

ಬೆಂಗಳೂರು: ಬೆಂಗಳೂರಿನಲ್ಲಿ ಹೊಸ ಬಡಾವಣೆಗಳನ್ನು ನಿರ್ಮಿಸಿ, ಬೆಂಗಳೂರು ನಗರವನ್ನು ವಿಸ್ತರಿಸುವ ಯೋಜನೆ ಹೊಂದಿರುವ ಬಿಡಿಎ, ಬಿಎಸ್ ಕೆ VI ಹಂತ, ಅರ್ಕಾವತಿ ಮತ್ತು ನಾಡಪ್ರಭು ಕೆಂಪೇಗೌಡ ಬಡಾವಣೆ ಅಭಿವೃದ್ಧಿ ಯೋಜನೆಗಳಲ್ಲಿ ದಯನೀಯವಾಗಿ ವಿಫಲವಾಗಿ, ಕೆಟ್ಟ ಹೆಸರು ಸಂಪಾದಿಸಿದೆ ಎಂದು ಶಾಸಕ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅವರು ಪತ್ರ ಬರೆದಿದ್ದು, ಕರ್ನಾಟಕ ಹೈಕೋರ್ಟ್ ‘ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ, 2016 (#ರೇರಾ) ವನ್ನು ಬಿಡಿಎ ವಸತಿ ಲೇಔಟ್ ಗಳಿಗೆ ಅದರಲ್ಲೂ ವಿಶೇಷವಾಗಿ ಎನ್.ಪಿಕೆಎಲ್ ಗೆ ಅನ್ವಯಿಸದಂತೆ ತಡೆಯಾಜ್ಞೆ ನೀಡಿದೆ ಎಂದು ನಾನು ಪತ್ರಿಕೆಗಳಲ್ಲಿ ಓದಿದ್ದೇನೆ. ಈ ಸುದ್ದಿ ಓದಿದಾಗ ಆಘಾತ ಎನಿಸಿತು.
ತಾಂತ್ರಿಕ ಅಂಶಗಳಿಗಿಂತ ಹೆಚ್ಚಾಗಿ ಪ್ರತಿ ಬಾಧ್ಯಸ್ಥರೂ ಗ್ರಾಹಕರನ್ನು ರಕ್ಷಿಸಬೇಕು ಎಂಬ ಮನೋಭಾವದಿಂದ ರೇರಾ ಕಾಯ್ದೆಯನ್ನು ತರಲಾಗಿದ್ದು, ಇದೇ ದೃಷ್ಟಿಕೋನದಲ್ಲಿಯೇ ಘನವೆತ್ತ ಉಚ್ಚ ನ್ಯಾಯಾಲಯ ನೋಡಬೇಕಾಗಿತ್ತು ಎಂದಿದ್ದಾರೆ.
ರೇರಾ ವ್ಯಾಪ್ತಿಯಿಂದ ತನಗೆ ವಿನಾಯಿತಿ ನೀಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೇಳಿಕೊಂಡಿದೆ. ಇದು ನಿಜಕ್ಕೂ ಆಘಾತಕಾರಿ ವಿಚಾರ. ಬಿಡಿಎ ಒಂದು ಸರ್ಕಾರಿ ಸಂಸ್ಥೆಯಾಗಿದ್ದು, ಖಾಸಗಿ ಡೆವಲಪರ್ ಗಳಂತೆ ಸ್ವತಃ ನಾಗರಿಕ ವಿರೋಧಿ ಮತ್ತು ಗ್ರಾಹಕ ವಿರೋಧಿ ಎಂದು ಪರಿಗಣಿಸುವುದು ಸೂಕ್ತವಲ್ಲ ಎಂದು ಕೇಳಿಕೊಂಡಿದೆ. ಬಿಡಿಎ ತನ್ನ ಕಾರ್ಯಕ್ಷಮತೆಯ ಲೋಪಕ್ಕೆ ನೆಪ ಹುಡುಕುವ ಬದಲು ಹಂಚಿಕೆದಾರರ ಜವಾಬ್ದಾರಿಗಳನ್ನು ಪೂರೈಸಬೇಕು ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರಕ್ಕೆ ನಿಯಂತ್ರಕ ಮತ್ತು ಮೂಲಸೌಕರ್ಯ ಅಭಿವೃದ್ಧಿದಾರ ಅಥವಾ ವಸತಿ ಬಡಾವಣೆಗಳ ಮತ್ತು ವಸತಿ ಸಮುಚ್ಛಯಗಳ ನಿರ್ಮಾಣದಾರ ತಾನು ಎಂಬುದನ್ನು ಬಿಡಿಎ ಮೊದಲು ತಿಳಿಯಬೇಕು ಮತ್ತು ಘೋಷಿಸಿಕೊಳ್ಳಬೇಕು.
