

ಬೆಂಗಳೂರು: ಮುಖ್ಯಮಂತ್ರಿ ಹುದ್ದೆ ತಡವಾಗಿ ಬಂದಿರಬಹುದು, ಆದರೆ ನಿರಾಕರಿಸಿಲ್ಲ ಎಂದು ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ಹೇಳಿದ್ದಾರೆ. ಇಷ್ಟು ವರ್ಷ ಪಟ್ಟ ಪರಿಶ್ರಮ, ಬದ್ಧತೆಗೆ ದೊರೆತ ಪ್ರತಿಫಲದ ಕ್ಷಣ ಎಂದು ಬಣ್ಣಿಸಿದ್ದಾರೆ.
ನಾಳೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲು ಸಜ್ಜಾಗಿರುವಂತೆಯೇ ANI ವಿಶೇಷ ಸಂದರ್ಶದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ತನ್ನ ರಾಜಕೀಯ ಜೀವನ ವೈಯಕ್ತಿಕ ಮಹತ್ವಕಾಂಕ್ಷೆಗಿಂತಲೂ ಕಠಿಣ ಪರಿಶ್ರಮದ ಮೇಲೆ ರೂಪುಗೊಂಡಿದೆ. ಈ ಹಂತ ತಲುಪುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಮಹತ್ವದ್ದಾಗಿದೆ ಎಂದಿದ್ದಾರೆ.
"ಇದು ಕನಸಾಗಿರಲಿಲ್ಲ. ಅದು ಸಮರ್ಪಣೆಯಾಗಿತ್ತು. ಪಕ್ಷಕ್ಕಾಗಿ ಕಠಿಣ ಪರಿಶ್ರಮ ಪಟ್ಟಿದ್ದೇನೆ. ಹೀಗಾಗಿ ಈಗ ಸಿಎಂ ಹುದ್ದೆ ದೊರೆತಿದೆ. ತಡವಾಯಿತು. ಆದರೆ ನಿರಾಕರಿಸಲಿಲ್ಲ. ನಾನು ಕಾಂಗ್ರೆಸ್ ಪಕ್ಷದ ಇತಿಹಾಸದೊಂದಿಗೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಿಂತಿರುವ ಕಾಂಗ್ರೆಸ್ ಸಾಮಾನ್ಯ ಕಾರ್ಯಕರ್ತ ಅಷ್ಟೇ ಎಂದರು.
ಕಾಂಗ್ರೆಸ್ ವರಿಷ್ಠರು ಹಾಗೂ ಗಾಂಧಿ ಕುಟುಂಬದ ಜೊತೆಗಿನ ನಿಷ್ಠೆ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, ಪಕ್ಷ ನನ್ನಲ್ಲಿ ನಂಬಿಕೆ ಇಟ್ಟು ಪದೇ ಪದೇ ಜವಾಬ್ದಾರಿಗಳನ್ನು ವಹಿಸಿತ್ತು ಎಂದು ತಿಳಿಸಿದರು.
ಗಾಂಧಿ ಕುಟುಂಬದ ಮೇಲಿನ ನಿಷ್ಠೆ ಮತ್ತು ಗೌರವದ ಸಂಕೇತವಾಗಿ ತಮ್ಮ ಒಡೆತನದ ಚಿತ್ರಮಂದಿರಕ್ಕೆ (ಥಿಯೇಟರ್ಗೆ) ‘ಇಂದಿರಾ’ ಎಂದು ಇಂದಿರಾ ಗಾಂಧಿ ಹೆಸರು ಇಟ್ಟಿದ್ದೇನೆ. ಅದು ಗಾಂಧಿ ಕುಟುಂಬದೊಂದಿಗೆ ನನಗಿದ್ದ ಬದ್ಧತೆಯಾಗಿದೆ. ಅವರು ನನ್ನನ್ನು ನಂಬಿದ್ದರು. ನನಗೆ ವಿವಿಧ ಅವಕಾಶಗಳನ್ನು ನೀಡಿದರು. ಆದ್ದರಿಂದ ಇಲ್ಲಿಯವರೆಗೆ ರಾಜೀವ್ ಗಾಂಧಿಯವರ ಕುಟುಂಬಕ್ಕೆ ತುಂಬಾ ನಿಷ್ಠರಾಗಿರುವುದು ನನ್ನ ಬದ್ಧತೆಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, ದೇಶದ ಅತ್ಯುನ್ನತ ರಾಜಕೀಯ ಹುದ್ದೆಯನ್ನು ಅಲಂಕರಿಸುವ ಅವಕಾಶಗಳಿದ್ದರೂ ಇಬ್ಬರೂ ವೈಯಕ್ತಿಕ ತ್ಯಾಗಗಳನ್ನು ಮಾಡಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರಧಾನಿಯಾಗಬಹುದಿತ್ತು, ಆದರೆ ಅವರು ಹಾಗೆ ಮಾಡಲಿಲ್ಲ. ದೇಶದ ಜನತೆಗಾಗಿ ಅವರು ಹೋರಾಟ ಮಾಡುತ್ತಿದ್ದಾರೆ.ಆದ್ದರಿಂದ ನನ್ನ ಕೆಲಸವನ್ನು ನಂಬಿಕೆಯಿಂದ ಮಾಡುವುದು ನನ್ನ ಕರ್ತವ್ಯ" ಎಂದು ಅವರು ಹೇಳಿದರು.
Advertisement