

ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸಂಬಂಧಪಟ್ಟಂತೆ ಇಂದು ಸಭೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಗತ್ಯ ಅಂಕಿ-ಅಂಶಗಳಿಲ್ಲದೆ ಬರಿಗೈಲಿ ಸಭೆಗೆ ಬಂದ ಅಧಿಕಾರಿಯನ್ನ ಜಿಬಿಎ ಕರ್ತವ್ಯದಿಂದಲೇ ಬಿಡುಗಡೆ ಮಾಡುವಂತೆ ಸ್ಥಳದಲ್ಲೇ ಸೂಚನೆ ನೀಡಿದರು.
ಸಭೆಗೆ ಬರಿಗೈಲಿ ಬಂದ ಅಧಿಕಾರಿ
ಸಚಿವ ಕೃಷ್ಣ ಬೈರೇಗೌಡ ಅವರು ಇಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಇಲಾಖಾ ಪರಿಶೀಲನೆ ಸಭೆ ನಡೆಸಿದ್ದರು. ಈ ವೇಳೆ ಪಶುಸಂಗೋಪನೆ ಇಲಾಖೆಯ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಿದರು. ಇಲಾಖೆಯಲ್ಲಿ 19 ಮಂದಿ ಅಧಿಕಾರಿಗಳಿದ್ದರೂ ಸಚಿವರು ಕರೆದ ಸಭೆಗೆ ಕನಿಷ್ಠ ಅಂಕಿ-ಅಂಶಗಳನ್ನು ಇಲ್ಲದೆ ಬರಿಗೈಲಿ ಬಂದಿದ್ದರು.
ನಾನೇನು ಕಿವಿಯಲ್ಲಿ ದಾಸವಾಳ ಹೂ ಇಟ್ಕಂಡು ಕೂತಿದಿನಾ?
ಇದಕ್ಕೆ ಕೋಪಗೊಂಡ ಸಚಿವ ಕೃಷ್ಣ ಬೈರೇಗೌಡ 'ಅಗತ್ಯ ದಾಖಲೆ ತರದೇ ಬರಿಗೈಲಿ ಬಂದಿದ್ದೀರಾ?' ನಾನೇನು ಕಿವಿ ಮೇಲೆ ದಾಸವಾಳ ಹೂವು ಇಟ್ಟುಕೊಂಡಿದ್ದೀನಾ? ಇದು ಯಾವ ಜಾದು? ಲಕ್ಷಾಂತರ ಬೀದಿ ನಾಯಿಗಳ ಸಂತಾನಹರಣ ಮಾಡಿದ್ದೇವೆ ಎನ್ನುತ್ತೀರಿ, ಆದರೆ ಅವುಗಳ ಸಂಖ್ಯೆ ಮಾತ್ರ ಹಾಗೆಯೇ ಇದೆ. ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನೀವು ಜನರನ್ನು ಮೂರ್ಖರನ್ನಾಗಿಸುತ್ತಿದ್ದೀರಾ? ಯಾವುದೇ ಅಂಕಿಅಂಶಗಳಿಲ್ಲದೆ ಸಭೆಗೆ ಹೇಗೆ ಬರುತ್ತೀರಿ? ಇವರನ್ನು ತಕ್ಷಣ ಕರ್ತವ್ಯದಿಂದ ಬಿಡುಗಡೆ ಮಾಡಿ," ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಗೆ ಖಡಕ್ ಎಚ್ಚರಿಕೆ ನೀಡಿದರು.
ಇವತ್ತು ಎರಡು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಬೆಂಗಳೂರು ನಗರದಲ್ಲಿರುವ ಬೀದಿನಾಯಿಗಳ ಸಮಸ್ಯೆ ಮತ್ತು ಈ ಸಮಸ್ಯೆಗೆ ಕಾನೂನಾತ್ಮಕವಾಗಿ ನಾವು ಹೇಗೆ ದೀರ್ಘಾವಧಿಯ ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ಚರ್ಚಿಸಿದ್ದೇವೆ. ಇನ್ನೊಂದು ಬೆಂಗಳೂರು ನಗರದಲ್ಲಿ ನಾವು ಲಕ್ಷಾಂತರ ಗಿಡಗಳನ್ನ ನೆಡುತ್ತಿದ್ದೇವೆ. ಅದು ಎಲ್ಲಿ ಹೋಗ್ತಾ ಇದೆ? ಗಿಡ ನೆಡೋದಕ್ಕೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡ್ತಿದೆ ಆದ್ರೆ ನೆಟ್ಟ ಗಿಡಗಳೆಲ್ಲ ಎಲ್ಲಿ ಹೋಗ್ತಾವೆ ಅನ್ನೋದು ಪ್ರಶ್ನೆ. ಲಕ್ಷಾಂತರ ಗಿಡ ನೆಟ್ಟರು ಕೆಲವು ತಿಂಗಳ ಬಳಿಕ ನೆಟ್ಟ ಜಾಗದಲ್ಲಿ ಗಿಡಗಳೇ ಇರಲ್ಲ. ಹಾಗಾದ್ರೆ ಗಿಡಗಳೆಲ್ಲ ಎಲ್ಲಿಗೆ ಹೋದವು? ಎಂಬ ಬಗ್ಗೆಯೂ ಚರ್ಚೆ ನಡೆದಿದೆ.
ನಾಯಿಗಳ ಸಂತಾನಹರಣದಲ್ಲಿ ಜಿಬಿಎ ಅಧಿಕಾರಿಗಳ ಕಳ್ಳಾಟ ಇದೆ. ಕಳೆದ 8 ವರ್ಷಗಳ ಅವಧಿಯಲ್ಲಿ 3 ಲಕ್ಷ ನಾಯಿಗಳಿಗೆ ಸಂತಾನಹರಣ ಮಾಡಿದ್ದಾರೆ, ಅದಕ್ಕಾಗಿ 120 ಕೋಟಿ ರೂಪಾಯಿ ಖರ್ಚಾಗಿದೆ. ಆದರೆ ನಾಯಿಗಳ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಹಾಗಾದರೆ ಹಣ ಎಲ್ಲಿ ಹೋಯ್ತು, ಸಂತಾನ ಹರಣ ಯಾರಿಗೆ ಮಾಡಿದ್ರು ಅನ್ನೋ ಸಂಶಯ ಇದೆ ಅಂತಾ ಸಚಿವ ಕೃಷ್ಣ ಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.