

ಧಾರವಾಡ: ಸೇವೆಯಿಂದ ಅಮಾನತುಗೊಂಡಿದ್ದ ಧಾರವಾಡ ಕೇಂದ್ರ ಕಾರಾಗೃಹದ ಜೈಲರ್ ಸಿದ್ಧರಾಮಪ್ಪ ವಡ್ಡರ್(37) ಅವರು ಶುಕ್ರವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂದು ಧಾರವಾಡ ಹೊಸ ಬಸ್ ನಿಲ್ದಾಣದ ಬಳಿ ಇರುವ ಕಾರಾಗೃಹದ ವಸತಿ ಗೃಹದಲ್ಲಿ ಸಿದ್ಧರಾಮಪ್ಪ ಅವರು ಅತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಅಮಾನತ್ತಾಗಿದ್ದ ಸಿದ್ಧರಾಮಪ್ಪ ಅವರನ್ನು ಮೈಸೂರು ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಇಂದು ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಿದ್ದರಾಮಪ್ಪ ಅವರ ಪತ್ನಿ ಲಕ್ಷ್ಮಿ ಅವರು, ತಮ್ಮ ಪತಿ ಸಾವಿಗೆ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರ ಕಿರುಕುಳವೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಲೋಕ್ ಕುಮಾರ್ ಕಿರುಕುಳದಿಂದ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲೋಕ್ ಕುಮಾರ್ ಸರ್ ಅವರೇ ನನ್ನ ಗಂಡನ ಜೀವ ಪಡೆದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನನ್ನ ಪತಿ ಸಸ್ಪೆಂಡ್ ಮಾಡಿದ್ದಾರೆ, ಜೈಲಿಗೆ ಹಾಕ್ತಾರೆ ಅನ್ನೋ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರನ್ನು ಸಸ್ಪೆಂಡ್ ಮಾಡಿ ಮೈಸೂರಿಗೆ ವರ್ಗಾವಣೆ ಮಾಡಿದ್ರು, ಮೈಸೂರಿಗೆ ಕರ್ತವ್ಯಕ್ಕೆ ಹಾಜರಾಗಲು ಹೊರಟ್ಟಿದ್ದರು. ಆದ್ರೆ ತಂದೆ, ತಾಯಿ ಮುಖ ನೋಡಿ ಹೋಗ್ತಿನಿ ಅಂತ ಹೀಗೆ ಮಾಡಿಕೊಂಡರು. ತಮ್ಮ ಮೇಲೆ ಕ್ರಮ ಆಗುತ್ತೇ ಏನ್ ಮಾಡಬೇಕು ಅಂತಿದ್ರು. ಯಾವಾಗಲೂ ನನ್ನ ಅಲೋಕ್ ಕುಮಾರ್ ಜೈಲಿಗೆ ಕಳಿಸ್ತಾರೆ ಅಂತಿದ್ರು ಎಂದು ಅಲೋಕ್ ಕುಮಾರ್ ಅವರ ಭಯದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಜೈಲಾಧಿಕಾರಿ ಪತ್ನಿ ಲಕ್ಷ್ಮಿ ಆರೋಪಿಸಿದ್ದಾರೆ.
ಅಮಾನತ್ತಾಗಿದ್ದ ಜೈಲರ್!
ಜೈಲರ್ ಸಿದ್ಧರಾಮಪ್ಪ ಅವರನ್ನು ಕಳೆದ ಎರಡು ತಿಂಗಳ ಹಿಂದೆ ಜೈಲಿನಲ್ಲಿ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತ್ತು ಮಾಡಲಾಗಿತ್ತು. ಬಳಿಕ ಜೈಲರ್ ಸಿದ್ದರಾಮಪ್ಪ ಅವರನ್ನು ಮೈಸೂರಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಇನ್ನು ಮೈಸೂರಿಗೆ ಹೋಗಿ ವರದಿ ಮಾಡಿಕೊಂಡಿರಲಿಲ್ಲ. ಆದ್ರೆ, ಜೈಲರ್ ಸಿದ್ದರಾಮಪ್ಪ ಇಂದು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.
Advertisement