

ಬೆಂಗಳೂರು: ಭಾರತೀಯ ಜನತಾ ಪಾರ್ಟಿಯು ವೋಟ್ ಚೋರಿ ಮಾಡಿತು. ಬಳಿಕ ಸೀಟ್ ಚೋರಿ ಸಹ ಮಾಡಿತು. ಈಗ ಅದರ ಮುಂದುವರಿದ ಭಾಗವಾಗಿ ಪಕ್ಷ ಚೋರಿ ಮಾಡುವತ್ತ ಸಾಗುತ್ತಿದೆ ಎಂದು ತೆಲಂಗಾಣ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮೀನಾಕ್ಷಿ ನಟರಾಜನ್ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಧ್ಯಪ್ರದೇಶದಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿತ್ತು. ಮಧ್ಯಪ್ರದೇಶ ವಿಧಾನಸಭೆ ಸಂಖ್ಯಾಬಲದಿಂದ 3 ಸೀಟುಗಳ ಆಯ್ಕೆಗೆ ಅವಕಾಶವಿತ್ತು. ಅದರಲ್ಲಿ ಆಡಳಿತ ಪಕ್ಷ ಬಿಜೆಪಿಗೆ 2 ಹಾಗೂ ಕಾಂಗ್ರೆಸ್ ಪಕ್ಷಕ್ಕೆ 1 ಸೀಟು ಇದ್ದವು.
58 ಶಾಸಕರ ಸಂಖ್ಯಾಬಲದ ಅಗತ್ಯವಿದ್ದು, ಕಾಂಗ್ರೆಸ್ ಪಕ್ಷ ಅದಕ್ಕಿಂತ ಹೆಚ್ಚಿನ ಸಂಖ್ಯಾಬಲವಿತ್ತು. ಆದರೆ, ಬಿಜೆಪಿ ಮೂರನೇ ಅಭ್ಯರ್ಥಿ ಆಯ್ಕೆಗೆ ಕೇವಲ 48 ಶಾಸಕ ಸಂಖ್ಯಾಬಲ ಹೊಂದಿತ್ತು. ಆಮೂಲಕ ಬಿಜೆಪಿ 10 ಶಾಸಕರ ಕೊರತೆ ಹೊಂದಿತ್ತು ಎಂದು ವಿವರಿಸಿದರು.
ಬಿಜೆಪಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸಿದಾಗಲೇ, ಅವರು ಯಾವ ಹಂತಕ್ಕೆ ಇಳಿದು ಮೂರನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳುತ್ತಾರೆ ಎಂಬ ಸ್ಪಷ್ಟತೆ ಸಿಕ್ಕಿತ್ತು. ಮೊದಲು ಎರಡು ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ನಿರ್ಧರಿಸಿದ್ದ ಬಿಜೆಪಿ ನಂತರ ಮೂರನೇ ಅಭ್ಯರ್ಥಿ ಕಣಕ್ಕಿಳಿಸಿತು. ಬಿಜೆಪಿಯವರು ಷಡ್ಯಂತ್ರ, ನೈತಿಕತೆ, ಮುಖವಾಡ ಬಯಲಾಗಿದೆ. ನಾನು 3 ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಫಾರಂ 26ನಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ನಡುವೆ ಯಾವುದೇ ವ್ಯತ್ಯಾಸ ಇಲ್ಲ.