ತುಮಕೂರು(ಬೆಂಗಳೂರು ಉತ್ತರ)ಜಿಲ್ಲೆ ಎಂದು ಮರುನಾಮಕರಣ: ಡಾ ಜಿ ಪರಮೇಶ್ವರ್

ಅಮೆರಿಕಾ, ಇಂಗ್ಲೆಂಡ್‌ ಸೇರಿದಂತೆ ವಿದೇಶಗಳಿಂದ ಹೂಡಿಕೆ ಮಾಡಲು ಬರುವ ಕೈಗಾರಿಕೋದ್ಯಮಿಗಳಿಗೆ ‘ಬೆಂಗಳೂರು ಉತ್ತರ’ ಎಂಬ ಹೆಸರು ತುಮಕೂರಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಆಗ ಅವರು ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬರುತ್ತಾರೆ ಎಂದು ಹೇಳಿದರು.
Home Minister G Parameshwara inaugurates a South India-level MSME conference and industrial exhibition organised by Karnataka
ಗೃಹ ಸಚಿವ ಡಾ ಜಿ ಪರಮೇಶ್ವರ್ ತುಮಕೂರಿನಲ್ಲಿ ಕರ್ನಾಟಕ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಸಿಯೇಷನ್‌ (KASSIA) ಆಯೋಜಿಸಿದ್ದ ದಕ್ಷಿಣ ಭಾರತ ಮಟ್ಟದ ಎಂಎಸ್‌ಎಂಇ ಸಮಾವೇಶ ಮತ್ತು ಕೈಗಾರಿಕಾ ಪ್ರದರ್ಶನವನ್ನು ಉದ್ಘಾಟಿಸಿದರು.
Updated on

ತುಮಕೂರು: ತುಮಕೂರು ಜಿಲ್ಲೆಯನ್ನು ತುಮಕೂರು (ಬೆಂಗಳೂರು ಉತ್ತರ) ಜಿಲ್ಲೆ ಎಂಬ ಮಾದರಿಯಲ್ಲಿ ಮರುನಾಮಕರಣ ಮಾಡಲಾಗುವುದು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಶುಕ್ರವಾರ ತಿಳಿಸಿದ್ದಾರೆ. ತುಮಕೂರಿನಲ್ಲಿ ಕರ್ನಾಟಕ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಸಿಯೇಷನ್‌ (KASSIA) ಆಯೋಜಿಸಿದ್ದ ದಕ್ಷಿಣ ಭಾರತ ಮಟ್ಟದ ಎಂಎಸ್‌ಎಂಇ ಸಮಾವೇಶ ಹಾಗೂ ಕೈಗಾರಿಕಾ ಪ್ರದರ್ಶನ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ಅಮೆರಿಕಾ, ಇಂಗ್ಲೆಂಡ್‌ ಸೇರಿದಂತೆ ವಿದೇಶಗಳಿಂದ ಹೂಡಿಕೆ ಮಾಡಲು ಬರುವ ಕೈಗಾರಿಕೋದ್ಯಮಿಗಳಿಗೆ ‘ಬೆಂಗಳೂರು ಉತ್ತರ’ ಎಂಬ ಹೆಸರು ತುಮಕೂರಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಆಗ ಅವರು ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬರುತ್ತಾರೆ ಎಂದು ಹೇಳಿದರು.

ನಾನು ಇಲ್ಲಿಯೇ ಹುಟ್ಟಿ ಬೆಳೆದವನು. ಜಿಲ್ಲೆಯ ಗುರುತಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಯಾವುದೇ ಕಾರಣಕ್ಕೂ ಜಿಲ್ಲೆಯ ಹೆಸರನ್ನು ಬದಲಾಯಿಸುವುದಿಲ್ಲ. ಜಿಲ್ಲೆಯನ್ನು ಬೆಂಗಳೂರಿನ ಭಾಗವಾಗಿ ಅಭಿವೃದ್ಧಿಪಡಿಸಲಾಗುವುದು. ಈ ನಿಟ್ಟಿನಲ್ಲಿ ನಾನು ಎಲ್ಲ ಪ್ರಯತ್ನ ಮಾಡುತ್ತೇನೆ ಎಂದರು.