ಇದು ನಾಗರಿಕರು, ರಿಯಲ್ ಎಸ್ಟೇಟ್ ನಿಯಂತ್ರಕರು ಮತ್ತು ಕಾನೂನು ನಿರೂಪಕರು ಇಬ್ಬರಿಗೂ ಒಂದು ನಿರ್ದಿಷ್ಟ ಮಟ್ಟದ ಸ್ಪಷ್ಟತೆಯನ್ನು ನೀಡುತ್ತದೆ. ಬೆಂಗಳೂರಿನಲ್ಲಿ ಹೊಸ ಬಡಾವಣೆಗಳನ್ನು ನಿರ್ಮಿಸಿ, ಬೆಂಗಳೂರು ನಗರವನ್ನು ವಿಸ್ತರಿಸುವ ಯೋಜನೆ ಹೊಂದಿರುವ ಬಿಡಿಎ, ಬಿಎಸ್ ಕೆ VI ಹಂತ, ಅರ್ಕಾವತಿ ಮತ್ತು ನಾಡಪ್ರಭು ಕೆಂಪೇಗೌಡ ಬಡಾವಣೆ ಅಭಿವೃದ್ಧಿ ಯೋಜನೆಗಳಲ್ಲಿ ದಯನೀಯವಾಗಿ ವಿಫಲವಾಗಿ, ಕೆಟ್ಟ ಹೆಸರು ಸಂಪಾದಿಸಿದೆ ಎಂದು ಟೀಕಿಸಿದ್ದಾರೆ.
BSK VI ನೇ ಹಂತ ಮತ್ತು ಅರ್ಕಾವತಿ ಬಡಾವಣೆ 20 ವರ್ಷಕ್ಕಿಂತ ಹಳೆಯದಾಗಿದ್ದು, ಅಲ್ಲಿನ ನಿವೇಶನ ಹಂಚಿಕೆದಾರರು ಮತ್ತು ಭೂ ಮಾಲೀಕ ವಿವಾದ, ರಸ್ತೆಗಳ ಕೊರತೆ, ಒಳಚರಂಡಿ ಮತ್ತು ಕುಡಿಯುವ ನೀರು ಪೂರೈಕೆಯಲ್ಲಿ ಅಸಮರ್ಪಕತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಿಡಿಎ ಸಂಕುಚಿತ ದೃಷ್ಟಿಕೋನ ಬಿಟ್ಟು, ರಾಷ್ಟ್ರೀಯ ದೃಷ್ಟಿಕೋನದಲ್ಲಿ ತನ್ನನ್ನು ತಾನು ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಭಾರತ ಸರ್ಕಾರದ ಒಡೆತನದ ಬಿಎಸ್ಎನ್ಎಲ್ -ಟ್ರಾಯ್ ವ್ಯಾಪ್ತಿಗೆ ಒಳಪಡುತ್ತದೆ. ಅದೇ ರೀತಿ ಸಾರ್ವಜನಿಕ ವಲಯದ ವಿಮಾ ಕಂಪನಿಗಳು (ಯುನೈಟೆಡ್, ಓರಿಯಂಟಲ್, ಐಆರ್.ಡಿಎಐ, ನ್ಯೂ ಇಂಡಿಯಾ) ನಿಯಂತ್ರಕರಿಂದ ನಿಯಂತ್ರಿಸಲ್ಪಡುತ್ತವೆ. ಆದರೆ ಬಿಡಿಎ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಮತ್ತು ರೇರಾ ವ್ಯಾಪ್ತಿಯಿಂದ ಹೊರಗುಳಿಯಬೇಕು ಎಂದು ಕೇಳುವುದು ಸೂಕ್ತವಲ್ಲ. ಬಿಡಿಎಯಿಂದ ಭೂಮಿ ಅಥವಾ ಫ್ಲ್ಯಾಟ್ ಖರೀದಿಸುವ ನಾಗರಿಕರು ಗ್ರಾಹಕರೇ ಆಗಿದ್ದಾರೆ ಮತ್ತು ಬಿಡಿಎ ಖರೀದಿದಾರರನ್ನು ಅಥವಾ ಹಂಚಿಕೆದಾರರನ್ನು ಗ್ರಾಹಕರಂತೆಯೇ ಪರಿಗಣಿಸಬೇಕು. ಬಿಡಿಎ ಸರ್ಕಾರಿ ಸಂಸ್ಥೆಯಾಗಿದ್ದು, ತನ್ನ ಹಂಚಿಕೆದಾರರಿಗೆ ಅನಾನುಕೂಲವಾದರೂ ಅವರು ತನ್ನನ್ನು ಪ್ರಶ್ನಿಸಲು ಬರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಮತ್ತು ಆದ್ದರಿಂದ ಇದು ನೆಲದ ಕಾನೂನಿಗಿಂತ ಮೇಲಿದೆ ಎಂದು ಪರಿಭಾವಿಸಬೇಕಿಲ್ಲ ಎಂದಿದ್ದಾರೆ.
