

ಬೆಂಗಳೂರು: ಬಹುನಿರೀಕ್ಷಿತ ನಾಡಪ್ರಭು ಕೆಂಪೇಗೌಡ ಬಡಾವಣೆಯ ಪ್ರಮುಖ ಆರ್ಟೀರಿಯಲ್ ರಸ್ತೆ (MAR) ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿರುವಾಗಲೇ, ರಸ್ತೆಯೊಂದು ಕುಸಿದಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ಈ ಕುರಿತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ಪಷ್ಟನೆ ನೀಡಿದ್ದು, ಅವು ಹಳೆಯ ನಿರ್ಮಾಣ ಹಂತದ ಚಿತ್ರಗಳಾಗಿದ್ದು, ರಸ್ತೆಯ ಇಂದಿನ ಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ತಿಳಿಸಿದೆ.
ಪ್ರಮುಖ ಆರ್ಟೀರಿಯಲ್ ರಸ್ತೆಯ ಉದ್ಘಾಟನೆಗೆ ಮುನ್ನವೇ ಈ ಚಿತ್ರಗಳು ವ್ಯಾಪಕವಾಗಿ ಹರಿದಾಡುತ್ತಿದ್ದ ಹಿನ್ನೆಲೆ, ಬಿಡಿಎ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ವೈರಲ್ ಆಗಿರುವ ರಸ್ತೆಯ ಕುಸಿತ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಸಂಭವಿಸಿದ್ದು, ತಕ್ಷಣವೇ ಅದನ್ನು ಸರಿಪಡಿಸಲಾಗಿತ್ತು ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಈಗ ಉದ್ಘಾಟನೆಗೊಳ್ಳುತ್ತಿರುವುದು ಕೇವಲ ಮುಖ್ಯ ರಸ್ತೆಯಾಗಿದ್ದು, ಸರ್ವಿಸ್ ರಸ್ತೆಗಳು ಇದರ ಭಾಗವಾಗಿಲ್ಲ. ನ್ಯಾಯಾಲಯದ ತಡೆಯಾಜ್ಞೆ ಇರುವ ಕಾರಣ ಐದು ಸ್ಥಳಗಳಲ್ಲಿ ಸರ್ವಿಸ್ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದ್ದರಿಂದ ಆ ಭಾಗಗಳನ್ನು ಸಾರ್ವಜನಿಕ ಸಂಚಾರಕ್ಕೆ ತೆರೆಯಲಾಗಿಲ್ಲ ಎಂದು ತಿಳಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳು ಸುಳಿಕೆರೆ ಮೀಸಲು ಅರಣ್ಯ ಪ್ರದೇಶದ ಸಮೀಪ, 6.40 ಕಿಲೋಮೀಟರ್ ಚೈನೇಜ್ನ ಎಡಭಾಗದ ಸರ್ವಿಸ್ ರಸ್ತೆಯಲ್ಲಿನ ಸ್ಥಳಕ್ಕೆ ಸಂಬಂಧಿಸಿದ್ದಾಗಿದೆ. ಅಲ್ಲಿ 4 ಮೀಟರ್ × 4 ಮೀಟರ್ ಗಾತ್ರದ ಆರ್ಸಿಸಿ (RCC) ವನ್ಯಜೀವಿ ಸಂಚಾರ ಮಾರ್ಗ (Animal Crossing Box) ಹಾಗೂ ಎರಡು ಆರ್ಸಿಸಿ ಬಾಕ್ಸ್ ಕಲ್ವರ್ಟ್ಗಳನ್ನು ನಿರ್ಮಿಸಲಾಗಿದೆ.
ಈ ಪ್ರದೇಶದಲ್ಲಿ ಸುಮಾರು ಏಳು ಮೀಟರ್ ಎತ್ತರದ ಮಣ್ಣಿನ ತಡೆಗೋಡೆ (Embankment) ನಿರ್ಮಿಸಲಾಗಿದ್ದು, ಮೀಸಲು ಅರಣ್ಯ ಪ್ರದೇಶವಾಗಿರುವುದರಿಂದ ಭಾರೀ ಯಂತ್ರೋಪಕರಣಗಳ ಬಳಕೆಗೆ ನಿರ್ಬಂಧ ಇತ್ತು. ಜೊತೆಗೆ, ಆರ್ಸಿಸಿ ರಚನೆಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕಾದ ಕಾರಣ ಅಗತ್ಯ ಮಟ್ಟದ ಮಣ್ಣಿನ ಸಾಂದ್ರತೆ (Compaction) ಸಾಧಿಸುವುದು ತಾಂತ್ರಿಕವಾಗಿ ಸವಾಲಾಗಿತ್ತು ಎಂದು ಬಿಡಿಎ ವಿವರಿಸಿದೆ.
ಇತ್ತೀಚಿನ ಮಳೆಯ ಸಂದರ್ಭದಲ್ಲಿ ಸರ್ವಿಸ್ ರಸ್ತೆ ಕಾಮಗಾರಿ ಇನ್ನೂ ನಡೆಯುತ್ತಿದ್ದಾಗ, ವನ್ಯಜೀವಿ ಸಂಚಾರ ಮಾರ್ಗದ ಪಕ್ಕದ ಮಣ್ಣಿನ ಭಾಗದಲ್ಲಿ ಸುಮಾರು 300 ಮಿಲಿಮೀಟರ್ನಷ್ಟು ಸ್ಥಳೀಯ ಕುಸಿತ (Localised Settlement) ಉಂಟಾಗಿತ್ತು. ಆದರೆ, ಇದರಿಂದ ಆರ್ಸಿಸಿ ರಚನೆಗಳಿಗೆ ಯಾವುದೇ ಹಾನಿ, ಬಿರುಕು ಅಥವಾ ರಚನಾತ್ಮಕ ಸಮಸ್ಯೆ ಉಂಟಾಗಿಲ್ಲ.
ಕುಸಿದ ಭಾಗವನ್ನು ನಂತರ ಮರುಮಣ್ಣು ತುಂಬಿಸಿ, ಮರುಸಾಂದ್ರೀಕರಿಸಿ ಹಾಗೂ ಮರುಡಾಂಬರೀಕರಣ ನಡೆಸುವ ಮೂಲಕ ರಸ್ತೆಯನ್ನು ಮೂಲ ವಿನ್ಯಾಸದ ಮಟ್ಟಕ್ಕೆ ಮರುಸ್ಥಾಪಿಸಲಾಗಿದೆ. ಹೀಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳು ಪ್ರಸ್ತುತ ರಸ್ತೆಯ ಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ. ನಿರ್ಮಾಣ ಹಂತದಲ್ಲಿ ಉಂಟಾದ ತಾತ್ಕಾಲಿಕ ಸಮಸ್ಯೆಯನ್ನು ಈಗಾಗಲೇ ಸಂಪೂರ್ಣವಾಗಿ ಸರಿಪಡಿಸಲಾಗಿದ್ದು, ಉದ್ಘಾಟನೆಗೊಳ್ಳುತ್ತಿರುವ ಮುಖ್ಯ ರಸ್ತೆ ಸುರಕ್ಷಿತವಾಗಿದೆ ಎಂದು ಸ್ಪಷ್ಟನೆ ನೀಡಿದೆ.