

ಬೆಂಗಳೂರು: ರಾಜಸ್ಥಾನದಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಬೆಂಗಳೂರಿನ ಮೂವರು ಪೊಲೀಸರು ಸಿಕ್ಕಿಬಿದ್ದಿದ್ದಾರೆ.
ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲು ಜೈಪುರಕ್ಕೆ ಹೋಗಿದ್ದ ಎಚ್ಎಎಲ್ ಪೊಲೀಸ್ ಠಾಣೆಗೆ ಸೇರಿದ ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮತ್ತು ಇಬ್ಬರು ಕಾನ್ಸ್ಟೆಬಲ್ಗಳು ಭಾನುವಾರ ರಾಜಸ್ಥಾನ ಹೋಟೆಲ್ನಲ್ಲಿ 40,000 ರೂ. ಲಂಚ ಪಡೆದ ಆರೋಪದ ಮೇಲೆ ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಬಿದ್ದಿದ್ದಾರೆ.ಇದರಿಂದ ಬೆಂಗಳೂರು ನಗರ ಪೊಲೀಸರಿಗೆ ತೀವ್ರ ಮುಜುಗರ ಉಂಟಾಗಿದೆ.
ಆರೋಪಿಗಳಾದ ಪೊಲೀಸ್ ಸಿಬ್ಬಂದಿಯನ್ನು ಎಚ್ಎಎಲ್ ಪೊಲೀಸ್ ಠಾಣೆಗೆ ಸೇರಿದ ಸಬ್ ಇನ್ಸ್ಪೆಕ್ಟರ್ ಅನಿತಾ ಕೆ ಮತ್ತು ಹೆಡ್ ಕಾನ್ಸ್ಟೆಬಲ್ಗಳಾದ ಉಳ್ಳವಪ್ಪ ತೇಗೂರ್ ಮತ್ತು ಯತೀಶ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ರಾಜಸ್ಥಾನದ ಜೈಪುರದಲ್ಲಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ಕಾನ್ಸ್ಟೆಬಲ್ ಒಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ವೈಟ್ಫೀಲ್ಡ್ ವಿಭಾಗ) ಸೈದುಲು ಅಡಾವತ್ ಟಿಎನ್ಐಇಗೆ ತಿಳಿಸಿದ್ದಾರೆ.
ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು. ಪ್ರಕರಣವನ್ನು ದುರ್ಬಲಗೊಳಿಸಲು 2 ಲಕ್ಷ ರೂ.ಪಡೆಯಲು ಯತ್ನಿಸಲಾಗಿದೆ. ವ್ಯಕ್ತಿ ಮತ್ತು ಆತನ ಕುಟುಂಬ ಸದಸ್ಯರು ವರದಕ್ಷಿಣೆ ಕಿರುಕುಳ ಆರೋಪ ಎದುರಿಸುತ್ತಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಹಿಳಾ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿ ಪ್ರಕರಣದ ತನಿಖೆಗಾಗಿ ಜೈಪುರಕ್ಕೆ ಹೋಗಿದ್ದರು, ಅಲ್ಲಿ ಅವರು ಪ್ರಕರಣವನ್ನು ದುರ್ಬಲಗೊಳಿಸಲು ಮತ್ತು ಕುಟುಂಬ ಸದಸ್ಯರನ್ನು ಆರೋಪಗಳಿಂದ ಮುಕ್ತಗೊಳಿಸಲು 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಪೊಲೀಸ್ ಸಿಬ್ಬಂದಿ ಆರೋಪಿಗಳಿಗೆ ಹಣವನ್ನು ಹೊಂದಿಸಲು ಸೂಚಿಸಿ, ಅದನ್ನು ಸಂಗ್ರಹಿಸಲು ಭಾನುವಾರ ಬೆಳಿಗ್ಗೆ ಜೈಪುರದ ಹೋಟೆಲ್ ಗಂಗೌರ್ಗೆ ಹೋಗಿದ್ದರು ಎನ್ನಲಾಗಿದೆ. ದೂರಿನ ನಂತರ, ಎಸಿಬಿ ಹೋಟೆಲ್ನಲ್ಲಿ ಬಲೆ ಬೀಸಿತು ಮತ್ತು ಹೆಡ್ ಕಾನ್ಸ್ಟೆಬಲ್ ಉಳ್ಳವಪ್ಪ ತೇಗೂರ್ 40,000 ರೂ.ಗಳನ್ನು ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ಹೆಚ್ಚಿನ ತನಿಖೆಯಲ್ಲಿ ಬಂಧಿತರಾದ ಇತರ ಇಬ್ಬರು ಪೊಲೀಸರ ಪಾತ್ರ ಬಹಿರಂಗವಾಗಿದೆ.
Advertisement