

ನಿನ್ನೆ ಮೇ 1 ಬೌದ್ಧ ಹುಣ್ಣಿಮೆ, ವೈಶಾಖ ಹುಣ್ಣಿಮೆಯ ಪುಣ್ಯ ದಿನ ಶುಕ್ರವಾರ ಡಿಸಿಎಂ ಡಿ.ಕೆ.ಶಿವಕುಮಾರ್ ತಾತನಾಗಿ ಬಡ್ತಿ ಪಡೆದಿದ್ದಾರೆ. ಡಿ. ಕೆ. ಶಿವಕುಮಾರ್ ಅವರ ಹಿರಿಯ ಪುತ್ರಿ ಹಾಗೂ ಕಾಫಿ ಉದ್ಯಮಿ ದಿವಂಗತ ಸಿದ್ಧಾರ್ಥ ಹೆಗ್ಡೆ ಸೊಸೆ ಐಶ್ವರ್ಯ ಅಮಾರ್ತ್ಯ ಹೆಗ್ಡೆ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಸಾಯಂಕಾಲ ಹೆರಿಗೆಯಾಗಿದ್ದು, ಡಿಕೆಶಿ ಆಸ್ಪತ್ರೆಗೆ ಭೇಟಿ ನೀಡಿ ಮಗಳು ಹಾಗೂ ಮೊಮ್ಮಗಳನ್ನು ನೋಡಿ ಆರೋಗ್ಯ ವಿಚಾರಿಸಿದ್ದಾರೆ. ಸದ್ಯ ಸಿಎಂ ರೇಸ್ ನಲ್ಲಿರೋ ಡಿಸಿಎಂ ಡಿಕೆಗೆ ಶುಕ್ರವಾರ , ಹುಣ್ಣಿಮೆಯ ಪರ್ವಕಾಲದಲ್ಲಿ ಹುಟ್ಟಿರೋ ಮೊಮ್ಮಗಳು ಅದೃಷ್ಟ ತರಲಿದ್ದಾಳೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಡಿ ಕೆ ಶಿವಕುಮಾರ್ ಮಗುವನ್ನು ಪ್ರೀತಿಯಿಂದ ಎತ್ತಿ ಮುದ್ದಾಡಿದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಎಸ್ ಎಂ ಕೃಷ್ಣ ಜನ್ಮದಿನದಂದೇ ಮಗು ಜನನ
ಅದರಲ್ಲೂ ನಿನ್ನೆ ಮೇ 1 ಕರ್ನಾಟಕ ಮಾಜಿ ಮುಖ್ಯಮಂತ್ರಿ ಡಿಕೆಶಿಯವರ ರಾಜಕೀಯ ಗುರು ಎಸ್. ಎಂ.ಕೃಷ್ಣ ಅವರ ಹುಟ್ಟುಹಬ್ಬದಂದೇ ಅವರ ಮೊಮ್ಮಗನ ಪತ್ನಿ ಐಶ್ವರ್ಯಾ ಮಗುವಿಗೆ ಜನ್ಮನೀಡಿರುವುದು ಇನ್ನೊಂದು ವಿಶೇಷ.
ಸಾರ್ವಜನಿಕ ಬದುಕಿನಲ್ಲಿರುವವರಿಗೆ ಖಾಸಗಿ ಬದುಕು ಶೂನ್ಯ ಎಂದ ತೇಜಸ್ವಿ ಸೂರ್ಯ
ಸಾಮಾನ್ಯವಾಗಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿ ಸುದ್ದಿಯಾಗಿರುತ್ತಾರೆ. ಆದರೆ ನಿನ್ನೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿಭಿನ್ನವಾಗಿ ಡಿ ಕೆ ಶಿವಕುಮಾರ್ ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಮೊನ್ನೆಯ ಮಳೆಗೆ ಬೆಂಗಳೂರು ನಗರದಲ್ಲಿ ಆದ ಅನಾಹುತ ಬಗ್ಗೆ ಪರಿಶೀಲನೆ ನಡೆಸಲು ಡಿಸಿಎಂ ಡಿ ಕೆ ಶಿವಕುಮಾರ್ ನಿನ್ನೆ ಸಿಟಿ ರೌಂಡ್ಸ್ ನಡೆಸಿದ್ದರು. ಅವರ ಜೊತೆ ವಿರೋಧ ಪಕ್ಷ ನಾಯಕ ಆರ್ ಅಶೋಕ್ ಮತ್ತು ಸಂಸದ ತೇಜಸ್ವಿ ಸೂರ್ಯ ಕೂಡ ಇದ್ದರು.
