

ಕೋಲಾರ: ಸಾಲಭಾದೆ ಸಾಲಗಾರರ ಕಿರುಕುಳದಿಂದ ತನ್ನಿಬ್ಬರು ಮಕ್ಕಳೊಂದಿಗೆ ಕೃಷಿ ಹೊಂಡದಲ್ಲಿ ಬಿದ್ದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ತಾಲೂಕು ಛತ್ರಕೋಡಿಹಳ್ಳಿ ಬಳಿಯ ಕೃಷಿ ಹೊಂಡದಲ್ಲಿ ಕಳೆದ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಗ್ಲಿಬೆಣಜೇನಹಳ್ಳಿ ಗ್ರಾಮದ ತಾಯಿ ಪ್ರಮೀಳ (40) ಮಗಳು ಸ್ವಪ್ನ (22) ಹಾಗೂ ಮಗ ಚರಣ್ (18) ಮೃತ ದುರ್ದೈವಿಗಳು.
ಇತ್ತೀಚೆಗೆ ಮನೆ ಕಟ್ಟಲು ಸುಮಾರು 15 ಲಕ್ಷ ಕೈ ಸಾಲ ಮಾಡಿಕೊಂಡಿದ್ದು, ಪದೆ ಪದೆ ಖಾಸಗಿ ಫೈನಾನ್ಸ್ ನವರ ಕಾಟ, ಇತ್ತ ಸಂಘಗಳಲ್ಲಿ ಸಾಲ ಪಡೆದಿದ್ದವರ ಕಾಟದಿಂದ ನಿನ್ನೆ ರಾತ್ರಿ ಮನೆಯಲ್ಲಿ ಪತಿ ಸುರೇಶ್ ಜೊತೆಗೆ ಗಲಾಟೆ ಮಾಡಿಕೊಂಡಿರುವ ಪ್ರಮೀಳ, ರಾತ್ರಿ 1 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನೂ ಸುರೇಶ್ ಆಟೋ ಚಾಲಕನಾಗಿದ್ದರೂ ತನ್ನಿಬ್ಬರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ದಾನೆ. ಆದರೆ ಇತ್ತೀಚೆಗೆ ಮನೆ ಕಟ್ಟಲು ಕೈಸಾಲ ಸೇರಿದಂತೆ ಸಂಘ ಸಂಸ್ಥೆಗಳ ಬಳಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಇನ್ನೂ ಪ್ರಮೀಳ ಸಹ ಮನೆ ಮನೆ ಕೆಲಸ ಮಾಡಿಕೊಂಡು ಮನೆ ನಿರ್ವಹಣೆ ಮಾಡುತ್ತಿದ್ದಳು. 15 ಲಕ್ಷ ಸಾಲ ಮಾಡಿಕೊಂಡಿರುವ ಸುರೇಶ್ ಕಳೆದ ರಾತ್ರಿ ಆಟೋ ಚಾಲನೆ ಮಾಡಿ ಮನೆಗೆ ಬಂದ ಸಂದರ್ಭದಲ್ಲಿ ಪತಿ-ಪತ್ನಿ ಮಧ್ಯೆ ಗಲಾಟೆಯಾಗಿದೆ ಎನ್ನಲಾಗಿದೆ.
ಈ ವೇಳೆ ಮನೆಯಿಂದ ಹೊರ ಹೋಗಿರುವ ತಾಯಿ ಮಕ್ಕಳು ಮನೆಗೆ ಬಂದಿಲ್ಲ. ರಾತ್ರಿಯೆಲ್ಲಾ ಪತಿ ಸುರೇಶ್ ತನ್ನ ಪತ್ನಿ ಹಾಗೂ ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದಾನೆ. ಅಲ್ಲದೆ ಫೋನ್ ಮಾಡಿದಾಗ ಸಂಬಂಧಿಕರ ಮನೆಗೆ ಬಂದಿರುವುದಾಗಿ ಹೇಳಿದ್ದರು.
ಹಾಗಾಗಿ ಸುಮ್ಮನಾದೆ. ಆದರೆ ಬೆಳಗಾಗುವವಷ್ಟರಲ್ಲಿ ಹೀಗೆ ಶವಗಳಾಗಿ ಪತ್ತೆಯಾಗಿದ್ದಾರೆ ಎಂದು ಸುರೇಶ್ ಹೇಳಿದ್ದಾರೆ. ಇನ್ನೂ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