

ಬೆಂಗಳೂರು: ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ತಮ್ಮ ಸೇರ್ಪಡೆಯ ಬಗ್ಗೆ ಗುರುವಾರ ವಿಶ್ವಾಸ ವ್ಯಕ್ತಪಡಿಸಿದ ಮಾಜಿ ಸಚಿವ ಸಂತೋಷ್ ಲಾಡ್, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು 2028ರಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ರಾಜ್ಯ ಘಟಕದೊಳಗಿನ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಲಾಡ್, ಕೆಪಿಸಿಸಿಯ ಹೊಸ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್ ಅವರ ನೇಮಕವನ್ನು ಸ್ವಾಗತಿಸಿದರು. ನಾಯಕತ್ವ ಬದಲಾವಣೆಯು ಸಂಘಟನೆಯನ್ನು ಬಲಪಡಿಸುತ್ತದೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮುಂದಿನ ಪಟ್ಟಿಯಲ್ಲಿ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಭರವಸೆ ನನಗಿದೆ. ಬಿಕೆ ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರಾಗಿರುವುದು ನಮಗೆ ತುಂಬಾ ಒಳ್ಳೆಯದು. ಎಲ್ಲರ ಸಂಯೋಜನೆಯೊಂದಿಗೆ, 2028ರಲ್ಲಿ ಉತ್ತಮ ಸರ್ಕಾರವನ್ನು ರಚಿಸಲು ಮತ್ತು ಮತ್ತೆ ಅಧಿಕಾರಕ್ಕೆ ಬರಲು ನಾವು ಎದುರು ನೋಡುತ್ತಿದ್ದೇವೆ' ಎಂದು ಹೇಳಿದರು.
'ಡಿಕೆ ಶಿವಕುಮಾರ್ ಮತ್ತು ಜಿ ಪರಮೇಶ್ವರ ಅವರು ಸಿಎಂ ಮತ್ತು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಾನು ಅವರಿಗೆ ಶುಭ ಹಾರೈಸುತ್ತೇನೆ... ನಾನು ಬಿಕೆ ಹರಿಪ್ರಸಾದ್ ಅವರನ್ನೂ ಭೇಟಿಯಾಗಲಿದ್ದೇನೆ. ಅವರು ಕರ್ನಾಟಕದ ದಿಗ್ಗಜರು... ಅದಕ್ಕಾಗಿಯೇ ಪಕ್ಷವು ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಪರಿಗಣಿಸಿದೆ' ಎಂದರು.
ಕರ್ನಾಟಕದಲ್ಲಿ ಸಂಭಾವ್ಯ ಸಚಿವ ಸಂಪುಟ ಪುನರ್ ರಚನೆ ಬಗ್ಗೆ ನಡೆಯುತ್ತಿರುವ ಊಹಾಪೋಹಗಳ ಮಧ್ಯೆ ಲಾಡ್ ಅವರ ಹೇಳಿಕೆಗಳು ಬಂದಿವೆ.
ಬುಧವಾರ, ಬೆಂಗಳೂರಿನ ಲೋಕ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕರ್ನಾಟಕದ 34ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.
ಶಿವಕುಮಾರ್ ಅವರೊಂದಿಗೆ ಹಿರಿಯ ನಾಯಕ ಜಿ ಪರಮೇಶ್ವರ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಇನ್ನೂ 12 ಶಾಸಕರು ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡರು.
ಹೊಸದಾಗಿ ಕೆಎಚ್ ಮುನಿಯಪ್ಪ, ಕೆಜೆ ಜಾರ್ಜ್, ಎಂಬಿ ಪಾಟೀಲ್, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಯುಟಿ ಖಾದರ್, ಈಶ್ವರ್ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ, ಬೈರತಿ ಸುರೇಶ್ ಮತ್ತು ಶರಣ ಪ್ರಕಾಶ್ ಪಾಟೀಲ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
Advertisement