ಎನ್ ಪಿ ಕೆ ಎಲ್ ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿ ಎಂಟು- ಒಂಬತ್ತು ವರ್ಷಗಳೇ ಕಳೆದಿದ್ದರೂ, ಬಿಡಿಎ ಮೂಲಸೌಕರ್ಯವನ್ನು ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ರೇರಾ ಮತ್ತು ವಿಧಾನಸಭೆಯ ಅರ್ಜಿಗಳ ಸಮಿತಿಯು ಬಿಡಿಎಯನ್ನು ಹೊಣೆಗಾರಿಕೆಯನ್ನು ಅರ್ಥ ಮಾಡಿಸಿ, ಹಂಚಿಕೆದಾರರಿಗೆ ಆಶಾಕಿರಣವಾಗಿದೆ.
ಬಿಡಿಎ ಲಾಭದಾಯಕ ಸಂಸ್ಥೆಯಲ್ಲ ಎಂಬುದನ್ನು ನಾನೂ ಒಪ್ಪುತ್ತೇನೆ. ಆದರೆ ಅದು ಮಾರಾಟ ಮಾಡುತ್ತಿರುವ ನಿವೇಶನ ಮತ್ತು ವಸತಿ ಸಮುಚ್ಛಯದ ಮನೆಗಳು ಖಾಸಗಿ ಡೆವಲಪರ್ ಗಳ ದರಕ್ಕೆ ಸಮಾನವಾಗಿದೆ ಅಥವಾ ಅದಕ್ಕಿಂತ ಹೆಚ್ಚಾಗಿಯೇ ಇದೆ. ಹೀಗಾಗಿ ಬಿಡಿಎ ಇನ್ನು ಮುಂದೆ ಅವುಗಳನ್ನು 'ಅಗ್ಗದ ವಸತಿ' ಎಂದು ಕರೆಯಲು ಸಾಧ್ಯವಿಲ್ಲ. ಬಿಡಿಎ ಬಡಾವಣೆಯ ಅಭಿವೃದ್ಧಿ ಕಾರ್ಯಗತಗೊಳಿಸುವ ವೇಗವು ಖಾಸಗಿ ವಲಯಕ್ಕಿಂತ ಕಡಿಮೆಯಾಗಿದೆ. ಬಿಡಿಎ ತಾಂತ್ರಿಕ ಅಂಶಗಳನ್ನು ಮುಂದಿಟ್ಟುಕೊಂಡು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಬದಲು ತನ್ನ ನಿವೇಶನ ಹಂಚಿಕೆದಾರರಿಗೆ ಸೂಕ್ತ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ರೇರಾ ಕಾಯಿದೆಯ ಮೂಲ ಉದ್ದೇಶ ಅರ್ಥೈಸಿಕೊಂಡು ಕಾರ್ಯನಿರ್ವಹಿಸುವುದು ಉತ್ತಮ. ಉಚ್ಚ ನ್ಯಾಯಾಲಯವೂ ಸಹ ಇಂತಹ ಪ್ರಕರಣಗಳಲ್ಲಿ ತಾಂತ್ರಿಕ ಅಂಶಗಳಿಗಿಂತ ವಾಸ್ತವ ಅಂಶಗಳಿಗೆ ಗಮನ ಕೊಡಬೇಕಿರುವುದು ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ
Advertisement