ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಓಪನ್ ಜೀಪ್‌ನಲ್ಲಿ ಸುತ್ತಾಟ: ನಾಲ್ವರ ವಿರುದ್ಧ ಪ್ರಕರಣ ದಾಖಲು

ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಒಳಭಾಗದಲ್ಲಿರುವ ನಿರ್ಬಂಧಿತ ಪ್ರದೇಶಕ್ಕೆ ಖಾಸಗಿ ವಾಹನದಲ್ಲಿ ಪ್ರವೇಶಿಸಿದ್ದ ನಾಲ್ವರು ಯುವಕರು, ಅಲ್ಲಿನ ವನ್ಯಜೀವಿಗಳೊಂದಿಗೆ ಅಪಾಯಕಾರಿಯಾಗಿ ವರ್ತಿಸಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.
file photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ನಿರ್ಬಂಧಿತ ವಲಯದಲ್ಲಿ ಓಪನ್ ಜೀಪ್‌ನಲ್ಲಿ ಸಂಚರಿಸುತ್ತಿದ್ದ ನಾಲ್ವರು ಯುವಕರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.

ಈ ಯುವಕರು ಆನೆಗಳ ಹಿಂಡನ್ನು ಕೆಣಕುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಒಳಭಾಗದಲ್ಲಿರುವ ನಿರ್ಬಂಧಿತ ಪ್ರದೇಶಕ್ಕೆ ಖಾಸಗಿ ವಾಹನದಲ್ಲಿ ಪ್ರವೇಶಿಸಿದ್ದ ನಾಲ್ವರು ಯುವಕರು, ಅಲ್ಲಿನ ವನ್ಯಜೀವಿಗಳೊಂದಿಗೆ ಅಪಾಯಕಾರಿಯಾಗಿ ವರ್ತಿಸಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಘಟನೆಯ ವೀಡಿಯೊ ವೈರಲ್ ಆಗುತ್ತಿದ್ದಂತೆ ಅರಣ್ಯ ಇಲಾಖೆ ತನಿಖೆ ಆರಂಭಿಸಿತ್ತು.

ಈ ಕುರಿತು ಮಾಹಿತಿ ನೀಡಿದ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಪುಲ್ಕಿತ್ ಮೀನಾ ಅವಪು, ಆರೋಪಿಗಳ ಪೈಕಿ ಒಬ್ಬನನ್ನು ವಶಕ್ಕೆ ಪಡೆಯಲಾಗಿದ್ದು, ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ವೈರಲ್ ವಿಡಿಯೊವನ್ನು ಸಾಕ್ಷ್ಯವಾಗಿ ಪರಿಗಣಿಸಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಆರೋಪಿಗಳು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದ ನಿವಾಸಿಗಳಾಗಿದ್ದಾರೆ. ಮರಡಿಬ್ಬ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ದಾರಿ ಬದಲಿಸಿ ಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶ ಪ್ರವೇಶಿಸಿದ್ದಾರೆ. ಈ ಪ್ರದೇಶವು ಹುಲಿ ಸಂರಕ್ಷಿತ ವಲಯದ ಭಾಗವಾಗಿದ್ದು, ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

file photo
ಗಂಡು ಹುಲಿಯೊಂದಿಗೆ ಕಾದಾಟ: ಭದ್ರಾ ಅರಣ್ಯದಲ್ಲಿ ಹೆಣ್ಣು ಹುಲಿ ಸಾವು

ಮರಡಿಬ್ಬ ಗ್ರಾಮಕ್ಕೆ ತೆರಳುವ ರಸ್ತೆ ಸ್ಥಳೀಯ ನಿವಾಸಿಗಳ ಬಳಕೆಗೆ ಮಾತ್ರ ತೆರೆಯಲಾಗಿದ್ದು, ಇತರೆ ಉದ್ದೇಶಗಳಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ಇತ್ತೀಚೆಗೆ ಹಿನ್ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಕೆಲವು ಪ್ರದೇಶಗಳಲ್ಲಿ ವಾಹನ ಸಂಚಾರ ಸಾಧ್ಯವಾಗಿದ್ದು, ಅದನ್ನೇ ದುರುಪಯೋಗಪಡಿಸಿಕೊಂಡು ಆರೋಪಿಗಳು ಒಳನುಗ್ಗಿದ್ದಾರೆ.

ಇವರು ಸಾಮಾನ್ಯ ಪ್ರವೇಶ ಮಾರ್ಗದಿಂದ ಅಲ್ಲದೆ, ಎನ್.ಆರ್.ಪುರ ಅರಣ್ಯ ವಲಯದ ವ್ಯಾಪ್ತಿಯಲ್ಲಿರುವ ಪ್ರದೇಶದ ಮೂಲಕ ಪ್ರವೇಶಿಸಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವೈರಲ್ ವಿಡಿಯೊದಲ್ಲಿ ಆರೋಪಿಗಳು ಆನೆಗಳ ಹಿಂಡಿನ ಸಮೀಪ ತೆರಳಿ ಜೋರಾಗಿ ಕೂಗಾಡುತ್ತಾ ಅವುಗಳನ್ನು ಕೆಣಕುತ್ತಿರುವ ದೃಶ್ಯಗಳು ಕಂಡುಬಂದಿವೆ.

ಯುವಕರ ವರ್ತನೆಯಿಂದ ಕೆರಳಿದ ಆನೆಯೊಂದು ಜೀಪ್ ಕಡೆಗೆ ಧಾವಿಸಲು ಯತ್ನಿಸಿದ್ದು, ಅದನ್ನು ವಿಡಿಯೊದಲ್ಲಿ ಕಾಣಬಹುದು. ವನ್ಯಜೀವಿಗಳನ್ನು ಪ್ರಚೋದಿಸುವುದು ಮತ್ತು ಸಂರಕ್ಷಿತ ಪ್ರದೇಶದ ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು, ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಅನಧಿಕೃತ ಪ್ರವೇಶ ಮತ್ತು ವನ್ಯಜೀವಿಗಳಿಗೆ ತೊಂದರೆ ನೀಡುವವರ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com