

ಚಿಕ್ಕಬಳ್ಳಾಪುರ: ನಗರದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು. ನಗರದ ಕನ್ನಡ ಭವನದಲ್ಲಿ ನಡೆದ ಕೆಂಪೇಗೌಡ ಜಯಂತಿ ಆಚರಣೆ ವೇಳೆ ಶಾಸಕ ಪ್ರದೀಪ್ ಈಶ್ವರ್ ಅವರನ್ನು ವೇದಿಕೆಯಿಂದ ಆಚೆ ಕಳುಹಿಸುವಂತೆ ಕುಮಾರಸ್ವಾಮಿ, ಸಂಸದ ಡಾ.ಕೆ ಸುಧಾಕರ್ ಬೆಂಬಲಿಗರು ಗಲಾಟೆ ಮಾಡಿದ್ದಾರೆ.
ಶಾಸಕ ಪ್ರದೀಪ್ ಈಶ್ವರ್ ಹುಚ್ಚ, ಎಚ್. ಡಿ. ಕುಮಾರಸ್ವಾಮಿ ಅವರ ಕ್ಷಮೆ ಕೇಳಬೇಕು. ಕಾರ್ಯಕ್ರಮದಿಂದ ಹೊರಹೋಗಬೇಕು ಎಂದು ಒಕ್ಕಲಿಗ ಸಮುದಾಯ ಮತ್ತು ಜೆಡಿಎಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸದ ಡಾ. ಕೆ. ಸುಧಾಕರ್ ವೇದಿಕೆಗೆ ಬರುತ್ತಿದ್ದಂತೆ ವಾತಾವರಣ ಮತ್ತಷ್ಟು ಬಿಗಡಾಯಿಸಿತು. ಶಾಸಕ ಪ್ರದೀಪ್ ಈಶ್ವರ್ ಭಾಷಣ ಆರಂಭಿಸುತ್ತಿದ್ದಂತೆಯೇ ಗೊಂದಲದ ಗೂಡಾಗಿತ್ತು.
ಬಳಿಕ ಕಾರ್ಯಕ್ರಮದಿಂದ ಹೊರಗೆ ಬಂದ ಪ್ರದೀಪ್ ಈಶ್ವರ್, ಪದೇ ಪದೇ ಮೀಸೆ ತಿರುವಿ ಕೂದಲು ಕಿತ್ತು, ಎದೆ ತಟ್ಟಿಕೊಳ್ಳುತ್ತಾ ನನ್ನನ್ನು ಯಾರೂ ಏನು ಮಾಡಲು ಸಾಧ್ಯವಿಲ್ಲ ಎನ್ನುವ ರೀತಿಯಲ್ಲಿ ಹಾವ ಭಾವ ಪ್ರದರ್ಶಿಸಿದ್ದಾರೆ.
ಈ ವೇಳೆ ವ್ಯಕ್ತಿಯೊಬ್ಬರು ಶಾಸಕರ ಮೇಲೆ ಚಪ್ಪಲಿ ಎಸೆದಿದ್ದಾರೆ. ಆ ಚಪ್ಪಲಿ ಪೊಲೀಸ್ ಅಧಿಕಾರಿಗಳ ಮೇಲೆ ಬಿದ್ದಿದ್ದು, ಚಪಲಿ ಎಸೆದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ನಾನು ಜಿಲ್ಲೆಯ ಶೋಷಿತ ಏಕೈಕ ಓಬಿಸಿ ಶಾಸಕ. ಇವತ್ತು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಕರೆದು ಕುಮಾರಣ್ಣನ ಬೆಂಬಲಿಗರು ಶೋಷಿತ ಶಾಸಕನನ್ನು ಅವಮಾನ ಮಾಡಿದ್ದಾರೆ. ಕುಮಾರಣ್ಣ ನಿನ್ನ ಚೇಲಾಗಳಿಗೆ ಹೆದರಲ್ಲ. ಜಿಲ್ಲೆಯಲ್ಲಿ ಒಬಿಸಿ ಶೋಷಿತರು ಬದುಕಬಾರದಾ ಕುಮಾರಣ್ಣ ಎಂದು ಪ್ರಶ್ನಿಸಿದರು.
ಕುಮಾರಣ್ಣ ನೀನು ಡಿಕೆ ಶಿವಕುಮಾರ್ ಸಹಿಸಲ್ಲ. ಚಲುವಣ್ಣ ಸಹಿಸಲ್ಲ, ಓಬಿಸಿ ಶಾಸಕನನ್ನು ಸಹಿಸಲ್ಲ. ಕುಮಾರಣ್ಣ ನಿನ್ನ ಚೇಲಾಗಳಿಗೆ ಹೆದರಲ್ಲ. ತಾಕತ್ ಇದ್ರೆ ಬಾ..ಚಿಕ್ಕಬಳ್ಳಾಪುರದಲ್ಲಿ ಬಂದು ಚುನಾವಣೆಯಲ್ಲಿ ನಿಂತ್ಕೊಬೇಕು. ನೀನಾ...ನಾನಾ...ನೋಡೇ ಬಿಡೋಣ ಎಂದು ಸವಾಲು ಹಾಕಿದರು.