

ಹುಬ್ಬಳ್ಳಿ: ಹುಬ್ಬಳ್ಳಿಯ ದೇಶಪಾಂಡೆ ನಗರದ ಖಾಸಗಿ ಕಟ್ಟಡವೊಂದರಲ್ಲಿ ರಾಸಾಯನಿಕದ ದುಷ್ಪರಿಣಾಮದಿಂದ ನಾಲ್ವರು ಕಾರ್ಮಿಕರು ತೀವ್ರವಾಗಿ ಅಸ್ವತ್ಥಗೊಂಡು ಆಸ್ಪತ್ರೆ ದಾಖಲಾಗಿರುವ ಘಟನೆ ಮಂಗಳವಾರ ನಡೆದಿದೆ.
ಬೆಂಗಳೂರಿನ ಮಾಗಡಿ ನಿವಾಸಿಗಳಾದ ಜಾಫರ್, ಅಹಮದ್, ಜಬಿ ಹಾಗೂ ಹೈದರ್ ಎಂಬ ಕಾರ್ಮಿಕರು ಅಸ್ವಸ್ಥ ಗೊಂಡವರು. ಎಲ್ಇಡಿ ಸಂಬಂಧಿಸಿದ ಕೆಲಸಕ್ಕೆ ಕಳೆದ 10 ದಿನದ ಹಿಂದೆ ಹುಬ್ಭಳ್ಳಿಗೆ ಆಗಮಿಸಿದ್ದರು. ಸೋಮವಾರ ರಾತ್ರಿ ಊಟ ಮಾಡಿ ಕೊಠಡಿಯಲ್ಲಿ ಮಲಗಿದ್ದರು.
ನಾಲ್ವರು ಕಾರ್ಮಿಕರು ಅಂಗಡಿಗೆ ಸೈನ್ಬೋರ್ಡ್ ತಯಾರಿಸುವಲ್ಲಿ ನಿರತರಾಗಿದ್ದರು. ರಾತ್ರಿ ಊಟ ಮಾಡಿ ತಾವು ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಕಿಟಕಿ ಹಾಗೂ ಬಾಗಿಲುಗಳನ್ನು ಬಂದ್ ಮಾಡಿ ಮಲಗಿದ್ದರು. ಯಾವುದೇ ಗಾಳಿ ಇಲ್ಲದ ಕಾರಣ, ಅಂಗಡಿ ನಿರ್ಮಾಣದ ವೇಳೆ ಬಳಸಲಾಗಿದ್ದ ಕೆಮಿಕಲ್ ಕೋಣೆಯಲ್ಲಿ ಹರಡಿದ್ದರಿಂದ ಉಸಿರಾಡಲು ಸಾಧ್ಯವಾಗದೆ ಅಸ್ವಸ್ಥರಾಗಿದ್ದಾರೆಂದು ಹೇಳಲಾಗುತ್ತಿದೆ.
ಈ ನಡುವೆ ಮರುದಿನ ವ್ಯಕ್ತಿಯೊಬ್ಬರು ಅಂಗಡಿ ಶಟರ್ ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ನಾಲ್ವರೂ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರ ನೆರವಿನೊಂದಿಗೆ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆ ಮೂಲಗಳ ಪ್ರಕಾರ, ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿದುಬಂದಿದೆ.
ಈ ಸಂಬಂಧ ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಲ್ಲ. ಕಾರ್ಮಿಕರ ಕುಟುಂಬ ಸದಸ್ಯರು ಬಂದ ನಂತರ ಅವರ ಹೇಳಿಕೆಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಆರೋಗ್ಯ ತಜ್ಞರ ಪ್ರಕಾರ, ಗ್ಲೂಗಳಲ್ಲಿ ಇರುವ ತೊಳ್ಯೂನ್ ಅಂಶವು ಹೆಚ್ಚಿನ ಪ್ರಮಾಣದಲ್ಲಿ ಉಸಿರಾಡಿದರೆ ತಲೆಸುತ್ತು, ವಾಂತಿ, ನಶೆ, ಪ್ರಜ್ಞಾಹೀನತೆ ಸೇರಿದಂತೆ ಗಂಭೀರ ಪರಿಣಾಮ ಉಂಟಾಗಬಹುದು. ಸಮಯಕ್ಕೆ ಚಿಕಿತ್ಸೆ ಸಿಗದಿದ್ದರೆ ಜೀವಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ,
ಗ್ಲೂದಿಂದ ಹೊರಬರುವ ವಿಷಕಾರಿ ಅನಿಲ, ಗಾಳಿ ಇಲ್ಲದ ಕೊಠಡಿಯಲ್ಲಿ ಮಲಗಿದ್ದ ಕಾರಣ ಕಾರ್ಮಿಕರ ಮೇಲೆ ಪರಿಣಾಮ ಬೀರಿರಬಹುದು ಎಂದು ಹೇಳಿದ್ದಾರೆ.
Advertisement