News wrap 05-03-2026 | ಹೊಸ ತೆರಿಗೆ ಹೇರುವ ಸಾಧ್ಯತೆ; ಸಿಎಂ ಬಜೆಟ್ ಬಗ್ಗೆ R Ashok ಟೀಕೆ; BWSSBಗೆ ಹೆಚ್ಚುವರಿ 60 ನೀರಿನ ಟ್ಯಾಂಕರ್; ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

News bulletin
ಸುದ್ದಿ ಮುಖ್ಯಾಂಶಗಳುonline desk

1. ಹೊಸ ತೆರಿಗೆಗಳ ಹೇರುವ ಸಾಧ್ಯತೆ; ಸಿಎಂ ದಾಖಲೆಯ ಬಜೆಟ್ ಬಗ್ಗೆ R Ashok ಟೀಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 6 ರಂದು 2026-27 ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಇದು ಹಣಕಾಸು ಖಾತೆಯನ್ನು ಸಹ ಹೊಂದಿರುವ ಸಿದ್ದರಾಮಯ್ಯ ಅವರ ದಾಖಲೆಯ 17 ನೇ ಬಜೆಟ್ ಆಗಿರುತ್ತದೆ. ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗುರುವಾರ ರಾಜ್ಯ ಬಜೆಟ್ ಮಂಡನೆಗೂ ಮುನ್ನ ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರ 1.15 ಲಕ್ಷ ಕೋಟಿ ಸಾಲ ಪಡೆಯುವ ನಿರೀಕ್ಷೆಯಿದೆ ಮತ್ತು ಜನರ ಮೇಲೆ ಹೊಸ ತೆರಿಗೆಗಳನ್ನು ಹೇರುವ ಸಾಧ್ಯತೆಯಿದೆ ಎಂದು ಹೇಳಿದರು. ಬಜೆಟ್‌ನಲ್ಲಿ ಹೊಸದೇನೂ ಇರುವುದಿಲ್ಲ ಎಂದು ಹೇಳಿದ ಅಶೋಕ್, ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವುದು ಮತ್ತು ಐದು ಖಾತರಿ ಯೋಜನೆಗಳ ಪದೇ ಪದೇ ಉಲ್ಲೇಖಿಸುವುದು ಇದರ ಪ್ರಮುಖ ಅಂಶವಾಗಿರುತ್ತದೆ ಎಂದು ಭವಿಷ್ಯ ನುಡಿದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್‌ನಲ್ಲಿ ತೆರಿಗೆ ಹೊರೆಯನ್ನು ಕಡಿಮೆ ಮಾಡಿದರೆ, ಸಿದ್ದರಾಮಯ್ಯ ಜನರ ಮೇಲೆ ತೆರಿಗೆ ವಿಧಿಸುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಅವರು ತಿಂಗಳಿಗೆ ಸುಮಾರು ನಾಲ್ಕು ತೆರಿಗೆಗಳನ್ನು ವಿಧಿಸುತ್ತಾರೆ ಮತ್ತು ಈಗಾಗಲೇ 36 ತೆರಿಗೆಗಳನ್ನು ಪರಿಚಯಿಸಿದ್ದಾರೆ ಮತ್ತು ಈಗ ಇನ್ನೂ ಹೆಚ್ಚಿನದನ್ನು ವಿಧಿಸಲು ಮಾರ್ಗಗಳನ್ನು ಹುಡುಕುತ್ತಿದ್ದಾರೆ ಎಂದು ಅಶೋಕ ಹೇಳಿದರು.

2. ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಲವಾರು ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಗುರುವಾರ ಏಕಕಾಲದಲ್ಲಿ ದಾಳಿ ನಡೆಸಿದೆ. ಬೆಂಗಳೂರು, ಮಂಡ್ಯ, ಧಾರವಾಡ, ಹಾಸನ, ಮೈಸೂರು, ವಿಜಯಪುರ ಮತ್ತು ಯಾದಗಿರಿ ಸೇರಿದಂತೆ ಇತರ ಜಿಲ್ಲೆಗಳ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಹಾಸನದಲ್ಲಿರುವ ಸತ್ಯನಾರಾಯಣ ಅವರ ನಿವಾಸದ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಹೈ ಡ್ರಾಮಾ ನಡೆಯಿತು. ಅಲ್ಲಿ ಬಾಗಿಲು ತೆರೆಯದ ಕಾರಣ ಲೋಕಾಯುಕ್ತ ಅಧಿಕಾರಿಗಳು ಮನೆಯ ಹೊರಗೆ ಒಂದು ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು ಎಂದು ಮೂಲಗಳು ತಿಳಿಸಿವೆ. ಸತ್ಯನಾರಾಯಣ ಅವರು ಗೇಟ್ ತೆರೆಯಲು ಮಾಡಿದ ಮನವಿಗಳಿಗೆ ಸ್ಪಂದಿಸದಿದ್ದಾಗ, ಅಧಿಕಾರಿಗಳು ಮೊದಲ ಮಹಡಿಗೆ ಹತ್ತಿ ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಇದಲ್ಲದೆ, ಯಾದಗಿರಿ ಮತ್ತು ಬೆಂಗಳೂರಿನಲ್ಲಿರುವ ಉಪ ವಿದ್ಯುತ್ ನಿರೀಕ್ಷಕ ವೀರೇಶ್ (ರುದ್ರಯ್ಯ ಹಿರೇಮಠ್ ಅವರ ಮಗ) ಅವರ ಮನೆಗಳ ಮೇಲೆ ಮತ್ತು ಮಂಡ್ಯ ಲೋಕೋಪಯೋಗಿ ಇಲಾಖೆಯ ಎಇಇ ಎಸ್. ಸತೀಶ್ ಅವರ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.

