

ರಾಮನಗರ: ಐವರು ಮಹಿಳೆಯರ ಗ್ಯಾಂಗ್ ವೊಂದು 52 ವರ್ಷದ ಉದ್ಯಮಿಯಿಂದ 25 ಲಕ್ಷ ರೂ. ಸುಲಿಗೆ ಮಾಡಿದೆ. ಈ ಸಂಬಂಧ ರಾಮನಗರದ ಅಗ್ರಹಾರ ಬಡಾವಣೆ ನಿವಾಸಿ ಎನ್ ಸುರೇಶ್ (ಹೆಸರು ಬದಲಿಸಲಾಗಿದೆ) ಎಂಬುವರು ಶನಿವಾರ ದೂರು ದಾಖಲಿಸಿದ್ದಾರೆ.
ರಾಮನಗರದ ಥಿಯೇಟರ್ ವೊಂದರ ಮಾಲೀಕರಾಗಿರುವ ಸುರೇಶ್, ಏಳು ವರ್ಷಗಳ ಹಿಂದೆ ಪತ್ನಿ ಬಿಟ್ಟು ಹೋದ ನಂತರ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ತಂದೆ-ತಾಯಿ ಇಲ್ಲ, ಮಕ್ಕಳಿಲ್ಲ.
ಆರೋಪಿ ಮಹಿಳೆಯೊಬ್ಬರು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿ ಸುರೇಶ್ ಅವರನ್ನು ಸಂಪರ್ಕಿಸಿದ್ದಳು ಎನ್ನಲಾಗಿದೆ. ನಂತರ ಆಕೆ ಇತರ ಮಹಿಳೆಯರನ್ನು ಸಂತ್ರಸ್ಥನಿಗೆ ಪರಿಚಯಿಸಿದ್ದಾಳೆ. ಎಲ್ಲಾ ಮಹಿಳೆಯರು ಆತನನ್ನು ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ್ದು, ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ, ಬ್ಲ್ಯಾಕ್ಮೇಲ್ಗೆ ನಿಖರ ಕಾರಣಗಳನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರರಿಂದ ಏಳು ತಿಂಗಳ ಹಿಂದೆ ರಾಮನಗರದ ಕೋತಿಪುರ ಬಳಿ ವಾಸವಿದ್ದ ಆರೋಪಿ ಮಹಿಳೆಯೊಬ್ಬರು ಸಿನಿಮಾ ನೋಡುವ ನೆಪದಲ್ಲಿ ಥಿಯೇಟರ್ಗೆ ಭೇಟಿ ನೀಡಿದ್ದ ಎಂದು ಸುರೇಶ್ ದೂರಿನಲ್ಲಿ ತಿಳಿಸಿದ್ದಾರೆ. ಆಕೆ ತನ್ನನ್ನು ಪರಿಚಯಿಸಿಕೊಂಡು ಮದುವೆಯಾಗಲು ಇಚ್ಚೆ ವ್ಯಕ್ತಪಡಿಸಿದರು. ಬಳಿಕ ಕೋತಿಪುರದ ಇಬ್ಬರು ಮಹಿಳೆಯರೊಂದಿಗೆ ಭೇಟಿ ಮಾಡಿದ್ದಾಳೆ. ಬಳಿಕ ಮಹಿಳೆಯರೆಲ್ಲರೂ ಒಂದಲ್ಲ ಒಂದು ನೆಪದಲ್ಲಿ ಬೆದರಿಸಿ ಹಣ ಹಾಗೂ ಚಿನ್ನಾಭರಣಗಳನ್ನು ಸುಲಿಗೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರಂಭದಲ್ಲಿ, ಆರೋಪಿ ಮಹಿಳೆಯರು ಸಣ್ಣ ಮೊತ್ತದಲ್ಲಿ ಸುಲಿಗೆ ಮಾಡುತ್ತಿದ್ದರು. ನಂತರ ದೊಡ್ಡ ಮೊತ್ತಕ್ಕೆ ಬೇಡಿಕೆಯಿಟ್ಟಿದ್ದಾರೆ. ಹಣ ಕೊಡಲು ನಿರಾಕರಿಸಿದಾಗಲೆಲ್ಲ ಆತನ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಪೋಕ್ಸೊದ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. 500 ಗ್ರಾಂ ಚಿನ್ನಾಭರಣವನ್ನೂ ಮಹಿಳೆಯರು ಕಸಿದುಕೊಂಡಿದ್ದಾರೆ.
ಪದೇ ಪದೇ ಬ್ಲ್ಯಾಕ್ಮೇಲ್ ಮಾಡುತ್ತಿದ್ದು, ಆನ್ಲೈನ್ ದಿನಸಿ ಮತ್ತು ದೈನಂದಿನ ಅಗತ್ಯ ವಸ್ತುಗಳನ್ನು ಖರೀದಿಸುವಂತೆ ಒತ್ತಾಯಿಸಿ ವಿವಿಧ ಮೊಬೈಲ್ ಸಂಖ್ಯೆಗಳಿಂದ ವಾಟ್ಸಾಪ್ ಮೂಲಕ ಒತ್ತಡ ಹಾಕುತ್ತಿದ್ದರು ಎನ್ನಲಾಗಿದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ದೂರುದಾರರು ಬೆಂಗಳೂರಿನ ಆಸ್ಪತ್ರೆಯಲ್ಲಿ 15 ದಿನಗಳ ಕಾಲ ಒಳರೋಗಿಯಾಗಿ ದಾಖಲಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಐಜೂರು ಪೊಲೀಸರು ಐದು ಮಹಿಳೆಯರ ವಿರುದ್ಧ ಬಿಎನ್ಎಸ್ನ ಇತರ ವಿಭಾಗಗಳೊಂದಿಗೆ ಸುಲಿಗೆ (ಬಿಎನ್ಎಸ್ 308) ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement