

ಕಲಬುರಗಿ: ಭಾರತವನ್ನು ಚೀನಾದಂತೆ ಪ್ರಬಲ ಸ್ಪರ್ಧಿಯಾಗಿ ಬೆಳೆಯಲು ಬಿಡುವುದಿಲ್ಲ ಎಂದು ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ ಹೇಳಿಕೆ ವಿವಾದಕ್ಕೆ ಗುರಿಯಾಗಿದೆ. ಹಿಂದೆ ಚೀನಾದ ವಿಷಯದಲ್ಲಿ ಅಮೆರಿಕ ಮಾಡಿದ ತಪ್ಪುಗಳನ್ನು ನಾವು ಮತ್ತೆ ಮಾಡುವುದಿಲ್ಲ. ಭಾರತವು ಅಮೆರಿಕಕ್ಕೆ ಸವಾಲಾಗುವಂತಹ ಅಥವಾ ಸ್ಪರ್ಧಿಯಾಗುವಂತಹ ಮಟ್ಟಕ್ಕೆ ಬೆಳೆಯಲು ನಾವು ಬಿಡುವುದಿಲ್ಲ ಎಂದು ಹೇಳಿದ್ದರು.
ಈ ಹೇಳಿಕೆಯು ಭಾರತದ ರಾಜತಾಂತ್ರಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವಂತೆ ಭಾರತದ ಬಗ್ಗೆ ಅಮೆರಿಕ ವಿದೇಶಾಂಗ ಸಚಿವರ ಹಗುರ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಜೈಶಂಕರ್ ಅವರ ವಿದೇಶಾಂಗ ನೀತಿಯೇ ಕಾರಣವಾಗಿದೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಅವಮಾನ ಅನುಭವಿಸುವಂತಾಗಿದೆ ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದ ಪ್ರಿಯಾಂಕ್ ಖರ್ಗೆ, ಇರಾನ್ ವಿರುದ್ಧದ ಯುದ್ದದ ಪರಿಣಾಮದಿಂದಾಗಿ ಭಾರತ, ರಷ್ಯಾದಿಂದ 30 ದಿನಗಳ ವರೆಗೆ ತೈಲ ಖರೀದಿಸಲು ಅನುಮತಿ ನೀಡಿದ್ದೇವೆ ಎಂದು ಅಮೆರಿಕದವರು ಹೇಳಿಕೆ ನೀಡಿದ್ದಾರೆ. ಭಾರತಕ್ಕೆ ಅನುಮತಿ ನೀಡಲು ಅವರು ಯಾರು ? ಮೋದಿ, ಜೈಶಂಕರ್ ಸೇರಿದಂತೆ ಬಿಜೆಪಿ ನಾಯಕರು ಯಾರೊಬ್ಬರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಭಾರತದ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದರಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಅವಮಾನವಾಗುತ್ತಿದೆ ಎಂದು ಟೀಕಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, " ನಾನು ಮನಸು ಮಾಡಿದರೆ ಮೋದಿ ಅವರ ರಾಜಕೀಯ ಭವಿಷ್ಯ ಹಾಳು ಮಾಡಬಲ್ಲೆ. ಆದರೆ, ಮೋದಿ ನನ್ನ ಸ್ನೇಹಿತರು ಹಾಗಾಗಿ ನಾನು ಹಾಗೆ ಮಾಡುವುದಿಲ್ಲ " ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ ಇದಕ್ಕೂ ಕೂಡಾ ಮೋದಿ ಪ್ರತಿಕ್ರಿಯೆ ನೀಡಿಲ್ಲ. ಯಾಕೆ ಅವರು ಮಾತಮಾಡುತ್ತಿಲ್ಲ, ಮೋದಿಯವರ ಬಗ್ಗೆ ಎಫ್ಸ್ಟೀನ್ ಫೈಲ್ ನಲ್ಲಿ ಏನಾದರೂ ಇದೆಯಾ ? ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯ ವಾಡಿದರು.
ಈ ಹಿಂದೆ ಮಧ್ಯಪ್ರಾಚ್ಯಗಳ ವಿಚಾರದಲ್ಲಿ ಅಮೇರಿಕಾ ಮಧ್ಯೆ ಪ್ರವೇಶಿಸಿದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಆ ಬಗ್ಗೆ ಆಕ್ಷೇಪ ಎತ್ತಿದ್ದರು. ಅಂತಹ ಎದೆಗಾರಿಕೆ ಮೋದಿಗೆ ಯಾಕೆ ಇಲ್ಲ? ಎಂದು ಪ್ರಶ್ನಿಸಿದ ಸಚಿವರು, ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಬಿಜೆಪಿವರು ನೆಹರು , ಸೋನಿಯಾ, ರಾಹುಲ್ ಗಾಂಧಿ ಬಗ್ಗೆ ಮಾತನಾಡುತ್ತಾರೆ. ಸ್ವತಃ ಮೋದಿ ಸಿನೆಮಾ ನಟ ನಟಿಯರ ಮದುವೆ, ಕ್ರಿಕೆಟ್ ತಂಡಕ್ಕೆ ಶುಭಾಶಯ ಕೋರಲು ಹೋಗುತ್ತಾರೆ. ಆದರೆ, ವಿದೇಶಾಂಗ ನೀತಿಗಖ ಬಗ್ಗೆ ಭಾರತ ದಿಟ್ಟನಿಲುವಿನ ಬಗ್ಗೆ ಮಾತನಾಡಲು ಅವರಿಗೆ ಸಮಯವಿಲ್ಲ ಎಂದು ಕುಟುಕಿದರು.
ಇದೇ ವೇಳೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಆ ಬಗ್ಗೆ ಕೇಂದ್ರ ಸಚಿವರು ಉತ್ತರಿಸಲಿ. ಬೆಲೆ ಏರಿಕೆಯ ಹೊಡೆತ ಬಗ್ಗೆ ಬಿಜೆಪಿಯವರು ಉತ್ತರಿಸಲಿ ಎಂದು ಸವಾಲು ಹಾಕಿದರು.
Advertisement