

ಮೈಸೂರು: ಸಾಲದ ಹಣ ವಾಪಸ್ ಕೇಳಲು ಹೋದ ವ್ಯಕ್ತಿ ಮೇಲೆ ಎಂಎಲ್ಸಿ ಅಡಗೂರು ವಿಶ್ವನಾಥ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಲದರ್ಶಿನಿಯಲ್ಲಿ ವಿಶ್ವನಾಥ್ ರವರು ಇರುವಾಗ ಹಣ ಕೇಳಲು ಹೋದ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದರೆಂದು ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವು ಆರೋಪಿಸಿ ನ್ಯಾಯಾಲಯದ ಆದೇಶದಂತೆ ಪ್ರಕರಣ ದಾಖಲಿಸಿದ್ದಾರೆ.
2013 ರಲ್ಲಿ ವಿಶ್ವನಾಥ್ ರವರು ಸಂಸದರಾಗಿದ್ದಾಗ ಕೋಟೆಹುಂಡಿ ಮಹದೇವು ರವರು ಎಂಟಿಬಿ ನಾಗರಾಜ್ ಮುಖಾಂತರ ವಿಶ್ವನಾಥ್ ಹಾಗೂ ಅವರ ಮಗ ಅಮಿತ್ ದೇವರಹಟ್ಟಿ ರವರಿಗೆ 55 ಲಕ್ಷ ನೀಡಿದ್ದಾರೆ. ಹಣ ಹಿಂದಿರುಗಿಸುವುದಾಗಿ ಸಾಲ ಪಡೆದ ವಿಶ್ವನಾಥ್ ಸತಾಯಿಸಿದ್ದಾರೆ.
ಈ ಬಗ್ಗೆ ಕಳೆದ ಫೆಬ್ರವರಿಯಲ್ಲಿ ವಿಶ್ವನಾಥ್ ರವರು ಜಲದರ್ಶಿನಿಯಲ್ಲಿ ಇರುವಾಗ ಕೋಟೆಹುಂಡಿ ಮಹದೇವು ರವರು ಹಣ ಕೇಳಲು ಹೋದಾಗ ಅವಾಚ್ಯ ಪದಗಳಿಂದ ನಿಂದಿಸಿ ಕೈಯಲ್ಲಿ ತಲೆಗೆ ಹೊಡೆದಿದ್ದಾರೆ. ಈ ಬಗ್ಗೆ ಕೋಟೆಹುಂಡಿ ಮಹದೇವುರವರು ದೇವರಾಜ ಪೊಲೀಸ್ ಠಾಣೆಯಲ್ಲಿ ಎನ್ ಸಿ ಆರ್ ದಾಖಲಿಸಿದರು. ನಂತರ ನ್ಯಾಯಾಲಯದ ಮೊರೆಹೋಗಿ ಪ್ರಕರಣ ದಾಖಲಿಸುವಂತೆ ಆದೇಶ ತಂದಿದ್ದಾರೆ.ವಿಶ್ವನಾಥ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಎಫ್ ಐಆರ್ ದಾಖಲಿಸಿದ್ದಾರೆ.
Advertisement