

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾರ್ಚ್ 28 ರಿಂದ ಪ್ರಾರಂಭವಾಗುವ ಐಪಿಎಲ್ ಪಂದ್ಯಗಳಿಗೆ VIP ಟಿಕೆಟ್ ಬಗ್ಗೆ ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆದಿದೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಹಲವು ಶಾಸಕರು ತಮಗೆ ಕೇವಲ ಒಂದು ಟಿಕೆಟ್ ನೀಡಲಾಗಿದ್ದು, ಪಂದ್ಯಗಳ ಸಮಯದಲ್ಲಿ ಸರಿಯಾದ ಆಸನ ಸೌಲಭ್ಯಗಳನ್ನು ಒದಗಿಸಿಲ್ಲ ಎಂದು ಆರೋಪಿಸಿದರು. ಕೆಲ ಸದಸ್ಯರು ಕ್ರೀಡಾಂಗಣದಲ್ಲಿ ಶಾಸಕರಿಗೆ ಪ್ರತ್ಯೇಕ ಲಾಂಜ್ ಬೇಕು ಎಂದು ಒತ್ತಾಯಿಸಿದರು.
ಬಳಿಕ ಮಾತನಾಡಿದ ಸ್ಪೀಕರ್ ಯು.ಟಿ. ಖಾದರ್, ಪಂದ್ಯದ ವೇಳೆ ಎಲ್ಲಾ ಶಾಸಕರು ನಾಲ್ಕು VIP ಟಿಕೆಟ್ ಪಡೆಯುವುದನ್ನು ಖಾತ್ರಿಪಡಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿದರು. ಮಾರ್ಚ್ 28 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ 2026 ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಸ್ಪೀಕರ್ ನಿರ್ದೇಶನದ ಮೇರೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳೊಂದಿಗೆ ಮಾತನಾಡಿ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಸದನಕ್ಕೆ ತಿಳಿಸುವುದಾಗಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು. ಈ ಹಂತದಲ್ಲಿ, ಖಾದರ್ ಮತ್ತು ಕೆಲವು ಶಾಸಕರು ಮಾರ್ಚ್ 28 ರಂದು ಪಂದ್ಯಗಳು ಪ್ರಾರಂಭವಾಗುತ್ತವೆ ಎಂದು ಹೇಳಿದಾಗ, ತಕ್ಷಣವೇ ಕೆಎಸ್ಸಿಎ ಅಧಿಕಾರಿಗಳಿಗೆ ಕರೆ ಮಾಡುವುದಾಗಿ ಡಿಕೆ ಶಿವಕುಮಾರ್ ಹೇಳಿದರು.
ಕೆಎಸ್ ಸಿಎ ಅಧ್ಯಕ್ಷರು ಚೆನ್ನಾಗಿ ಗೊತ್ತಿದ್ದಾರೆ. ಕೆಎಸ್ಸಿಎಯ ಮತದಾರ ಸದಸ್ಯನೂ ಆಗಿದ್ದೇನೆ. ಶಾಸಕರು ಇದನ್ನು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಪ್ರಯೋಜನವನ್ನು ಕೋರಲು ಅವರಿಗೆ ಎಲ್ಲ ಹಕ್ಕಿದೆ. ನಾನು ಅವರೊಂದಿಗೆ ಮಾತನಾಡುತ್ತೇನೆ ಎಂದರು.
ಬೆಂಗಳೂರಿನ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಸಚಿವ ಕೆಜೆ ಜಾರ್ಜ್, ಜಕ್ಕೂರು ವಾಯು ತರಬೇತಿ ಶಾಲೆಯನ್ನು ಈಗಿರುವ ಸ್ಥಳದಿಂದ ಸ್ಥಳಾಂತರಿಸಿದರೆ ಹೊಸ ಕ್ರೀಡಾ ಕ್ಷೇತ್ರ ಅಥವಾ ಕ್ರೀಡಾಂಗಣವನ್ನು ನಿರ್ಮಾಣ ಮಾಡಬಹುದು ಈ ಹಿಂದೆ ಸೂಚಿಸಿದ್ದೆ ಎಂದು ಹೇಳಿದಾಗ ಐಪಿಎಲ್ ಟಿಕೆಟ್ ವಿಚಾರ ಕುರಿತು ಚರ್ಚೆ ಉಂಟಾಯಿತು. ಈ ಪ್ರಸ್ತಾವನೆಯನ್ನು ಸಂಪುಟದೊಳಗೆ ವಿರೋಧಿಸಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿಯ ಹಿರಿಯ ಶಾಸಕ ಸಿ ಎನ್ ಅಶ್ವಥ್ ನಾರಾಯಣ್, ಬೆಂಗಳೂರಿನಲ್ಲಿ ಹೊಸ ಕ್ರಿಕೆಟ್ ಸ್ಟೇಡಿಯಂಗಾಗಿ ಜಮೀನಿನ ಕೊರತೆ ಇದೆಯೇ ಎಂದು ಪ್ರಶ್ನಿಸಿದರು.
ಕ್ರಿಕೆಟ್ ವ್ಯಾಪಾರೀಕರಣಗೊಂಡಿದೆ. ಕೆಎಸ್ ಸಿಎ ಸಾಕಷ್ಟು ಆದಾಯವನ್ನು ಗಳಿಸುತ್ತಿದೆ. ಅವರಿಗೆ ಸರ್ಕಾರಿ ಭೂಮಿ ಬೇಕೇ? ಅವರಿಗೆ ಸರ್ಕಾರದ ಅನುಮತಿ ಮಾತ್ರ ಬೇಕು ಎಂದರು. ಸರ್ಕಾರ ಸ್ಟೇಡಿಯಂಗಾಗಿ ಸೂಕ್ತ ಭೂಮಿ ನೀಡಿದ್ದರೂ ಪಂದ್ಯದ ವೇಳೆ ಸರಿಯಾಗಿ ಟಿಕೆಟ್ ನೀಡಲ್ಲ ಎಂದು ಆರ್.ಅಶೋಕ್ ಹೇಳಿದರು. ಈ ವೇಳೆ ವಿಜಯಾನಂದ ಕಾಶಪ್ಪನವರ್ ಮತ್ತಿತರರು, ವಿಪಕ್ಷ ನಾಯಕರು ಹೇಳುತ್ತಿರುವುದು ನಿಜ. ಶಾಸಕರಿಗೆ ಹೆಚ್ಚಿನ ಟಿಕೆಟ್ ನೀಡಬೇಕು. ಸೂಕ್ತ ಆಸನ ವ್ಯವಸ್ಥೆ ಮಾಡಬೇಕು. ಪ್ರತ್ಯೇಕ ಲಾಂಚ್ ಇರಬೇಕು ಎಂದು ಒತ್ತಾಯಿಸಿದರು.
Advertisement