

ಬೆಂಗಳೂರು: ಆನ್ಲೈನ್ ಜೂಜಿನ ಚಟಕ್ಕೆ ಬಿದ್ದು, ಸಾಲದ ಸುಳಿಯಲ್ಲಿ ಸಿಲುಕಿದ್ದ ಯುವಕನೊಬ್ಬ, ಸಾಲ ತೀರಿಸಲು ಚಿನ್ನಾಭರಣ ದೋಚುವ ಉದ್ದೇಶದಿಂದ ತನ್ನ ನೆರೆಮನೆಯ ವೃದ್ಧ ಮಹಿಳೆಯನ್ನು ಕೊಲೆ ಮಾಡಿ, ಶವವನ್ನು ಸೂಟ್ಕೇಸ್ನಲ್ಲಿ ತುಂಬಿ ಕೆರೆಗೆ ಎಸೆದಿರುವ ಘಟನೆ ಬೆಂಗಳೂರಿನ ರಾಮೋಹಳ್ಳಿ ಸಮೀಪ ನಡೆದಿದೆ.
ಮೃತ ಮಹಿಳೆಯನ್ನು ಜಯಮ್ಮ (61) ಎಂದು ಗುರ್ತಿಸಲಾಗಿದೆ. ಪ್ರಕರಣ ಸಂಬಂಧ ಕುಂಬಳಗೋಡು ಪೊಲೀಸರು ಕೆಂಗೇರಿಯ ಚಳ್ಳಘಟ್ಟ ಗ್ರಾಮದ ನಿವಾಸಿ ಗಗನ್ ಆರ್ (21) ಎಂಬಾತನನ್ನು ಬಂಧಿಸಿದ್ದಾರೆ.
ಗಗನ್ ತಾಯಿ ಮತ್ತು ಜಯಮ್ಮ ಆತ್ಮೀಯ ಸ್ನೇಹಿತರಾಗಿದ್ದರು. ಜಯಮ್ಮ ಆಗಾಗ್ಗೆ ಗಗನ್ ಮನೆಗೆ ಬಂದು ಅವರ ತಾಯಿಯೊಂದಿಗೆ ಮಾತನಾಡುವುದು ಅಥವಾ ಸಣ್ಣಪುಟ್ಟ ಸಹಾಯ ಕೇಳುವುದು ಸಾಮಾನ್ಯವಾಗಿತ್ತು.
ಗಗನ್ ಆನ್ಲೈನ್ ಜೂಜಿನಲ್ಲಿ ದೊಡ್ಡ ಮೊತ್ತದ ಹಣ ಕಳೆದುಕೊಂಡು ಭಾರೀ ಸಾಲ ಮಾಡಿದ್ದ. ಆ ಸಾಲವನ್ನು ತೀರಿಸಲು ಹಣದ ಕೊರತೆ ಎದುರಾದ ಹಿನ್ನೆಲೆಯಲ್ಲಿ, ಯಾವಾಗಲೂ ಚಿನ್ನಾಭರಣ ಧರಿಸುತ್ತಿದ್ದ ಜಯಮ್ಮ ಅವರ ಆಭರಣಗಳನ್ನು ದೋಚುವ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 15ರಂದು ಮಧ್ಯಾಹ್ನ ಸುಮಾರು 3.35 ಗಂಟೆ ವೇಳೆಗೆ ಜಯಮ್ಮ ಅವರು ಕರೆ ಮಾಡಲು ಗಗನ್ನ ಮೊಬೈಲ್ ಫೋನ್ ಕೇಳಿಕೊಂಡು ಅವರ ಮನೆಗೆ ಬಂದಿದ್ದರು. ಆ ವೇಳೆ ಮನೆಯಲ್ಲಿದ್ದ ಇತರರು ಹೊರಗೆ ಹೋಗಿದ್ದರಿಂದ ಗಗನ್ ಒಬ್ಬನೇ ಇದ್ದನು.
ಇದನ್ನೇ ಅವಕಾಶವೆಂದುಕೊಂಡ ಗಗನ್, ಜಯಮ್ಮ ಅವರ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಜಯಮ್ಮ ಅವರ ಮಾಂಗಲ್ಯ ಸರ, ಉಂಗುರ ಹಾಗೂ ಕಿವಿಯೋಲೆಗಳನ್ನು ಕಳಚಿ, ಮೃತದೇಹವನ್ನು ಮನೆಯಲ್ಲಿದ್ದ ದೊಡ್ಡ ಕೆಂಪು ಬಣ್ಣದ ಸೂಟ್ಕೇಸ್ನಲ್ಲಿ ತುಂಬಿದ್ದಾನೆ. ಬಳಿಕ ಅದನ್ನು ಬೈಕ್ನಲ್ಲಿ ಸಾಗಿಸಿ ರಾಮೋಹಳ್ಳಿ ಸಮೀಪದ ತಿಮ್ಮಪ್ಪನ ಕೆರೆಗೆ ಎಸೆದು ಮನೆಗೆ ವಾಪಸ್ಸಾಗಿದ್ದಾನೆ.
ಜಯಮ್ಮ ನಾಪತ್ತೆಯಾದ ನಂತರ ಅವರ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದಾಗ, ಗಗನ್ ಕೂಡ ಅವರೊಂದಿಗೆ ಸೇರಿ ಹುಡುಕಾಟದಲ್ಲಿ ಭಾಗವಹಿಸಿದಂತೆ ನಟಿಸಿ ,ಯಾರಿಗೂ ಅನುಮಾನ ಬರದಂತೆ ನಡೆದುಕೊಂಡಿದ್ದಾನೆ.
ಮಂಗಳವಾರ ಮಧ್ಯಾಹ್ನ ಕೆರೆಯಲ್ಲಿ ಸೂಟ್ಕೇಸ್ನೊಳಗೆ ಶವ ಪತ್ತೆಯಾದ ಬಳಿಕ ಕುಂಬಳಗೋಡು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.
ಸುತ್ತಮುತ್ತಲಿನ ನಿವಾಸಿಗಳ ವಿಚಾರಣೆ, ಸಿಸಿಟಿವಿ ದೃಶ್ಯಗಳು ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳ ಪರಿಶೀಲನೆಯ ಬಳಿಕ ಗಗನ್ನ ಮೇಲೆ ಅನುಮಾನ ಬಂದು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಪೊಲೀಸರು ಆರೋಪಿಯ ವಿರುದ್ಧ ಕೊಲೆ ಹಾಗೂ ಸಾಕ್ಷ್ಯ ನಾಶಪಡಿಸಿದ ಆರೋಪಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ, ದೋಚಿದ್ದ ಚಿನ್ನಾಭರಣಗಳು ಇನ್ನೂ ವಶಕ್ಕೆ ಸಿಕ್ಕಿಲ್ಲ. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.