

ಬೆಂಗಳೂರು: ರಾಮನಗರ ಬಳಿಯ ಬಿಡದಿಯಲ್ಲಿ ಪ್ರಸ್ತಾವಿತ ಗ್ರೇಟರ್ ಬೆಂಗಳೂರು ಟೌನ್ಶಿಪ್ ಯೋಜನೆಗೆ ಸುಮಾರು ಶೇ. 80 ರಷ್ಟು ರೈತರು ಒಪ್ಪಿಗೆ ನೀಡಿದ್ದು, ಜೂನ್ ಮೊದಲ ವಾರದಲ್ಲಿ ಪರಿಹಾರ ವಿತರಣೆ ಪ್ರಾರಂಭವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬುಧವಾರ ಘೋಷಿಸಿದ್ದಾರೆ.
ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಟೌನ್ಶಿಪ್ ಬಗ್ಗೆ ಪ್ರಸ್ತಾಪಿಸಿದ್ದರು ಎಂದು ತಿರುಗೇಟು ನೀಡಿದರು.
ಜೆಡಿಎಸ್ ನಾಯಕರೊಂದಿಗೆ ಅವರು ಆಯ್ಕೆ ಮಾಡಿದ ಯಾವುದೇ ಸ್ಥಳ ಮತ್ತು ಸಮಯದಲ್ಲಿ ಸಾರ್ವಜನಿಕ ಚರ್ಚೆಗೆ ಸಿದ್ಧನಿದ್ದೇನೆ ಎಂದು ಡಿಸಿಎಂ ಸವಾಲು ಹಾಕಿದರು.
ಬಿಡದಿ ಗ್ರೇಟರ್ ಬೆಂಗಳೂರು ಟೌನ್ಶಿಪ್ ಯೋಜನೆ ಕುರಿತು ಇಂದು ರೈತರೊಂದಿಗೆ ಮಹತ್ವದ ಸಭೆ ನಡೆಸಿದ ಬಳಿ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ ಡಿಸಿಎಂ, "ನಮ್ಮ ಗ್ರೇಟರ್ ಬೆಂಗಳೂರು ಟೌನ್ಶಿಪ್ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ರೈತರು ಬಂದಿದ್ದರು. ಅವರಿಗೆ ಪರಿಹಾರದ ಕುರಿತು ನಾನು ಈಗಾಗಲೇ ಘೋಷಣೆ ಮಾಡಿದ್ದೇನೆ. ಹೆಚ್ಚು ಕಡಿಮೆ ಶೇ. 80 ರಷ್ಟು ರೈತರು ಬಂದು ತಮ್ಮ ಒಪ್ಪಿಗೆ ನೀಡಿದ್ದಾರೆ. ಪರಿಹಾರವನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಅವರು ನಮ್ಮನ್ನು(ರಾಜ್ಯ ಸರ್ಕಾರ) ಒತ್ತಾಯಿಸಿದರು" ಎಂದು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೊಂದಿರುವ ಶಿವಕುಮಾರ್ ಹೇಳಿದರು.
ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಗ್ರಾಮವಾರು ಅಂತಿಮ ಅಧಿಸೂಚನೆಗಳನ್ನು ಹೊರಡಿಸಲಾಗುವುದು ಮತ್ತು ಪರಿಹಾರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.
"ಮೂರು ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಮತ್ತು ಜೂನ್ ಮೊದಲ ವಾರದಿಂದ, ನಾವು ಅವರೆಲ್ಲರಿಗೂ ಪರಿಹಾರವನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತೇವೆ" ಎಂದು ಶಿವಕುಮಾರ್ ತಿಳಿಸಿದರು.
