

ರಾಮನಗರ: ಬಿಡದಿ ಟೌನ್ ಶಿಪ್ ವಿಚಾರ ಮುಗಿದ ಅಧ್ಯಾಯ. ಏಳು ಗ್ರಾಮಗಳಲ್ಲಿ ಭೂ ಸ್ವಾಧೀನಕ್ಕೆ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಉಳಿದೆರಡು ಗ್ರಾಮಗಳಿಗೂ ಶೀಘ್ರ ಅಧಿಸೂಚನೆ ಹೊರಬೀಳಲಿದೆ. ಟೌನ್ ಶಿಪ್ ಬೇಡ ಎನ್ನುವವರು ಕೋರ್ಟ್ ಗೆ ಹೋಗಲಿ ಎಂದು ಮಾಗಡಿ ಶಾಸಕ ಹೆಚ್. ಸಿ. ಬಾಲಕೃಷ್ಣ ಮಂಗಳವಾರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೌನ್ ಶಿಪ್ ನಿರ್ಮಾಣಕ್ಕೆ ಭೂಮಿ ಕೊಡಲು ಒಪ್ಪಿರುವವರು ಪರಿಹಾರ ಮತ್ತು ಪಾಲುದಾರಿಕೆ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಯೋಜನೆ ಬೇಡ ಎನ್ನುವವರು ಹೋರಾಟ ಮಾಡ್ತಿದ್ದಾರೆ. ರೈತರ ಜೊತೆಗೆ ಜಿಲ್ಲಾಧಿಕಾರಿ ಈಗಾಗಲೇ ಸಭೆ ಮಾಡಿದ್ದಾರೆ. ಆ ಪೈಕಿ ಕೆಲವರು ಒಪ್ಪಿದ್ದು, ಉಳಿದವರು ಬೇಡ ಎನ್ನುತ್ತಿದ್ದಾರೆ. ಅವರನ್ನು ವಿಶ್ವಾಸಕ್ಕೆ ಪಡೆಯಲಾಗುವುದು ಎಂದರು.
ಯೋಜನಾ ಪ್ರದೇಶದ ರೈತರ ಅಹವಾಲು ಆಲಿಸಲು ಶೀಘ್ರದಲ್ಲಿಯೇ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿರುವುದಾಗಿ ತಿಳಿಸಿದರು.
ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಬಾಲಕೃಷ್ಣ, ಸಚಿವ ಸಂಪುಟದಲ್ಲಿ ಶೇ.60 ರಷ್ಟು ಹೊಸಬರು ಹಾಗೂ ಶೇ. 40 ರಷ್ಟು ಹಳಬರಿಗೆ ಅವಕಾಶ ನೀಡುವ ಕುರಿತು ಚರ್ಚೆ ನಡೆದಿದೆ. ನಾನು ಕೂಡಾ ಆಕಾಂಕ್ಷಿಯಾಗಿದ್ದೇನೆ. ಈ ಬಾರಿ ಅವಕಾಶ ಸಿಗುವ ನಿರೀಕ್ಷೆಯಿದೆ ಎಂದರು.
ಈ ವಿಷಯದಲ್ಲಿ ಮುಖ್ಯಮಂತ್ರಿ ಅವರು ಸಚಿವ ಸ್ಥಾನದ ಬಗ್ಗೆ ಯಾವುದೇ ಭರವಸೆ ಕೊಟ್ಟಿಲ್ಲ. ಪಕ್ಷದ ಹೈಕಮಾಂಡ್ ಸಚಿವರ ಪಟ್ಟಿ ಫೈನಲ್ ಮಾಡಲಿದೆ. ಅಲ್ಲಿಯವರೆಗೂ ಕಾಯಬೇಕಾಗಿದೆ ಎಂದರು.