

ಬೆಂಗಳೂರು: ಇಂದು ನಾಡಿನೆಲ್ಲೆಡೆ ಯುಗಾದಿ ಹಬ್ಬದ (Ugadi Festival) ಸಂಭ್ರಮ ಮನೆ ಮಾಡಿದೆ. ಬೆಲೆ ಏರಿಕೆ, ಮಧ್ಯಪ್ರಾಚ್ಯ ಯುದ್ಧ ಭೀತಿಯ ನಡುವೆಯೂ ಸಾಂಪ್ರದಾಯಿಕವಾಗಿ ಆಚರಣೆಯ ಕಳೆ ಕುಂದಿಲ್ಲ. ಹಬ್ಬದ ಹಿನ್ನೆಲೆ ಬೆಂಗಳೂರಿನ ಕೆ ಆರ್ ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ ಸೇರಿದಂತೆ ಪ್ರಮುಖ ಕಡೆಗಳಲ್ಲಿ ಜನರ ಹಣ್ಣು-ತರಕಾರಿ, ಹೂವುಗಳ ಖರೀದಿ ವ್ಯಾಪಾರ ಭರಾಟೆ ಜೋರಾಗಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಕೂಡ ಯುಗಾದಿ ಹಬ್ಬಕ್ಕೆ ಜನರ ಸಡಗರ ಹೆಚ್ಚಾಗಿದೆ.
ಮಧ್ಯರಾತ್ರಿಯಿಂದಲೇ ಕೆ.ಆರ್ ಮಾರ್ಕೆಟ್ನಲ್ಲಿ ವ್ಯಾಪಾರ ಆರಂಭಗೊಂಡಿದ್ದು, ಬೆಂಗಳೂರು ಅಕ್ಕಪಕ್ಕದ ಹೂವಿನ ಬೆಳೆಗಾರರು ನೇರ ಮಾರಾಟ ಮಾಡುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗರು ಆಗಮಿಸಿದ್ದು, ಹೂವು, ಹಣ್ಣು, ಮಾವಿನ ಸೊಪ್ಪು, ಬೇವಿನಸೊಪ್ಪು ಖರೀದಿಸಲು ಮುಗಿಬಿದ್ದಿದ್ದಾರೆ. ಸದ್ಯ ಹೂವು, ಹಣ್ಣಿನ ದರ ಕೊಂಚ ಏರಿದೆ. ಹೂವು,ಹಣ್ಣು, ಮಾವಿನ ಸೊಪ್ಪು, ಬೇವಿನಸೊಪ್ಪು ಖರೀದಿಸಲು ಜನರು ಮುಗಿಬಿದ್ದಿದ್ದಾರೆ.
ಇಂದು ಹೂವಿನ ದರ ಹೀಗಿದೆ:
ಮಲ್ಲಿಗೆ: 1,500- 1,800 ರೂ.
ಮಲ್ಲಿಗೆ ಹೂವಿನ ಹಾರ: 300-500 ರೂ.
ಸೇವಂತಿಗೆ: 200-250 ರೂ.
ಗುಲಾಬಿ: 250 ರೂ.
ಚೆಂಡು ಹೂ: 40-50 ರೂ.
ಒಂದು ಕಟ್ಟು ಬೇವಿನ ಸೊಪ್ಪು: 20 ರೂ.
ಒಂದು ಕಟ್ಟು ಮಾವಿನ ಸೊಪ್ಪು: 25 ರೂ.
ಹಿಂದೂಗಳ ಪಾಲಿಗೆ ಯುಗಾದಿ ವಿಶೇಷ
ಹಿಂದೂ ಪಂಚಾಂಗದ ಪ್ರಕಾರ, ಯುಗಾದಿ ಹಬ್ಬವು ವರ್ಷದ ಮೊದಲನೇ ಹಬ್ಬವಾಗಿದ್ದು, ಪ್ರತಿಯೊಬ್ಬರಿಗೂ ಈ ದಿನ ಹೊಸ ವರ್ಷದ ಪ್ರತಿಜ್ಞೆಯನ್ನು ಸ್ವೀಕರಿಸಲು ಮತ್ತು ಹೊಸ ವರ್ಷವನ್ನು ಉತ್ತಮ ರೀತಿಯಲ್ಲಿ ಪ್ರಾರಂಭಿಸಲು ಅವಕಾಶ ಸಿಗುವುದು.
ಸೃಷ್ಟಿಕರ್ತನಾದ ಬ್ರಹ್ಮ ದೇವನು ಯುಗಾದಿ ಹಬ್ಬದ ದಿನದಂದು ಬ್ರಹ್ಮಾಂಡವನ್ನು ಅಥವಾ ವಿಶ್ವವನ್ನು ಸೃಷ್ಟಿಸಿದನು ಎಂಬುದು ಜನಪ್ರಿಯ ನಂಬಿಕೆಯಾಗಿದೆ. ಹಾಗಾಗಿ, ಯುಗಾದಿ ಹಬ್ಬವನ್ನು ಹೊಸ ಗ್ರಹದ ಮತ್ತು ವಿಶ್ವ ವ್ಯವಸ್ಥೆಯ ಆರಂಭವೆಂದು ಪರಿಗಣಿಸಲಾಯಿತು.
ಯುಗಾದಿ ಹಬ್ಬವು ವಸಂತಕಾಲದ ಆರಂಭದೊಂದಿಗೆ ಸಂಬಂಧವನ್ನು ಹೊಂದಿದ ಹಬ್ಬವಾಗಿದೆ. ಇದು ಹೊಸ ಜನನ, ಸಂತೋಷ, ಅದೃಷ್ಟ, ಫಲವತ್ತತೆ ಮತ್ತು ಪ್ರಗತಿಯ ಸಂಕೇತವಾಗಿದೆ. ಈ ದಿನದಂದು ಹೊಸದಾದ ಮತ್ತು ಸುಂದರವಾದ ಹೂವುಗಳು, ಎಲೆಗಳು ಸ್ಪಷ್ಟವಾದ ಆಕಾಶವನ್ನು ಹಾಗೂ ಸಕಾರಾತ್ಮಕ ಶಕ್ತಿಯುಳ್ಳ ಗಾಳಿಯನ್ನು ಅನುಭವಿಸಲು ಸಹಾಯ ಮಾಡುವುದು.
ಯುಗಾದಿ ಹಬ್ಬವು ಆತ್ಮ ಶೋಧನೆಯನ್ನು ಮಾಡಿಕೊಳ್ಳಲು ಮತ್ತು ಸ್ವಯಂ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವಂತಹ ಹಬ್ಬವಾಗಿದೆ. ಈ ದಿನದಂದು ನಿಮ್ಮ ಹಿಂದಿನ ಕ್ರಿಯೆಗಳನ್ನು ಅವಲೋಕಿಸಿ, ಅದರಲ್ಲಿ ಏನಾದರೂ ತಪ್ಪುಗಳಿದ್ದರೆ ಅವುಗಳನ್ನು ಸರಿ ಮಾಡಿಕೊಳ್ಳುವ ಮೂಲಕ ಪಾಠವನ್ನು ಕಲಿಯಬೇಕು. ಹೊಸ ವರ್ಷವನ್ನು ಸಂತೋಷದಿಂದ ಸ್ವಾಗತಿಸಬೇಕು.
Advertisement