ಕಬ್ಬಿಗೆ ಬೆಂಬಲ ಬೆಲೆ ಬಿಕ್ಕಟ್ಟು: ರಾಜ್ಯ ಬಜೆಟ್ ನಲ್ಲಿ ಪರಿಹಾರದ ನಿರೀಕ್ಷೆಯಲ್ಲಿ ಬೆಳೆಗಾರರು!

ಕಬ್ಬಿನ ಸಮಸ್ಯೆಗೆ ಹಲವು ದಿನಗಳಿಂದ ಪರಿಹಾರ ಸಿಕ್ಕಿಲ್ಲ. ಕಡಿಮೆ ಬೆಲೆ ಮತ್ತು ಬಾಕಿ ಪಾವತಿಯಲ್ಲಿ ವಿಳಂಬದ ಬಗ್ಗೆ ಕಬ್ಬು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 farmer Casual Images
ಸಾಂದರ್ಭಿಕ ಚಿತ್ರ
Updated on

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಲು ಸಜ್ಜಾಗುತ್ತಿರುವಂತೆಯೇ ರಾಜ್ಯದ ಕೃಷಿ ವಲಯದಾದ್ಯಂತ ನಿರೀಕ್ಷೆಗಳು ಗರಿಗೆದರಿವೆ. ರಾಜಕೀಯವಾಗಿ ಮಹತ್ವವಾಗಿರುವ ಉತ್ತರ ಕರ್ನಾಟಕದ ಕಬ್ಬು ಪ್ರದೇಶದಿಂದ, ಬರಪೀಡಿತ ಪ್ರದೇಶಗಳವರೆಗೆ ನೀರಾವರಿ ಪರಿಹಾರಕ್ಕಾಗಿ ಕಾಯುತ್ತಿವೆ.

ಕಬ್ಬಿನ ಸಮಸ್ಯೆಗೆ ಹಲವು ದಿನಗಳಿಂದ ಪರಿಹಾರ ಸಿಕ್ಕಿಲ್ಲ. ಕಡಿಮೆ ಬೆಲೆ ಮತ್ತು ಬಾಕಿ ಪಾವತಿಯಲ್ಲಿ ವಿಳಂಬದ ಬಗ್ಗೆ ಕಬ್ಬು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಎಫ್ ಆರ್ ಪಿ ದರದಂತೆ ರಾಜ್ಯ ಸರ್ಕಾರ ಮಧ್ಯಂತರ ಪರಿಹಾರವನ್ನು ಹೆಚ್ಚಿಸಬೇಕು ಎಂಬುದು ರೈತರ ಬೇಡಿಕೆಯಾಗಿದೆ.

ರಸಗೊಬ್ಬರ, ಕಾರ್ಮಿಕರು ಮತ್ತು ಸಾಗಣಿಕೆ ಸೇರಿದಂತೆ ಸಾಕಷ್ಟು ಖರ್ಚಿನಿಂದ ರೈತರು ಬಳಲುತ್ತಿದ್ದಾರೆ. ಕಬ್ಬಿನ ಕಾರ್ಖಾನೆಗಳು ಮತ್ತು ಬೆಳೆಗಾರರ ​​ನಡುವೆ ಹಣ ಪಾವತಿ ಬಿಕ್ಕಟ್ಟು ಪರಿಹರಿಸಲು ಕಟ್ಟುನಿಟ್ಟಾದ ಪಾವತಿ ಗಡವನ್ನು ಕಡ್ಡಾಯಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

 farmer Casual Images
ಹದಗೆಟ್ಟ ರಸ್ತೆಗಳಿಂದ ವರ್ಚಸ್ಸಿಗೆ ಧಕ್ಕೆ: ಬಜೆಟ್ ನಲ್ಲಿ ಪ್ರತಿ ಕ್ಷೇತ್ರಕ್ಕೆ 100 ಕೋಟಿ ಮೀಸಲಿಡಿ; ಕಾಂಗ್ರೆಸ್ ಶಾಸಕರ ಬೇಡಿಕೆಯಿಂದ ಒತ್ತಡದಲ್ಲಿ ಸಿದ್ದರಾಮಯ್ಯ!