ಟೌನ್ಶಿಪ್ ಯೋಜನೆ ಬಗ್ಗೆ ಸರ್ಕಾರ ಪ್ರಕಟಿಸಿರುವ ಪರಿಹಾರ ಕ್ರಮಗಳು ಮತ್ತು ಭೂಮಿ ಸ್ವಾಧೀನ ಪ್ರಕ್ರಿಯೆ ಕುರಿತು ರೈತರಿಗೆ ವಿವರ ನೀಡಲಾಗಿದ್ದು, ಅವರು ಅದನ್ನು ಒಪ್ಪಿಕೊಂಡಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.
ಜೂನ್ 30ರೊಳಗೆ ಎಲ್ಲಾ ಸಂಬಂಧಿತ ನೋಟಿಫಿಕೇಶನ್ಗಳನ್ನು ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದರು. ಅಂದರೆ, ಹಳ್ಳಿಗಳಂತೆ ವಿಭಾಗ ಮಾಡಿ ಪ್ರತ್ಯೇಕ ಹಂತಗಳಲ್ಲಿ ಯೋಜನೆ ಜಾರಿಗೆ ಬರಲಿದೆ ಎಂದರು.
ಈ ಯೋಜನೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಹುಟ್ಟಿಕೊಂಡಿದೆ. ಇದು ನಾನು ಪ್ರಾರಂಭಿಸಿದ ಯೋಜನೆ ಅಲ್ಲ. ಕುಮಾರಸ್ವಾಮಿ ಅವರ ಅವಧಿಯಲ್ಲಿ ಇದನ್ನು ಈಗಾಗಲೇ ತಿಳಿಸಲಾಗಿತ್ತು. ಈ ಯೋಜನೆಯನ್ನು ಡಿಎಲ್ಎಫ್ಗೆ ನೀಡಲಾಗಿದೆ. ನಂತರ ಡಿಎಲ್ಎಫ್ ಇದು ಕಾರ್ಯಸಾಧ್ಯವಲ್ಲ ಎಂದು ಹೇಳಿ ಅದರಿಂದ ಹಿಂದೆ ಸರಿದಿದೆ" ಎಂದು ಡಿಸಿಎಂ ಹೇಳಿದರು.
ಸಭೆಯಲ್ಲಿ ರೈತರು ತಮ್ಮ ಕೆಲವು ಬೇಡಿಕೆಗಳನ್ನು ಕೂಡ ಮುಂದಿಟ್ಟರು. ವಿಶೇಷವಾಗಿ, ಅಭಿವೃದ್ಧಿ ಆಗುವ ಜಾಗದಲ್ಲಿ ರೈತರಿಗೆ 30*40 ಸೈಟ್ಗಳನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು. ತಮ್ಮ ಭೂಮಿಯನ್ನು ಸರ್ಕಾರಕ್ಕೆ ನೀಡುತ್ತಿರುವ ಹಿನ್ನೆಲೆಯಲ್ಲಿ, ಹಣದೊಂದಿಗೆ ಕನಿಷ್ಠ ಕೆಲವು ಸೈಟ್ಗಳ ರೂಪದಲ್ಲಿ ಹಿಂತಿರುಗಿ ಸೌಲಭ್ಯ ನೀಡಬೇಕು ಎಂದು ವಿನಂತಿಸಿದರು. ಅಭಿವೃದ್ಧಿಯಾಗುವ ಪ್ರದೇಶದಲ್ಲೇ ಅವರಿಗೆ ಸೈಟ್ ನೀಡಿದರೆ, ತಮ್ಮ ಭವಿಷ್ಯ ಭದ್ರವಾಗುತ್ತದೆ ಎಂಬ ಅಭಿಪ್ರಾಯವನ್ನು ರೈತರು ವ್ಯಕ್ತಪಡಿಸಿದರು. ಆದರೆ ರೈತರ ಬೇಡಿಕೆಯನ್ನು ತಕ್ಷಣ ಒಪ್ಪಿಕೊಳ್ಳುವ ಬದಲು, ‘ಈ ಬಗ್ಗೆ ಯೋಚನೆ ಮಾಡ್ತೇವೆ’ ಎಂದು ಡಿಸಿಎಂ ಹೇಳಿದ್ದಾರೆ.
Advertisement