

ಮಂಡ್ಯ : ನಾಡಿನ ಹೆಸರಾಂತ ವೀರಗಾಸೆ ಕಲಾವಿದರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಹದೇವಪ್ಪ ನಿಧನರಾಗಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಹಿರಿಯ ಜಾನಪದ ಕಲಾವಿದ ಮಹದೇವಪ್ಪ, ದೇಶ-ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದರು. ವೀರಗಾಸೆ ಎಂದರೆ ಮಹದೇವಪ್ಪ, ಮಹದೇವಪ್ಪ ಎಂದರೆ ವೀರಗಾಸೆ ಎಂಬಷ್ಟರ ಮಟ್ಟಿಗೆ ಅವರು ಹೆಸರಾಗಿದ್ದರು.
ವೀರಗಾಸೆ ಮಹದೇವಪ್ಪ ಅವರ ನಿಧನಕ್ಕೆ ಮಾಜಿ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ಅರ್ಧ ಶತಮಾನಕ್ಕೂ ಹೆಚ್ಚು ಕಾಲ ವೀರಗಾಸೆ ಕಲೆಯನ್ನು ತಮ್ಮ ಉಸಿರಾಗಿಸಿಕೊಂಡಿದ್ದ ಮಹದೇವಪ್ಪನವರು ಮಂಡ್ಯ ಜಿಲ್ಲೆಯ ಹೆಮ್ಮೆಯಷ್ಟೇ ಅಲ್ಲ, ಇಡೀ ಕರ್ನಾಟಕದ ಜಾನಪದ ಲೋಕದ ಆಸ್ತಿಯಾಗಿದ್ದರು ಎಂದು ಸ್ಮರಿಸಿದ್ದಾರೆ.
ಅವರ ಡಮರುಗದ ನಾದ, ಹೆಜ್ಜೆಯ ಗತ್ತು, ಮುಖದ ಭಾವ ಕಂಡು ನಾಡಿನ ಜನ ಮೈಮರೆಯುತ್ತಿದ್ದರು. ಅವರ ನಿಧನದಿಂದ ಜಾನಪದ ಕ್ಷೇತ್ರದಲ್ಲಿ ಎಂದೂ ತುಂಬಲಾರದ ಶೂನ್ಯ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.
ಬಡತನದಲ್ಲೂ ಕಲೆಯನ್ನು ಬಿಡದ ಮಹದೇವಪ್ಪನವರು ನೂರಾರು ಶಿಷ್ಯರಿಗೆ ವೀರಗಾಸೆ ಕಲಿಸಿ, ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸಿದರು. ಮೈಸೂರು ದಸರಾ, ಹಂಪಿ ಉತ್ಸವ, ರಾಜ್ಯದ ಎಲ್ಲಾ ಪ್ರಮುಖ ಜಾನಪದ ಸಮ್ಮೇಳನಗಳಲ್ಲಿ ಅವರ ಕಲಾಪ್ರದರ್ಶನ ನೋಡುಗರ ಮನ ಗೆದ್ದಿತ್ತು ಅವರ ಕಲಾ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಅವರನ್ನು ಸನ್ಮಾನಿಸುವ ಭಾಗ್ಯ ನನ್ನದಾಗಿತ್ತು. ಅತ್ಯಂತ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಅವರದ್ದು ಎಂದು ಸ್ಮರಿಸಿದ್ದಾರೆ.
ಇಂತಹ ಮೇರು ಕಲಾವಿದರ ಕುಟುಂಬಕ್ಕೆ ಸರ್ಕಾರದಿಂದ ಎಲ್ಲಾ ರೀತಿಯ ನೆರವು ಸಿಗಬೇಕು. ಅವರ ಹೆಸರಿನಲ್ಲಿ ಜಾನಪದ ಪ್ರಶಸ್ತಿ ಸ್ಥಾಪಿಸಿ, ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸುವ ಕೆಲಸ ಆಗಬೇಕು ಎಂದು ಸರ್ಕಾರವನ್ನು ಸಚಿವರು ಒತ್ತಾಯಿಸಿದ್ದಾರೆ.
Advertisement