

ಬೆಳಗಾವಿ: ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಕೊಂಡಸ್ಕೊಪ್ಪ ಗ್ರಾಮದಲ್ಲಿ ಕುಟುಂಬವೊಂದರ ಮೇಲೆ ಸಾಮಾಜಿಕ ಬಹಿಷ್ಕಾರ ಹೇರಿದ ಆರೋಪದಲ್ಲಿ ಒಂಬತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಹಿರೇಬಾಗೇವಾಡಿ ಪೊಲೀಸರು ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. ಗ್ರಾಮದ ನಾಯಕ ಚಿತ್ರಹಿಂಸೆ ಸಹಿಸಲಾರದೆ ಕುಟುಂಬ ಗ್ರಾಮವನ್ನೇ ತೊರೆದಿತ್ತು. ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು.
ನರಸೋಬ ಸಾಂಬ್ರೇಕರ್ ಅವರು ಸ್ಥಳೀಯ ಬೀರದೇವರ ದೇವಸ್ಥಾನದ ಪೂಜಾರಿಗಳಾಗಿದ್ದು, ದೇವಸ್ಥಾನದ ಆಚರಣೆಗಳಿಗೆ ಸಂಬಂಧಿಸಿದ ವಿವಾದ ಮತ್ತು ಕುಟುಂಬದ ಒಬ್ಬ ಸದಸ್ಯನ ಅಂತರ್ ಸಮುದಾಯ ಸಂಬಂಧ ವಿಚಾರವನ್ನು ಮುಂದಿಟ್ಟುಕೊಂಡು ಗ್ರಾಮದ ಕೆಲವರು ಕುಟುಂಬವನ್ನು ಸಮಾಜದಿಂದ ದೂರ ಇಡುವಂತೆ ಆಜ್ಞೆ ಹೊರಡಿಸಿದ್ದರು. ಅಲ್ಲದೆ, ಕುಟುಂಬದೊಂದಿಗೆ ಮಾತನಾಡಿದವರಿಗೆ ರೂ.5 ಸಾವಿರ ದಂಡ ವಿಧಿಸಲಾಗುತ್ತದೆ. ಮಾಹಿತಿ ನೀಡಿದವರಿಗೆ ರೂ.1 ಸಾವಿರ ಬಹುಮಾನ ಎಂದೂ ಘೋಷಿಸಿದ್ದರು. ಈ ಕುರಿತು ಸಾಂಬ್ರೇಕರ್ ಅವರು ನೀಡಿದ ದೂರಿನ ಆಧಾರದ ಮೇಲೆ ಇದೀಗ ಪ್ರಕರಣ ದಾಖಲಾಗಿದೆ.
ಮಲ್ಲಪ್ಪ ಸಂಬರೇಕರ್, ವಿಠ್ಠಲ್ ಸಂಬರೇಕರ್, ಬಾಗಣ್ಣ ಸಂಬರೇಕರ್, ರಮೇಶ್ ಸಂಬರೇಕರ್, ಮಾಲಿಂಗ ಸಂಬರೇಕರ್, ಗಂಗಪ್ಪ ಸಂಬರೇಕರ್, ವೈಜು ಸಂಬರೇಕರ್, ಪಿರಾಜಿ ಸಂಬರೇಕರ್ ಮತ್ತು ಯಲ್ಲಪ್ಪ ಸಂಬರೇಕರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಏಪ್ರಿಲ್ 6ರಂದು ಮೊದಲು ದೂರು ಸಲ್ಲಿಕೆಯಾಗಿದ್ದು, ಪ್ರಾಥಮಿಕ ತನಿಖೆ ನಡೆಸಿದ ನಂತರ ಈಗ ಅಧಿಕೃತವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಸಾಮಾಜಿಕ ಬಹಿಷ್ಕಾರ ಮತ್ತು ಬೆದರಿಕೆ ಸಂಬಂಧಿತ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಸ್ತುತ ಸಂತ್ರಸ್ತ ಕುಟುಂಬ ಹಾಗೂ ಗ್ರಾಮಸ್ಥರ ಹೇಳಿಕೆಗಳನ್ನು ದಾಖಲಿಸಲಾಗುತ್ತಿದ್ದು, ಬಹಿಷ್ಕಾರ ಹೇಗೆ ಜಾರಿಗೊಂಡಿತು, ಇದರಲ್ಲಿ ಆರೋಪಿಗಳ ಪಾತ್ರ ಏನು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ತನಿಖೆಯ ಪ್ರಗತಿಯ ಆಧಾರದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement