

ಗೋಕರ್ಣ (ಉತ್ತರ ಕನ್ನಡ ಜಿಲ್ಲೆ): ಗೋಕರ್ಣದ ಮಹಾಗಣಪತಿ ದೇವಸ್ಥಾನದಲ್ಲಿರುವ ಸಾವಿರಾರು ವರ್ಷಗಳಷ್ಟು ಪುರಾತನ ಕಲ್ಲಿನ ವಿಗ್ರಹವು ಕ್ರಮೇಣ ಸವೆದು ಹೋಗುತ್ತಿರುವ ಹಿನ್ನೆಲೆಯಲ್ಲಿ, ಭಕ್ತರು ವಿಗ್ರಹವನ್ನು ಸ್ಪರ್ಶಿಸಿ ಪೂಜೆ ಸಲ್ಲಿಸುವುದನ್ನು ನಿಷೇಧಿಸಿ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತೆ ಸುಧಾ ತಲವಾರ ಆದೇಶ ಹೊರಡಿಸಿದ್ದಾರೆ.
ದೇವಸ್ಥಾನದ ಅರ್ಚಕರು ಹಾಗೂ ಸಾರ್ವಜನಿಕರ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ ಅವರು, ಶಿಫ್ಟ್ ಇನ್ಚಾರ್ಜ್ ಅರ್ಚಕರನ್ನು ಹೊರತುಪಡಿಸಿ ಇತರ ಯಾವುದೇ ಅರ್ಚಕರು, ವಿಐಪಿಗಳು ಅಥವಾ ಭಕ್ತರಿಗೆ ಗರ್ಭಗುಡಿಯೊಳಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಭಕ್ತರು ವಿಗ್ರಹಕ್ಕೆ ಅಭಿಷೇಕ ಮಾಡುವುದಾಗಲಿ ಅಥವಾ ಸ್ಪರ್ಶಿಸುವುದಾಗಲಿ ನಿಷೇಧಿಸಲಾಗಿದೆ. ಅವರು ದೂರದಿಂದಲೇ ದೇವರ ದರ್ಶನ ಪಡೆಯಬಹುದು ಎಂದು ತಿಳಿಸಿದರು.
ಆರತಿಯನ್ನು ಗರ್ಭಗುಡಿಯ ಹೊರಗಡೆಯಿಂದಲೇ ನೆರವೇರಿಸಬಹುದು. ಮುಂದಿನ ಆದೇಶದವರೆಗೆ ಈ ನಿರ್ಬಂಧಗಳು ಜಾರಿಯಲ್ಲಿರಲಿವೆ ಎಂದು ಸುಧಾ ತಲವಾರ ಹೇಳಿದರು.
ಸಾವಿರಾರು ವರ್ಷಗಳಷ್ಟು ಹಳೆಯದಾದ ಈ ವಿಗ್ರಹವು ನಿರಂತರ ಸ್ಪರ್ಶದಿಂದ ಸವೆದು ಹೋಗುತ್ತಿರುವುದರಿಂದ, ವಿಗ್ರಹವನ್ನು ಸ್ಪರ್ಶಿಸಿ ಪೂಜೆ ಸಲ್ಲಿಸುವುದು ಮತ್ತು ದರ್ಶನ ಪಡೆಯುವುದನ್ನು ನಿಷೇಧಿಸಬೇಕು ಎಂದು ಸ್ಥಳೀಯ ನಿವಾಸಿಗಳು ಸೇರಿದಂತೆ ಅನೇಕ ಭಕ್ತರು ಬೇಡಿಕೆ ಸಲ್ಲಿಸಿದ್ದರು.