

ಉಡುಪಿ: ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ಸಾರ್ವಜನಿಕ ಅಹವಾಲು ವೇಳೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮುಂದೆ ಹಿಂದೂಗಳ ಪರ ಮುಸ್ಲಿಂ ಮಹಿಳೆಯರು ಅಹವಾಲು ಸಲ್ಲಿಸಿದ ಅಪರೂಪದ ಘಚನೆ ನಡೆದಿದೆ. ಈ ಘಟನೆ ಕಂಡು ಸ್ವತಃ ಸಚಿವೆ ಹೆಬ್ಬಾಳ್ಕರ್ ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಮುದಾಯಗಳ ಮಧ್ಯೆ ಸೌಹಾರ್ದತೆಯೇ ನಮ್ಮ ಭಾರತದ ಸಾರ ಉಡುಪಿಯಲ್ಲಿ ಮನಸಿಗೆ ತಟ್ಟಿದ ಘಟನೆ ಎಂದು ಬರೆದುಕೊಂಡಿದ್ದಾರೆ.
ಘಟನೆಯ ವಿವರವೇನು?
35 ವರ್ಷಗಳ ಹಿಂದೆ ಸರ್ಕಾರದಿಂದ ನಿವೇಶನ ಮಂಜೂರು ಆಗಿದ್ದರೂ ಅರಣ್ಯ ಇಲಾಖೆಯ ಹಸ್ತಕ್ಷೇಪದಿಂದಾಗಿ ಮನೆ ಕಟ್ಟಲಾಗದೇ ದಿಕ್ಕೆಟ್ಟು ಹೋಗಿದ್ದ ಹಿಂದೂ ವಿಧವಾ ಮಹಿಳೆಯೊಬ್ಬರ ಪರವಾಗಿ ನೆರೆಮನೆಯ ಮುಸ್ಲಿಂ ಮಹಿಳೆಯರು ಸಚಿವೆ ಮುಂದೆ ಹೇಳಿಕೊಂಡಿದ್ದಾರೆ.
ಉಡುಪಿಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಭೇಟಿಯಾಗಿ ಮುಸ್ಲಿಂ ಮಹಿಳೆಯರು ನೆರವು ಯಾಚಿಸಿದ್ದು ಹಿಂದೂ – ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದಾರೆ.
ಉಡುಪಿ ತಾಲೂಕಿನ 80 ಬಡಗಬೆಟ್ಟು ನಿವಾಸಿ ಗಿರಿಜಾ ಶೆಟ್ಟಿಗಾರ್ ಎಂಬ ವಯಸ್ಕ ಮಹಿಳೆ ಗಂಡನನ್ನು ಕಳಕೊಂಡಿದ್ದು, ಒಬ್ಬಂಟಿಯಾಗಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಇವರಿಗೆ 1989 ರಲ್ಲಿ ಭೂರಹಿತರಿಗೆ ವಿತರಿಸಲಾಗುವ ವಸತಿ ನಿವೇಶನ ಯೋಜನೆಯಡಿ 5 ಸೆಂಟ್ಸ್ ಭೂಮಿ ಮಂಜೂರಾಗಿತ್ತು. ಇದರ ಹಕ್ಕುಪತ್ರವನ್ನೂ ಮಹಿಳೆಗೆ ನೀಡಲಾಗಿತ್ತು. ಆದರೆ ಆ ಭೂಮಿ ರಕ್ಷಿತಾರಣ್ಯ ವ್ಯಾಪ್ತಿಗೆ ಸೇರಿದ್ದೆಂದು ಅರಣ್ಯ ಅಧಿಕಾರಿಗಳು ವಾಸ್ತವ್ಯಕ್ಕೆ ಅಡ್ಡಿಪಡಿಸಿದ್ದು ಮಹಿಳೆಯ ಸ್ವಾಧೀನಕ್ಕೆ ಬಿಟ್ಟು ಕೊಡಲು ನಿರಾಕರಿಸಿದ್ದರು.
ಬಡ ಮಹಿಳೆಯಾಗಿದ್ದರಿಂದ ಭೂಮಿಯ ವಾಸ್ತವ್ಯ ಸಿಗದೇ ಮನೆಯನ್ನೂ ಕಟ್ಟಲಾಗದೇ ಕೂಲಿ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕಾನೂನು ಪ್ರಕಾರ, ಭೂಮಿಯ ವಾಸ್ತವ್ಯ ಪಡೆಯಲು ನೆರೆಮನೆಯ ಸಲಹುದ್ದೀನ್ ಕುಟುಂಬಸ್ಥರು ಗಿರಿಜಾ ಅವರನ್ನು ಹಲವು ಅಧಿಕಾರಿಗಳ ಬಳಿಗೆ ಕರೆದೊಯ್ದಿದ್ದಾರೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ.
ಈಗ ಜಾಗ ಸ್ವಂತದ್ದು ಇದ್ದರೆ ಮನೆ ಕಟ್ಟಿಕೊಡಲು ನೆರವು ಕೊಡುವ ಉದಾರಿಗಳಿದ್ದಾರೆ, ಆದರೆ ಹಕ್ಕುಪತ್ರ ಇದ್ದರೂ ವಾಸ್ತವ್ಯಕ್ಕೆ ಅರಣ್ಯ ಇಲಾಖೆ ಅಡ್ಡಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಮೊರೆ ಹೋಗಿದ್ದಾರೆ.
ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಗೆಸ್ಟ್ ಹೌಸ್ ಬಳಿಗೆ ಇಬ್ಬರು ಮುಸ್ಲಿಂ ಮಹಿಳೆಯರು, ಹಿಂದೂ ಬಡ ಮಹಿಳೆಗೆ ನೆರವು ನೀಡುವಂತೆ ಅಹವಾಲು ಮಂಡಿಸಿದ್ದಾರೆ. ನಮಗೇನೂ ಬೇಡ, ಆ ಮಹಿಳೆಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.
Advertisement