

ಬೆಂಗಳೂರು: ಖ್ಯಾತ ಗಾಯಕಿ ಶಿವಶ್ರೀ ತೇಜಸ್ವಿ ಸೂರ್ಯ ಅವರು ಭಾರತ ಸರ್ಕಾರದ ಸಾಂಸ್ಕೃತಿಕ ಸಚಿವಾಲಯದ ಅಡಿಯಲ್ಲಿ ಬರುವ ಸಂಗೀತ, ನೃತ್ಯ ಮತ್ತು ನಾಟಕದ ರಾಷ್ಟ್ರೀಯ ಅಕಾಡೆಮಿಯಾದ 'ಸಂಗೀತ ನಾಟಕ ಅಕಾಡೆಮಿ' ನೀಡುವ 2025ರ ಪ್ರತಿಷ್ಠಿತ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಸ್ಮರಣಾರ್ಥ ಸ್ಥಾಪಿಸಲಾದ ಈ ಪ್ರಶಸ್ತಿಯು, ದೇಶದ ಶ್ರೀಮಂತ ಕಲಾತ್ಮಕ ಸಂಪ್ರದಾಯಗಳಿಗೆ ಸೇವೆ ಸಲ್ಲಿಸುವ ಯುವ ಕಲಾವಿದರಿಗೆ ನೀಡಲಾಗುತ್ತದೆ. ಶಿವಶ್ರೀ ತೇಜಸ್ವಿ ಸೂರ್ಯ ಅವರನ್ನು ಸಂಗೀತ ವಿಭಾಗದಲ್ಲಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಕರ್ನಾಟಕ ಸಂಗೀತ ಕೃತಿಗಳು, ಭಜನೆಗಳು ಮತ್ತು ಅಭಂಗಗಳ ತಮ್ಮ ಭಾವಪೂರ್ಣ ಗಾಯನದ ಮೂಲಕ ಅವರು ಭಾರತ ಮತ್ತು ಪ್ರಪಂಚದಾದ್ಯಂತದ ಅನೇಕ ಗೋಷ್ಠಿಗಳಲ್ಲಿ ಪಾಲ್ಗೊಂಡು ಹೆಸರುವಾಸಿಯಾಗಿದ್ದಾರೆ. ಜೊತೆಗೆ ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಮಕಾಲೀನ ಪ್ರೇಕ್ಷಕರಿಗೆ ತಲುಪಿಸುವ ಕಾರ್ಯದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಭಗವಂತನ ಕೃಪೆ ಮತ್ತು ಆಶೀರ್ವಾದಗಳಿಗಾಗಿ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನ ಸಂಗೀತದ ಪಯಣವನ್ನು ರೂಪಿಸಿದ, ನನ್ನನ್ನು ಮುನ್ನಡೆಸಿದ ಪೂಜ್ಯ ಗುರುಗಳಿಗೆ ಈ ಗೌರವವನ್ನು ಸಮರ್ಪಿಸುತ್ತೇನೆ. ಈ ಅತ್ಯುನ್ನತ ಗುರುತಿಸುವಿಕೆಗಾಗಿ ನಾನು ಸಂಗೀತ ನಾಟಕ ಅಕಾಡೆಮಿಗೆ ಕೃತಜ್ಞತೆಗಳು. ಭಾರತದ ಶ್ರೀಮಂತ ಸಂಗೀತ ಸಂಪ್ರದಾಯಗಳ ಸೇವೆ ಮಾಡಲು, ಪ್ರಚಾರ ಮಾಡಲು ನಾನು ಸದಾ ಬದ್ಧಳಾಗಿರುತ್ತೇನೆ ಎಂದು ಶಿವಶ್ರೀ ತೇಜಸ್ವಿ ಸೂರ್ಯ ತಿಳಿಸಿರುತ್ತಾರೆ.
ಈ ಪ್ರಶಸ್ತಿಯು ಭಾರತದ ಭಕ್ತಿ ಸಂಗೀತದ ಸಂಪ್ರದಾಯಗಳನ್ನು ವಿವಿಧ ತಲೆಮಾರುಗಳು ಮತ್ತು ದೇಶ-ವಿದೇಶಗಳ ಪ್ರೇಕ್ಷಕರಲ್ಲಿ ಸಂರಕ್ಷಿಸುವ, ಪ್ರಚಾರ ಮಾಡುವ ಮತ್ತು ಜನಪ್ರಿಯಗೊಳಿಸುವಲ್ಲಿ ಅವರು ನೀಡಿದ ಕೊಡುಗೆಗೆ ಸಂದ ಗೌರವವಾಗಿದೆ.
Advertisement