

ತುಮಕೂರು: ಜನಸ್ಪಂದನ ಕಾರ್ಯಕ್ರಮದಲ್ಲಿ ವೃದ್ಧ ರೈತರೊಬ್ಬರು ಸರಾಗವಾಗಿ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಮಾತನಾಡಿದ್ದು ಕಂಡು ಅಧಿಕಾರಿಗಳು ಅಚ್ಚರಿಗೆ ಒಳಗಾದ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ.
ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಹಾಗೂ ತಹಶಿಲ್ದಾರ್ ಮಮತಾ ನೇತೃತ್ವದಲ್ಲಿ ನಡೆಯುತ್ತಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ವೃದ್ಧರೊಬ್ಬರು ಮಾತನಾಡಿ ನೋಡುಗರು ದಂಗಾಗುವಂತೆ ಮಾಡಿದ್ದಾರೆ.
ಶಾಸಕರ ನೇತೃತ್ವದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ತನ್ನ ಸಮಸ್ಯೆಗಳ ಕುರಿತು ಶಾಸಕರಿಗೆ ಅಹವಾಲು ನೀಡಲು ರೈತ ಬಂದಿದ್ದರು. ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಅರಳೀಕೆರೆ ಗ್ರಾಮದ ರೈತ ಗಿರಿಯಪ್ಪ(70ವ) ಕೆರೆಗೋಡಿ ರಂಗಾಪುರ ಮಠದಲ್ಲಿ ಬರೀ ಎಸ್ ಎಸ್ ಎಲ್ ಸಿ ವರೆಗೂ ಶಿಕ್ಷಣ ಪೂರೈಸಿದ್ದರು. ಆದರೆ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಸರಾಗವಾಗಿ ಮಾತನಾಡುತ್ತಾರೆ.
ಶಾಸಕರ ಮುಂದೆ ತಮ್ಮ ಕಷ್ಟ ತೋಡಿಕೊಂಡ ರೈತ ಗಿರಿಯಪ್ಪ, ತಮ್ಮ ಜಮೀನಿಗೆ ತೆರಳಲು ಮರಗಳು ಅಡ್ಡಲಾಗಿವೆ ತೆರವುಗೊಳಿಸಿ ಎಂದು ಮನವಿ ಮಾಡಿಕೊಂಡರು. ಗಿರಿಯಪ್ಪರ ಇಂಗ್ಲಿಷ್ ಜ್ಞಾನದ ಕುರಿತು ಮೊದಲೇ ಅರಿವಿದ್ದ ತಹಶೀಲ್ದಾರ್ ಮಮತಾ ಇಂಗ್ಲೀಷ್ ನಲ್ಲೇ ಬಾಸ್ ಮುಂದೆ ಮಾತನಾಡಿ ಎಂದರು. ನಿಮ್ಮಲ್ಲಿ ಇಂಗ್ಲೀಷ್ ನಲ್ಲಿ ಹೇಳಿದ ತಕ್ಷಣ ಸಮಸ್ಯೆ ಬಗೆಹರಿಯುತ್ತಾ ಎಂದು ಕೇಳುತ್ತಾ ಮಾತನಾಡಿದರು. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.
ಇನ್ನು, ಈ ಹಿಂದೆ ರೈತ ಗಿರಿಯಪ್ಪ ಅವರು ತಮ್ಮ ಜಮೀನಿಗೆ ಹೋಗಲು ರಸ್ತೆ ಇಲ್ಲ ಎಂದು ತಹಶೀಲ್ದಾರ್ ಅವರಿಗೆ ಮನವಿ ಮಾಡಿದ್ದರು. ಆಗ ಈ ಬಗ್ಗೆ ಪೂರಕವಾಗಿ ಸ್ಪಂಧನೆ ನೀಡಿ ಅವರ ಜಮೀನಿಗೆ ರಸ್ತೆ ಮಾರ್ಗ ತೆರವು ಮಾಡಿಕೊಡಲಾಗಿತ್ತು. ಆದರೆ ಮಾರ್ಗ ನಿರ್ಮಾಣ ಆದರೂ ಮರಗಳು ಅಡ್ಡಲಾಗಿ ಇರುವುದರಿಂದ ಸಂಚಾರ ಕಷ್ಟವಾಗುತ್ತಿದೆ ಎಂದರು. ಇದರಿಂದ ಮತ್ತೊಮ್ಮೆ ಅಧಿಕಾರಿಗಳ ನೆರವು ಪಡೆದುಕೊಳ್ಳಲು ಗಿರಿಯಪ್ಪ ಅವರು ಜನಸ್ಪಂದನ ಕಾರ್ಯಕ್ರಮಕ್ಕೆ ಬಂದಿದ್ದರು.
ರೈತ ಗಿರಿಯಪ್ಪನವರು ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಹಲವು ನೆಟ್ಟಿಗರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
Advertisement