ಹಲವಾರು ಸಕ್ಕರೆ ಕಾರ್ಖಾನೆಗಳು ಹಣದ ಹರಿವಿನಲ್ಲಿ ಕೊರತೆ ಅನುಭವಿಸುತ್ತಿರುವುದರಿಂದ ಮುಂದಿನ ಹಂಗಾಮಿಗೆ ತೊಂದರೆಯಾಗದಂತೆ ಸೂಕ್ತ ಪ್ಯಾಕೇಜ್ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಗ್ರಾಮೀಣ ಸಾಲದ ಬಿಕ್ಕಟ್ಟು ಮತ್ತೊಂದು ಪ್ರಮುಖ ಅಂಶವಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಖಾಸಗಿ ಸಾಲದ ಬಲೆಗೆ ಬೀಳದಂತೆ ರಕ್ಷಿಸಲು ವಿಸ್ತೃತ ಬಡ್ಡಿ ರಿಯಾಯಿತಿ, ಬೆಳೆ ಸಾಲದ ಮಿತಿಯನ್ನು ಹೆಚ್ಚಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸುತ್ತಿದ್ದಾರೆ. ಸಹಕಾರಿ ಬ್ಯಾಂಕುಗಳು ಮತ್ತು ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು ಬಲಪಡಿಸುವುದು ಗ್ರಾಮದ ಆರ್ಥಿಕತೆಯನ್ನು ಸ್ಥಿರಗೊಳಿಸಲು ನಿರ್ಣಾಯಕವೆಂದು ಪರಿಗಣಿಸಲಾಗಿದೆ.

ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ಎಫ್‌ಆರ್‌ಪಿ ನಿಗದಿ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಮತ್ತು ಕೃಷಿ ಸಾಲದ ಮಾದರಿಯನ್ನು ಬದಲಾಯಿಸಬೇಕು ಕೆರೆಗಳ ಹೂಳು ತೆಗೆಯಲು ರಾಜ್ಯವು ತೆಲಂಗಾಣ ಮಾದರಿಯನ್ನು ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಆಧುನಿಕ ಎಪಿಎಂಸಿ ಮಾರುಕಟ್ಟೆ ಯಾರ್ಡ್‌ಗಳು, ಉತ್ತಮ ಸಂಗ್ರಹಣೆ, ಗ್ರೇಡಿಂಗ್ ಘಟಕಗಳು ಮತ್ತು ಪಾರದರ್ಶಕ ಬೆಲೆ ಪತ್ತೆ ಕಾರ್ಯವಿಧಾನಗಳು ಇವರ ಪ್ರಮುಖ ಬೇಡಿಕೆಗಳಾಗಿವೆ.

ನೀರಾವರಿ ಕ್ಷೇತ್ರದಲ್ಲಿ ಹೆಚ್ಚಿದ ನಿರೀಕ್ಷೆ:

ಬಜೆಟ್ ನಲ್ಲಿ ನೀರಾವರಿ ಕ್ಷೇತ್ರದ ಮೇಲೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆಯೇ ಎಂಬುದನ್ನು ಕುತೂಹಲದಿಂದ ನೋಡಲಾಗುತ್ತಿದೆ. ಭದ್ರಾ, ಕೃಷ್ಣಾ ಮೇಲ್ದಂಡೆ ಯೋಜನೆ, ಮೇಕೆದಾಟು ಯೋಜನೆ ಮತ್ತು ಕಾವೇರಿ ಆಧಾರಿತ ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ರಾಜಕೀಯ ಮತ್ತು ಪ್ರಾದೇಶಿಕ ಪ್ರಾಮುಖ್ಯತೆ ಹೊಂದಿರುವ ಪ್ರಮುಖ ಯೋಜನೆಗಳು ಗಮನ ಸೆಳೆದಿವೆ.

ಬರಪೀಡಿತ ಮಧ್ಯ ಕರ್ನಾಟಕಕ್ಕೆ ಭದ್ರಾ ಯೋಜನೆ ಪ್ರಮುಖವಾಗಿದೆ. ರಾಷ್ಟ್ರೀಯ ಯೋಜನಾ ಸ್ಥಾನಮಾನವನ್ನು ನೀಡಲಾಗಿದ್ದರೂ, ಕೇಂದ್ರದಿಂದ ಅನುದಾನ ಸಿಕ್ಕಿಲ್ಲ. ರಾಜಕಾಲುವೆ ಮತ್ತು ಏತ ನೀರಾವರಿ ಕಾಮಗಾರಿಗೆ ವೇಗ ನೀಡಲು ಸಾಕಷ್ಟು ಅನುದಾನ ನೀಡಬೇಕು ಎಂಬುದು ಶಾಸಕರ ಬೇಡಿಕೆಯಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com