

ಬೆಂಗಳೂರು: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಪಡೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರವನ್ನು ಟೀಕಿಸಿದ ಅವರು, "ಅದು ಡಬಲ್ ಎಂಜಿನ್ ಸರ್ಕಾರವಾಗಿತ್ತು. ಆದರೆ ಹೇಗೋ ಆ ಎಂಜಿನ್ಗಳು ಸ್ಟಾರ್ಟ್ ಆಗಲೇ ಇಲ್ಲ, ವಾಹನಗಳೂ ಚಲಿಸಲಿಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಕಾಂಗ್ರೆಸ್ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದ ಅವರು, ಎಲ್ಲ ಅಡೆತಡೆಗಳನ್ನು ನಿವಾರಿಸಿ ಹಾಗೂ ಕೆಲವರ ವಿರೋಧದ ನಡುವೆಯೂ ಯಲಹಂಕ ಅನಿಲ ಆಧಾರಿತ ವಿದ್ಯುತ್ ಸ್ಥಾವರವನ್ನು ಆರಂಭಿಸಲಾಗಿದೆ. ಈಗ ಅದರ ಲಾಭ ರಾಜ್ಯದ ಜನರಿಗೆ ಸಿಗುತ್ತಿದೆ. ಶರಾವತಿ ಯೋಜನೆಯೂ ಇದೇ ರೀತಿಯಲ್ಲಿ ಜನರಿಗೆ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದರು.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL) 57ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ಒಮ್ಮೆ ನಿರ್ಧಾರ ಕೈಗೊಂಡು ಜನರಿಗೆ ಭರವಸೆ ನೀಡಿದ ಬಳಿಕ ಅದನ್ನು ಜಾರಿಗೆ ತರಲಾಗುವುದು. ಯೋಜನೆಗೆ ಅಗತ್ಯವಿರುವ ಎಲ್ಲಾ ಕಾನೂನು ಪ್ರಕ್ರಿಯೆಗಳು ಹಾಗೂ ಅನುಮತಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಸೌರ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದ ಅವರು, ಪಾವಗಡದಲ್ಲಿ ಸೌರ ವಿದ್ಯುತ್ ಯೋಜನೆಗಾಗಿ ರೈತರು ಸ್ವಯಂಪ್ರೇರಿತವಾಗಿ ತಮ್ಮ ಭೂಮಿಯನ್ನು ನೀಡುತ್ತಿದ್ದಾರೆ. ಸರ್ಕಾರ 10,000 ಎಕರೆ ಭೂಮಿಯಲ್ಲಿ ಹೊಸ ಯೋಜನೆ ರೂಪಿಸುತ್ತಿದೆ. ಇದು ರೈತರಿಗೆ ಅನುಕೂಲಕರವಾಗಲಿದೆ. ಹಿಂದಿನ ಮಾದರಿಯಂತೆ ಭೂಸ್ವಾಧೀನ ಮಾಡುವುದಿಲ್ಲ. ದೀರ್ಘಾವಧಿಯ ಗುತ್ತಿಗೆ ಒಪ್ಪಂದದ ಮೂಲಕ ರೈತರಿಗೆ ಸೌರ ಉದ್ಯಾನ ಯೋಜನೆಯಡಿ ಮಾಸಿಕ ಆರ್ಥಿಕ ಲಾಭ ದೊರೆಯುತ್ತಿದೆ ಎಂದು ಹೇಳಿದರು.
ಸರ್ಕಾರಿ ವಲಯದಲ್ಲಿ ಇಂಜಿನಿಯರ್ಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಿಳಿಸಿದ ಅವರು, ಬೆಂಗಳೂರಿನಲ್ಲಿ 26 ಲಕ್ಷಕ್ಕೂ ಹೆಚ್ಚು ಇಂಜಿನಿಯರ್ಗಳು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಸುಮಾರು 2 ಲಕ್ಷ ಮಂದಿ ಅಂತರರಾಷ್ಟ್ರೀಯ ಪಾಸ್ಪೋರ್ಟ್ ಹೊಂದಿದ್ದಾರೆ ಎಂದು ಹೇಳಿದರು.