ಶಾಲೆಯಿಂದ ನಾಪತ್ತೆಯಾದ 4 ವರ್ಷದ ಬಳಿಕ ಪೋಷಕರ ಮಡಿಲು ಸೇರಿದ ಬಾಲಕ: ಪತ್ತೆ ಹಚ್ಚಿದ್ದು ಕಬಡ್ಡಿ ಆಟ !

ಆದರೆ ಆತ ಸ್ಕೂಲ್​​ಗೆ ತೆರಳದ ಕಾರಣ ಹೋಗಿದ್ದೆಲ್ಲಿಗೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಹುಡುಕಾಟ ನಡೆಸಿದರೂ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.
Representational image
ಸಾಂದರ್ಭಿಕ ಚಿತ್ರ
Updated on

ಮೈಸೂರು: ನಿಗೂಢವಾಗಿ ನಾಪತ್ತೆಯಾಗಿದ್ದ ಬಾಲಕ ನಾಲ್ಕು ವರ್ಷದ ಬಳಿಕ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಶಾಲೆಯ ಆವರಣದಿಂದ ನಾಪತ್ತೆಯಾಗಿದ್ದ ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದ ತಂದೆ ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.

ಪಾಂಡವಪುರ ತಾಲೂಕಿನ ಹಿರೇಮರಹಳ್ಳಿ ಗ್ರಾಮದ ಈರೇಗೌಡರ ಪುತ್ರ ಕಿಶೋರ್​​ ಮಂಡ್ಯ ತಾಲೂಕಿನ ತಂಗಳಗೆರೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡಲು ಬಿಟ್ಟು ಹೋಗಿದ್ದರು.

ಮತ್ತೆ 20 ದಿನ‌ ಬಿಟ್ಟು ಶಾಲೆಗೆ ಬಂದು ಮಗನನ್ನು ಊರಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಅವರು ತಿಳಿಸಿದ್ದರು. 20 ದಿನದ ನಂತರ ಮಗನನ್ನು ನೋಡಲು ತಂದೆ ಶಾಲೆಗೆ ಬಂದಿದ್ದಾರೆ. ಆತ 20 ದಿನದಿಂದ ಶಾಲೆಗೆ ಬಂದಿಲ್ಲ ಎಂಬ ಉತ್ತರ ಬಂದಿದೆ.

ಈ ವೇಳೆ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ 2022ರ ಆಗಸ್ಟ್​​ 10ರಂದು ಬಾಲಕ ಶಾಲೆಗೆ ಹೋಗುತ್ತಿರುವ ವಿಡಿಯೋ ಸೆರೆಯಾಗಿದೆ. ಆದರೆ ಆತ ಸ್ಕೂಲ್​​ಗೆ ತೆರಳದ ಕಾರಣ ಹೋಗಿದ್ದೆಲ್ಲಿಗೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಹುಡುಕಾಟ ನಡೆಸಿದರೂ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆ ಬಳಿಕ ಪೊಲೀಸರು ಈ ವಿಚಾರವಾಗಿ ಕಳೆದ ನಾಲ್ಕು ವರ್ಷದಿಂದ ಬಾಲಕನ ಹುಡುಕಾಟ ನಡೆಸುತ್ತಿದ್ದರು.

Representational image
ಅಕ್ರಮ ಸಂಬಂಧ ಶಂಕೆ: ಪತ್ನಿಯ ಹತ್ಯೆ, ಸಿಮೆಂಟ್ ತುಂಬಿದ್ದ ಮರದ ಪೆಟ್ಟಿಗೆಯಲ್ಲಿ ಶವ; ನಾಪತ್ತೆ ಕೇಸ್ ದಾಖಲಿಸಿದ್ದ ವ್ಯಕ್ತಿಯ ಕೃತ್ಯ ಮಗನಿಂದ ಬಯಲು!

ಈ ವೇಳೆ ಪೊಲೀಸರು ನಾಪತ್ತೆ ಪ್ರಕರಣವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದರು. ತಮ್ಮ ಮಗನನ್ನು ಯಾರೋ ಅಪಹರಿಸಿ ಕೊಂದಿದ್ದಾರೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದರು. ಪೊಲೀಸರೂ ಈತನಿಗಾಗಿ ಶೋಧ ನಡೆಸುತ್ತಿದ್ದರು. ಅಂತಿಮವಾಗಿ ಆತನನ್ನು ಬೆಂಗಳೂರಿನಲ್ಲಿ ಪತ್ತೆ ಮಾಡಲಾಗಿದೆ.

ಹಿರೇಮರಳಿ ಗ್ರಾಮದ ಕಿಶೋರ್ ನನ್ನು ಮರಳಿ ಕುಟುಂಬಸ್ಥರ ಮಡಿಲಿಗೆ ಸೇರಿಸಲಾಗಿದೆ. ವಿಶೇಷ ಅಂದರೆ ಆತನನ್ನು ಪತ್ತೆ ಹಚ್ಚಿದ್ದು ಯಾವುದೇ ವಿಧಿ ವಿಜ್ಞಾನ ಪ್ರಯೋಗದಾಗಾಲಯದ ಸಾಕ್ಷ್ಯಗಳಲ್ಲ, ಬದಲಿಗೆ ಕಬಡ್ಡಿ ಆಟದ ಮೂಲಕ ಆತ ಪತ್ತೆಯಾಗಿದ್ದಾನೆ.

ಕಿಶೋರ್​​ನನ್ನು ಯಾರೂ ಅಪಹರಣ ಮಾಡಿರಲಿಲ್ಲ. ಓದಲು ಇಷ್ಟ ಇಲ್ಲದ ಕಾರಣ ಆತನೇ ಶಾಲೆ ಕಾಂಪೌಂಡ್ ಹಾರಿ ಹೋಗಿ ಬೆಂಗಳೂರು ಸೇರಿದ್ದ. ಹಲವೆಡೆ ಹೋಟೆಲ್​​ನಲ್ಲಿ ಕೆಲಸ ಮಾಡಿ ನಾಲ್ಕು ವರ್ಷ ಜೀವನ ಮಾಡಿದ್ದ‌ ಎಂಬುದು ಗೊತ್ತಾಗಿದೆ. ಕಬಡ್ಡಿ ಮೇಲೆ ವಿಶೇಷ ಆಸಕ್ತಿ ಹೊಂದಿದ್ದ ಕಿಶೋರ್​​ ಸ್ಥಳೀಯ ಯುವಕರೊಂದಿಗೆ ಲೋಕಲ್ ಟೂರ್ನಮೆಂಟ್ ಆಡುತ್ತಿದ್ದ ವೇಳೆ ಸಿಕ್ಕಿದ್ದಾನೆ.

ತಾಂತ್ರಿಕ ಪುರಾವೆಗಳ ಆಧಾರದಲ್ಲಿ ಪೊಲೀಸರು ಕೊನೆಗೂ ಕಿಶೋರ್​​ನನ್ನು ಹುಡುಕಿ ಗ್ರಾಮಕ್ಕೆ ವಾಪಸ್​​ ಕರೆತಂದಿರುವುದಾಗಿ ಮಂಡ್ಯ ಮಹಿಳಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಲಿಯಾಕತ್ ಉಲ್ಲಾ ಬಹಿರಂಗಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com