ಡಿ ಕೆ ಶಿವಕುಮಾರ್ ಅವರ ಮಗಳು ಐಶ್ವರ್ಯಗೆ ಮಗು ಜನನದ ಗಳಿಗೆಯನ್ನು ತೇಜಸ್ವಿ ಸೂರ್ಯ ವಿಶಿಷ್ಟವಾಗಿ ಬಣ್ಣಿಸಿದ್ದಾರೆ. ‘X’ ನಲ್ಲಿ ಮಾಡಿದ ಪೋಸ್ಟ್ನಲ್ಲಿ ತೇಜಸ್ವಿ ಸೂರ್ಯ, ನಾವು ಇಂದು ಡಿ ಕೆ ಶಿವಕುಮಾರ್ ಜೊತೆ ದಿನವಿಡೀ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆವು. ಈ ಅವಧಿಯಲ್ಲಿ ಉಪ ಮುಖ್ಯಮಂತ್ರಿಗಳಿಗೆ ಅವರ ಮನೆಯಿಂದ ನಿರಂತರವಾಗಿ ಫೋನ್ ಕರೆಗಳು ಬರುತ್ತಲೇ ಇತ್ತು. ಏನಾಗಿದೆ ಎಂದು ಕೇಳಿದಾಗ, ‘ಇಂದು ನನ್ನ ಮಗಳ ಡೆಲಿವರಿ. ನಾನು ತಾತನಾಗುತ್ತಿದ್ದೇನೆ ಎಂದು ಹೇಳಿದರು ಎಂದರು.
ಡಿ ಕೆ ಶಿವಕುಮಾರ್ ಅವರಿಗೆ ಒಂದು ಕಡೆ ಸಂತಸದ ಕ್ಷಣವಾಗಿದ್ದರೂ, ಇನ್ನೊಂದು ಕಡೆ ಸಾರ್ವಜನಿಕ ಹೊಣೆಗಾರಿಕೆಯ ಕಾರಣದಿಂದ ಕಾರ್ಯಕ್ರಮಗಳಿಗೆ ಹಾಜರಾಗಬೇಕಾದ ಪರಿಸ್ಥಿತಿ ಇತ್ತು, ಅವರು ಫ್ಲೈಓವರ್ ಉದ್ಘಾಟನೆ ಹಾಗೂ ಸ್ಕೈವಾಕ್ ಶಿಲಾನ್ಯಾಸ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಸಾರ್ವಜನಿಕ ಜೀವನಕ್ಕೆ ಬಂದ ಮೇಲೆ ವೈಯಕ್ತಿಕ ಬದುಕು ಇಲ್ಲವಾಗುತ್ತದೆ ಎಂಬ ಮಾತಿದೆ ನಿನ್ನೆ ಡಿ ಕೆ ಶಿವಕುಮಾರ್ ಅವರ ಪರಿಸ್ಥಿತಿ ನೋಡಿ ನಿಜ ಅನಿಸಿತು ಎಂದು ಅವರು ಬರೆದಿದ್ದಾರೆ.
ತಾತನಾದ ಡಿ.ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಮಗಳು ಐಶ್ವರ್ಯಾ ಶಿವಕುಮಾರ್ ಮಗುವಿಗೆ ಮತ್ತು ಕುಟುಂಬಕ್ಕೆ ದೇವರು ದೀರ್ಘಾಯುಷ್ಯ, ಆರೋಗ್ಯ ಮತ್ತು ಸಂತೋಷ ನೀಡಲಿ ಎಂದು ತೇಜಸ್ವಿ ಸೂರ್ಯ ಶುಭಾಶಯ ಕೋರಿದ್ದಾರೆ.
ಇದಕ್ಕೂ ಮೊದಲು, ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ—ಎಂ ಜಿ ರಸ್ತೆ, ಟ್ರಿನಿಟಿ ಮತ್ತು ಅನಿಲ್ ಕುಂಬ್ಳೆ ಸರ್ಕಲ್—ನಮ್ಮ ಮೆಟ್ರೊ ಕಂಬಗಳ ಮೇಲೆ ಡೈನಾಮಿಕ್ ಲೈಟಿಂಗ್ ಯೋಜನೆಯನ್ನು ಉದ್ಘಾಟಿಸಿದರು.
Advertisement