

ಚಿಕ್ಕಮಗಳೂರು: ತನ್ನದೇ ಪಕ್ಷದ ಮುಖಂಡನೋರ್ವನಿಂದ ಹಲ್ಲೆಗೊಳಗಾದ ರಾಜ್ಯ ಕಾಂಗ್ರೆಸ್ ಮಹಿಳಾ ಕಾರ್ಯದರ್ಶಿಯೊಬ್ಬರು ನ್ಯಾಯಕ್ಕಾಗಿ ಬಿಜೆಪಿ ನಾಯಕ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಮೊರೆ ಹೋಗಿದ್ದಾರೆ.
ತಮಗೆ ಪಕ್ಷದ ಮುಖಂಡನಿಂದ ಉಂಟಾಗಿರುವ ಕಿರುಕುಳದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಚಿಕ್ಕಮಗಳೂರು ನಿವಾಸಿ, ರಾಜ್ಯ ಕಾಂಗ್ರೆಸ್ ನ ಕಾರ್ಯದರ್ಶಿ ಚೇತನಾ, ಮನೆ ಖಾಲಿ ಮಾಡಿಸಿದ್ದಕ್ಕೆ ಕೋಪಗೊಂಡು ಕಾಂಗ್ರೆಸ್ ಮುಖಂಡ ರಾಹಿಲ್ ಷರೀಫ್ ಎಂಬ ವ್ಯಕ್ತಿ ತನ್ನ ಮೇಲೆ ಹಾಗೂ ತನ್ನ ಪತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.
ಹಲ್ಲೆ ನಡೆಸಿದ ಬಳಿಕ ಆರೋಪಿ ರಾಹಿಲ್ ಷರೀಫ್ ಎಂಬಾತ ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿದ್ದ, ಆತನನ್ನು ಪೊಲೀಸರು ಬಂಧಿಸಿದ್ದರೂ ಸಹ ಆತ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವುದಕ್ಕಾಗಿ ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕಿ ಚೇತನಾ ಆರೋಪಿಸಿದ್ದಾರೆ.
ಸೂಕ್ತ ಕ್ರಮ, ತನಿಖೆ ನಡೆಯದೇ ಇರುವುದರಿಂದ ಸ್ಥಳೀಯ ಅಧಿಕಾರಿಗಳ ನಡೆಯ ಬಗ್ಗೆ ಅನುಮಾನಗೊಂಡಿರುವ ಚೇತನಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕಿಯೊಬ್ಬರೇ ನ್ಯಾಯಕ್ಕಾಗಿ ಮೋದಿಗೆ ಪತ್ರ ಬರೆದಿರುವುದು ಅಚ್ಚರಿ ಮೂಡಿಸಿದೆ.
ಮನೆ ಖಾಲಿ ಮಾಡಿಸಿದ್ದ ಸಿಟ್ಟಿಗೆ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿರುವ ತಮ್ಮ ಮನೆಗೆ ನುಗ್ಗಿ ರಾಹಿಲ್ ಷರೀಫ್ ಹಲ್ಲೆ ತಮ್ಮ ಕುಟುಂಬದವರ ಮೇಲೆ ಮಾಡಿದ್ದಾರೆ. ಆತ ಈ ಘಟನೆ ಬಳಿಕ ರಾಹಿಲ್ ಷರೀಫ್ ನೇಪಾಳಕ್ಕೆ ಪರಾರಿಯಾಗುತ್ತಿದ್ದ. ರಾಜಸ್ಥಾನದ ಅಜ್ಮೀರ್ ನಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದ. ಬಂಧನದ ಬಳಿಕ ಆರೋಪಿ ರಾಹಿಲ್ ನನ್ನು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಂಗ್ರೆಸ್ ಮುಖಂಡ ಎಂಬ ಕಾರಣಕ್ಕಾಗಿ ಸಮಗ್ರ ತನಿಖೆಯಾಗುತ್ತಿಲ್ಲ. ಆಸ್ಪತ್ರೆಗೆ ದಾಖಲು ಮಾಡಿ ರಕ್ಷಣೆ ಮಾಡಲಾಗುತ್ತಿದೆ. ರಾಹಿಲ್ ಷರೀಫ್ ಮೊಬೈಲ್ ನಲ್ಲಿ ಹಲವು ಹಿಂದೂ ಯುವತಿಯರ ಅಶ್ಲೀಲ ವಿಡಿಯೋಗಳು ಇವೆ. ಹಲವು ಹಿಂದೂ ಹೆಣ್ಣು ಮಕ್ಕಳನ್ನ ಲವ್ ಜಿಹಾದ್ ಬಲೆಗೆ ಬೀಳಿಸಲು ಯತ್ನಿಸಿದ್ದಾನೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ನಾಯಕಿ ಪತ್ರದಲ್ಲಿ ಮನವಿ ಮಾಡಿದ್ದಾರೆ.
ತನಗೂ ತಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿರುವ ಚೇತನಾ, ಈ ಹಿಂದೆಯೂ ಹಲವಾರು ಪ್ರಕರಣದಲ್ಲಿ ರಾಹಿಲ್ ಸಿಕ್ಕಿಬಿದ್ದಿದ್ದ. ಹಿಂದೂ ಯುವತಿಯ ಮನೆಯಲ್ಲಿ ಸಿಕ್ಕಿಬಿದ್ದದ್ದ. ಹೀಗಾಗಿ ಹಿಂದೂ ಹೆಣ್ಣು ಮಕ್ಕಳ ರಕ್ಷಣೆ ಮಾಡಿ ಎಂದು ಮನವಿ ಮಾಡಿದ್ದಾರೆ.
Advertisement