ಬೆಣ್ಣೆಹಳ್ಳ ಸೇತುವೆ ಕುಸಿತ: ಶಾಲೆ ತಲುಪಲು ವಿದ್ಯಾರ್ಥಿಗಳ ಸಂಕಷ್ಟ; ಪ್ರತಿನಿತ್ಯ 10 ಕಿ.ಮೀ ಕಾಲ್ನಡಿಗೆ; ಸರ್ಕಾರದ ವಿರುದ್ಧ ಗ್ರಾಮಸ್ಥರ ಆಕ್ರೋಶ
ಗದಗ: ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಕುರ್ಲಗೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವುದು ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕಳೆದ ಮಳೆಗಾಲದಲ್ಲಿ ಅರಭಾವಿ–ಚಳ್ಳಕೆರೆ ರಾಜ್ಯ ಹೆದ್ದಾರಿಯಲ್ಲಿರುವ ಬೆಣ್ಣೆಹಳ್ಳ ಸೇತುವೆ ಕುಸಿದು ಬಿದ್ದಿದ್ದು. ಇದರ ನಂತರ ಸಾರ್ವಜನಿಕ ಸಾರಿಗೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸೇತುವೆ ದುರಸ್ತಿ ಇನ್ನೂ ಆರಂಭವಾಗದ ಕಾರಣ ವಿದ್ಯಾರ್ಥಿಗಳು ಪ್ರತಿದಿನ ಸುಮಾರು 10 ಕಿಲೋಮೀಟರ್ ನಡೆದು ಶಾಲೆ ಮತ್ತು ಕಾಲೇಜು ತಲುಪಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಇದು ಕೇವಲ ವಿದ್ಯಾರ್ಥಿಗಳ ಸಮಸ್ಯೆಯಷ್ಟೇ ಅಲ್ಲ, ಗ್ರಾಮೀಣ ಮೂಲಸೌಕರ್ಯದ ದುರ್ಬಲತೆಯನ್ನೂ ತೋರಿಸುವ ಘಟನೆಯಾಗಿದೆ.
ಪಿಯು ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ನರಗುಂದ ಮತ್ತು ನವಲಗುಂದದ ಕಾಲೇಜುಗಳಿಗೆ ತಲುಪಲು ಪ್ರತೀನಿತ್ಯ ಸಂಕಷ್ಟ ಎದುರಿಸುತ್ತಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಿದ್ಧವಾಗಿರುವ ವಿದ್ಯಾರ್ಥಿಗಳಿಗೂ ಇದೇ ಸಂಕಷ್ಟ ಎದುರಾಗಲಿದೆ. ಶಿಕ್ಷಣ ಪಡೆಯುವ ಉತ್ಸಾಹ ಇದ್ದರೂ ಮೂಲಭೂತ ಸೌಲಭ್ಯಗಳ ಕೊರತೆ ಅವರ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿದೆ.
ಸೇತುವೆ ಕುಸಿತದಿಂದ ವಿದ್ಯಾರ್ಥಿಗಳಷ್ಟೇ ಅಲ್ಲ, ದಿನಗೂಲಿ ಕಾರ್ಮಿಕರು ಹಾಗೂ ಗ್ರಾಮಸ್ಥರೂ ಕೂಡ ಸಂಕಷ್ಟ ಅನುಭವಿಸುತ್ತಿದ್ದಾರೆ. ಪಟ್ಟಣಗಳಿಗೆ ಕೆಲಸಕ್ಕೆ ಹೋಗಬೇಕಾದವರು 10 ಕಿಮೀ ನಡೆದು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ಖಾಸಗಿ ವಾಹನಗಳಲ್ಲಿ ಸುಮಾರು 25 ಕಿಮೀ ದೂರ ಸುತ್ತು ಹಾಕಿ ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಮಯ ಹಾಗೂ ಹಣ ಎರಡೂ ವ್ಯರ್ಥವಾಗುತ್ತಿವೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ಗ್ರಾಮಸ್ಥರು ಸಮಸ್ಯೆಯನ್ನು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಇನ್ನೂ ದುರಸ್ತಿ ಕಾರ್ಯ ಆರಂಭವಾಗಿಲ್ಲ.
ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಮಾತನಾಡುತ್ತಿದೆ. ಆದರೆ, ನಮ್ಮ ಮಕ್ಕಳಿಗೆ ಶಾಲೆಗೆ ಹೋಗಲು ಒಂದು ಸೇತುವೆಯೂ ನಿರ್ಮಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ವಿದ್ಯಾರ್ಥಿಗಳು ನಡೆದುಕೊಂಡು ಪರೀಕ್ಷಾ ಕೇಂದ್ರಗಳಿಗೆ ಹೋಗುತ್ತಿರುವುದನ್ನು ಗಮನಿಸಿದ ಪೊಲೀಸರು ಅವರಿಗೆ ಸಹಾಯ ಮಾಡಿದರು. ಆದರೆ, ಇದು ಸಹಾಯವಷ್ಟೇ. ಇದರಿಂದ ಸಮಸ್ಯೆ ದೂರಾಗುವುದಿಲ್ಲ. ಸಮಸ್ಯೆಯ ಮೂಲಕ್ಕೆ ಪರಿಹಾರ ದೊರಕಬೇಕಾದರೆ ಸೇತುವೆ ದುರಸ್ತಿ ಕೆಲಸ ತಕ್ಷಣ ಆರಂಭವಾಗಬೇಕು ಎಂದು ಹೇಳಿದ್ದಾರೆ.
ನರಗುಂದದ ಶಿಕ್ಷಕ ಮಂಜುನಾಥ ಕಳಸಣ್ಣವರ್ ಅವರು ಮಾತನಾಡಿ, ಸರ್ಕಾರಿ ಪಿಯು ಕಾಲೇಜು ಮತ್ತು ನರಗುಂದದ ಲಯನ್ಸ್ ಕಾಲೇಜಿನಲ್ಲಿ ಪಿಯು ಪರೀಕ್ಷೆಗಳು ನಡೆಯುತ್ತಿವೆ. ಕೊಣ್ಣೂರು, ಶಿರೋಳ ಮತ್ತು ಚಿಕ್ಕ-ನರಗುಂದದ 369 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ತಲುಪಲು ಪ್ರತೀನಿತ್ಯ ಕಷ್ಟಪಡುತ್ತಿದ್ದಾರೆ. ಸುಧಾರಿತ ತಂತ್ರಜ್ಞಾನಗಳ ಯುಗದಲ್ಲಿ, ನಮ್ಮ ವಿದ್ಯಾರ್ಥಿಗಳಿಗೆ ಶಾಲೆಗಳು ಮತ್ತು ಕಾಲೇಜುಗಳನ್ನು ತಲುಪಲು ಸಾರಿಗೆ ಸೌಲಭ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗದಗ ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಮಾತನಾಡಿ, ಸೇತುವೆಯನ್ನು ಪುನಃಸ್ಥಾಪಿಸು ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

