಿಳಿಸಿದರು.
ನಾವು ನಮ್ಮ ಧ್ವನಿಯನ್ನು ಎತ್ತಬೇಕಾಗಿದೆ ಮತ್ತು ಇದೊಂದು ಬೃಹತ್ ಜನ ಆಂದೋಲನವಾಗಿ ರೂಪಗೊಳ್ಳಬೇಕಿದೆ. ಯಾವುದೇ ಕಾರಣಕ್ಕೂ ಲಾಲ್ಬಾಗ್ ಆವರಣದಲ್ಲಿ ಈ ಯೋಜನೆ ಜಾರಿಯಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಲಾಲ್ಬಾಗ್ ಬೆಂಗಳೂರಿನ ಹೆಮ್ಮೆ ಮತ್ತು ನಗರದ ದೊಡ್ಡ ಹಸಿರು ವಲಯಗಳಲ್ಲಿ ಒಂದಾಗಿದೆ. ಇದು ಅಂತರ್ಜಲ ಮರುಪೂರಣಕ್ಕೆ ಸಹಾಯ ಮಾಡುವುದಲ್ಲದೆ, ಲಾಲ್ಬಾಗ್ ಕೆರೆಯ ಪರಿಸರ ವ್ಯವಸ್ಥೆಯನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಲಾಲ್ಬಾಗ್ ಒಟ್ಟು ಸುಮಾರು 97 ಹೆಕ್ಟೇರ್ ಪ್ರದೇಶವನ್ನು ಹೊಂದಿದ್ದು, ಅದರಲ್ಲಿ ತಾತ್ಕಾಲಿಕ ನಿರ್ಮಾಣ ಪ್ರದೇಶ ಸೇರಿದಂತೆ ಸುಮಾರು 2.37 ಹೆಕ್ಟೇರ್ (ಶೇ. 2.47) ಜಾಗವನ್ನು ಮಾತ್ರ ಯೋಜನೆಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
ಶಾಶ್ವತವಾಗಿ ಕೇವಲ 1.92 ಹೆಕ್ಟೇರ್ (ಉದ್ಯಾನವನದ ಸುಮಾರು ಶೇ. 1.9 ರಷ್ಟು) ಜಾಗ ಮಾತ್ರ ಅಗತ್ಯವಿದ್ದು, ಕಾಮಗಾರಿ ಮುಗಿದ ನಂತರ ಆ ಜಾಗವನ್ನು ಯಥಾಸ್ಥಿತಿಗೆ ತರಲಾಗುವುದು ಎಂದು ಸರ್ಕಾರ ಕೋರ್ಟ್ಗೆ ತಿಳಿಸಿದೆ.
ಲಾಲ್ಬಾಗ್ ಬೆಂಗಳೂರಿನ ಪರಂಪರೆಯಾಗಿದೆ ಮತ್ತು ನಗರದ ಕೊನೆಯ ದೊಡ್ಡ ಹಸಿರು ಸ್ಥಳಗಳಲ್ಲಿ ಒಂದಾಗಿದೆ, ಇದು ಅಂತರ್ಜಲ ಮರುಪೂರಣಕ್ಕೆ ಕೊಡುಗೆ ನೀಡುತ್ತದೆ, ಲಾಲ್ಬಾಗ್ ಕೆರೆಗಳ ಪರಿಸರವನ್ನು ಬೆಂಬಲಿಸುತ್ತದೆ ಎಂದು ಸೂರ್ಯ ಹೇಳಿದರು.
ಟೆಂಡರ್ ಮತ್ತು ವಿವರವಾದ ಯೋಜನಾ ವರದಿ (ಡಿಪಿಆರ್) ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಐದು ಅಂತಸ್ತಿನ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಗುತ್ತಿಗೆದಾರರಿಗೆ ಅನುಮತಿ ನೀಡಿದೆ ಎಂದು ಅವರು ಹೇಳಿದರು. "ನಮ್ಮ ಹೋರಾಟವು ಮೂಲಸೌಕರ್ಯ ಅಥವಾ ಅಭಿವೃದ್ಧಿಯ ವಿರುದ್ಧವಲ್ಲ. ಬೆಂಗಳೂರಿನ ಉಳಿದ ಹಸಿರು ಪರಂಪರೆಯನ್ನು ರಿಯಲ್ ಎಸ್ಟೇಟ್ ಯೋಜನೆಗಳಿಗಾಗಿ ಹಾಳು ಮಾಡಬಾರದು ಎಂದು ನಾವು ಬಯಸುತ್ತೇವೆ" ಎಂದು ಸೂರ್ಯ ಹೇಳಿದರು.