3. ಬಿಸಿಲ ಬೇಗೆ ನಿಭಾಯಿಸಲು BWSSBಗೆ ಹೆಚ್ಚುವರಿ 60 ನೀರಿನ ಟ್ಯಾಂಕರ್

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚುತ್ತಿದ್ದು, ನಗರದ ಜನರಿಗೆ ಸಮಂಜಸ ಬೆಲೆಯಲ್ಲಿ ಮತ್ತು ಸುರಕ್ಷಿತ ಮೂಲಗಳಿಂದ ಟ್ಯಾಂಕರ್ ನೀರನ್ನು ಪಡೆಯಲು ಸಹಾಯ ಮಾಡಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಆಗಸ್ಟ್ 2025 ರಲ್ಲಿ ಸಂಚಾರಿ ಕಾವೇರಿ ನೀರು ಕಾರ್ಯಕ್ರಮವನ್ನು ಪ್ರಾರಂಭಿಸಿತು. ಇದಕ್ಕೆ ಈಗ ಇನ್ನೂ 60 ಟ್ಯಾಂಕರ್‌ಗಳನ್ನು ಸೇರಿಸಲಾಗುತ್ತಿದೆ. ಜನರು ಆನ್‌ಲೈನ್‌ನಲ್ಲೂ ಟ್ಯಾಂಕರ್ ನೀರಿಗಾಗಿ ನೋಂದಾಯಿಸಿಕೊಳ್ಳಬಹುದು ಮತ್ತು ಈ ಸೇವೆಗಳನ್ನು ಪಡೆಯಬಹುದು. "ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ವಾಸಿಸುವ ಜನರ ನೀರಿನ ಕೊರತೆಯನ್ನು ನಿಭಾಯಿಸಲು ಇದನ್ನು ಪ್ರಾರಂಭಿಸಲಾಗಿದೆ. ನಮ್ಮಲ್ಲಿ ಈಗ 60 ಟ್ಯಾಂಕರ್‌ಗಳಿವೆ ಮತ್ತು ನಾವು ಇನ್ನೂ 60 ಟ್ಯಾಂಕ್‌ಗಳನ್ನು ಸೇರಿಸುತ್ತಿದ್ದೇವೆ" ಎಂದು ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ವಿ ಅವರು ತಿಳಿಸಿದ್ದಾರೆ.

4. ಕಾಲಕಾಲಕ್ಕೆ ಪರೀಕ್ಷೆಗೊಳಪಡಿಸಬಹುದು ಆದರೆ, ಸನಾತನ ಧರ್ಮವನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ: ಸಿಪಿ ರಾಧಾಕೃಷ್ಣನ್

ಸನಾತನ ಧರ್ಮವನ್ನು ಕಾಲದಿಂದ ಕಾಲಕ್ಕೆ ಪರೀಕ್ಷೆಗೆ ಒಳಪಡಿಸಬಹುದು. ಆದರೆ, ಅದನ್ನು ಅಳಿಸಲು ಎಂದಿಗೂ ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ಗುರುವಾರ ಇಲ್ಲಿ ಹೇಳಿದರು. ಜಿಲ್ಲೆಯ ಯಡೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ರಾಜಗೋಪುರದ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿ ಉಪರಾಷ್ಟ್ರಪತಿ ಭಾಗವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಈ ಸಂದರ್ಭವನ್ನು ಆಧ್ಯಾತ್ಮಿಕ ಪುನರುಜ್ಜೀವನ ಮತ್ತು ನಾಗರಿಕತೆಯ ಪುನರುತ್ಥಾನದ ಕ್ಷಣ ಎಂದು ಬಣ್ಣಿಸಿದ ರಾಧಾಕೃಷ್ಣನ್, ಭಾರತವು ಕೇವಲ ಒಂದು ರಾಷ್ಟ್ರವಲ್ಲ, ಬದಲಾಗಿ ಜೀವಂತ ನಾಗರಿಕತೆಯಾಗಿದೆ. ಸಿಂಧೂ ಕಣಿವೆಯಿಂದ ಕನ್ಯಾಕುಮಾರಿಯವರೆಗೆ ಪ್ರಜ್ಞೆಯ ನಿರಂತರ ಹರಿವು ಇದೆ ಎಂದು ಹೇಳಿದರು. ವೇದಗಳ ಶಾಶ್ವತ ಜ್ಞಾನವನ್ನು ಮೊದಲು ಕೇಳಿದ ಪವಿತ್ರ ಭೂಮಿ ಇದಾಗಿದ್ದು, ಭಗವದ್ಗೀತೆಯ ಆಳವಾದ ಸಂದೇಶವು ಮಾನವಕುಲಕ್ಕೆ ಧೈರ್ಯದಿಂದ ವರ್ತಿಸಲು, ಸದಾಚಾರದಿಂದ ಬದುಕಲು ಮತ್ತು ನಂಬಿಕೆಯಿಂದ ಶರಣಾಗಲು ಮಾರ್ಗದರ್ಶನ ನೀಡುತ್ತಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com