Iran-Israel war: ಬೆಂಗಳೂರಿನಲ್ಲಿ 40ಕ್ಕೂ ಹೆಚ್ಚು ವಿಮಾನ ರದ್ದು, ಸಂಕಷ್ಟದಲ್ಲಿ ಪ್ರಯಾಣಿಕರು
ಬೆಂಗಳೂರು: ಪಶ್ಚಿಮ ಏಷ್ಯಾದ ಯುದ್ಧ ಪರಿಸ್ಥಿತಿಯ ಹಿನ್ನೆಲೆ ವಾಯುಪ್ರದೇಶ ನಿರ್ಬಂಧ ಜಾರಿಯಾದ ಪರಿಣಾಮ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA)ದಲ್ಲಿ ಭಾನುವಾರ ಸುಮಾರು 40 ವಿಮಾನಗಳ ಸಂಚಾರ ರದ್ದುಗೊಂಡಿದ್ದು, ಪರಿಣಾಮ ಪ್ರಯಾಣಿಕರು ಸಂಕಷ್ಟಕ್ಕೊಳಗಾಗಿದ್ದಾರೆ.
ಮಾರ್ಚ್ 1ರಂದು ಬೆಂಗಳೂರಿಗೆ ಆಗಮಿಸಬೇಕಿದ್ದ 18 ವಿಮಾನಗಳು ಹಾಗೂ ನಿರ್ಗಮಿಸಬೇಕಿದ್ದ 19 ವಿಮಾನಗಳು ರದ್ದಾಗಿದ್ದು, ಪರಿಣಾಮ ಅಬುಧಾಬಿ, ರಿಯಾದ್, ಜೆದ್ದಾ, ದಮ್ಮಾಮ್, ದುಬೈ ಮತ್ತು ದೋಹಾ ಕಡೆಗೆ ಪ್ರಯಾಣಿಸುತ್ತಿದ್ದವರಿಗೆ ಭಾರಿ ತೊಂದರೆ ಉಂಟಾಗಿದೆ.
ರದ್ದುಗೊಂಡಿರುವ ಬಗ್ಗೆ ಸ್ಪಷ್ಟ ಮಾಹಿತಿ ನೀಡದೆ, ವಸತಿ ಸೌಲಭ್ಯ ಅಥವಾ ಪರಿಹಾರ ನೀಡದೇ ವಿಮಾನ ಕಂಪನಿಗಳು ನಿರ್ಲಕ್ಷ್ಯ ತೋರಿವೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಮದುರೈಯಿಂದ ಲಂಡನ್ಗೆ ಬೆಂಗಳೂರಿನ ಮೂಲಕ ಪ್ರಯಾಣಿಸುತ್ತಿದ್ದ ದೇವಿ ಕಾಸಿರಾಜನ್ ಅವರು ಮಾತನಾಡಿ, ಡಿಂಡಿಗುಲ್ನಿಂದ ತಿರುಚಿಗೆ ಕಾರಿನಲ್ಲಿ ಬಂದು, ಅಲ್ಲಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದ ನಂತರವೇ ನಮ್ಮ ವಿಮಾನ ರದ್ದಾಗಿದೆ ಎಂಬುದು ತಿಳಿಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಮಾನ ಕಂಪನಿ ವಾಯುಪ್ರದೇಶ ಮುಚ್ಚಿರುವುದೇ ಕಾರಣ ಎಂದು ಹೇಳಿ ಪರಿಹಾರ ನೀಡಲು ನಿರಾಕರಿಸಿದೆ. “ವಾಯುಪ್ರದೇಶ ತೆರೆಯುತ್ತಿದ್ದಂತೆ ಕಾಲ್ ಸೆಂಟರ್ ಸಂಪರ್ಕಿಸಿ ಮುಂದಿನ ಲಭ್ಯ ವಿಮಾನದಲ್ಲಿ ಅದೇ ದರದಲ್ಲಿ ಪ್ರಯಾಣಿಸಬಹುದು ಎಂದು ಹೇಳಿದ್ದಾರೆ. ಆದರೆ, ಅದು ಎರಡು-ಮೂರು ವಾರಗಳ ಬಳಿಕ ಸಿಕ್ಕರೆ ಪ್ರಯೋಜನವೇನು?” ಎಂದು ಪ್ರಶ್ನಿಸಿದ್ದಾರೆ.
ಯುಕೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಆದಿತಿ ಗಣಪತಿ ಕೂಡ ವಿಮಾನಯಾನ ಸಂಸ್ಥೆಗಳ ಸಂವಹನದ ಕೊರತೆಯನ್ನು ಪ್ರಶ್ನಿಸಿದ್ದಾರೆ. ಮುಂದಿನ ವೇಳಾಪಟ್ಟಿ ಬಗ್ಗೆ ಕೂಡ ಮಾಹಿತಿಗಳನ್ನು ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರದಿಂದ ತರಗತಿಗಳು ಆರಂಭವಾಗಲಿದ್ದು, ವಿಮಾನ ರದ್ದು ಹಿನ್ನೆಲೆ ಶಾಲೆಗೆ ಗೈರು ಹಾಜರಾಗಲಿದ್ದೇನೆಂದು 9ನೇ ತರಗತಿ ವಿದ್ಯಾರ್ಥಿ ಅಹಾನ್ ಆನಂದ್ ಎಂಬ ಬಾಲಕ ಆತಂಕ ವ್ಯಕ್ತಪಡಿಸಿದ್ದಾನೆ.
ಈ ನಡುವೆ ನಿಗದಿತ ವೇಳಾಪಟ್ಟಿ ಇಲ್ಲದೆ ಹಲವಾರು ಕುಟುಂಬಗಳು ಕಾದು ಕುಳಿತಿರುವ ದೃಶ್ಯಗಳು ವಿಮಾನ ನಿಲ್ದಾಣದಲ್ಲಿ ಕಂಡು ಬರುತ್ತಿದೆ.