ನಗರ ಹೊರವಲಯದ ವಸಂತನರಸಾಪುರದಲ್ಲಿ ಕೈಗಾರಿಕಾ ಕೇಂದ್ರ ಅಭಿವೃದ್ಧಿಪಡಿಸಲು 20 ಸಾವಿರ ಏಕರೆ ಭೂಮಿ ಮೀಸಲಿರಿಸಲಾಗಿದೆ. 20 ವರ್ಷಗಳಾದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಜಪಾನೀಸ್ ಟೌನ್‌ಶಿಪ್‌ಗಾಗಿ ಸುಮಾರು 500 ಏಕರೆ ಭೂಮಿ ನೀಡಲಾಗಿತ್ತು, ಆದರೆ ಇದುವರೆಗೆ ಯಾವುದೇ ಪ್ರಗತಿ ಕಂಡಿಲ್ಲ. ಸರ್ಕಾರ ಅಗತ್ಯ ಮೂಲಸೌಕರ್ಯ ಒದಗಿಸಲಿದೆ. ಕೈಗಾರಿಕೋದ್ಯಮಿಗಳು ಇದಕ್ಕೆ ಗಮನ ಹರಿಸಬೇಕು ಎಂದರು.

ಆಧುನೀಕರಣದಿಂದ ಮರಗೆಲಸ ಮತ್ತು ನೇಕಾರಿಕೆ ಮೊದಲಾದ ಸಣ್ಣ ಕೈಗಾರಿಕೆಗಳು ಕುಸಿದಿರುವ ಬಗ್ಗೆ ಪರಮೇಶ್ವರ್ ಆತಂಕ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ 24 ಲಕ್ಷ ಸಣ್ಣ ಕೈಗಾರಿಕೆಗಳಿದ್ದು, ಸುಮಾರು 2.5 ಕೋಟಿ ಜನರಿಗೆ ಉದ್ಯೋಗ ಒದಗಿಸಿವೆ ಎಂದು ಹೇಳಿದರು.

ಚೀನಾ ಮಾದರಿಯಲ್ಲಿ ಸರಿಯಾದ ಉತ್ತೇಜನ ನೀಡಿದರೆ ಈ ಕ್ಷೇತ್ರ ಇನ್ನಷ್ಟು ಬೆಳವಣಿಗೆ ಕಾಣಬಹುದು. ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಅಗತ್ಯ ತಂತ್ರಜ್ಞಾನಗಳನ್ನು ಶೀಘ್ರವಾಗಿ ಅಳವಡಿಸಿಕೊಳ್ಳಬೇಕು. ಇಲ್ಲವಾದರೆ ಇತರೆ ದೇಶಗಳು ನಮ್ಮನ್ನು ಮೀರಿಸಿ ಮುಂದೆ ಸಾಗುತ್ತವೆ ಎಂದು ಎಚ್ಚರಿಸಿದರು.

KASSIA ಅಧ್ಯಕ್ಷ ಬಿ.ಆರ್. ಗಣೇಶ್ ರಾವ್, ಸಣ್ಣ ಕೈಗಾರಿಕೆಗಳು ಆರ್ಥಿಕ ಬಲದ ಬೆನ್ನೆಲುಬಾಗಿದ್ದು, ಕೃಷಿಯ ನಂತರ ಅತಿ ಹೆಚ್ಚು ಆದಾಯ ತರುವ ಕ್ಷೇತ್ರವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ KASSIA ವಜ್ರಮಹೋತ್ಸವ ಸ್ಮರಣಿಕೆಯನ್ನು ಬಿಡುಗಡೆ ಮಾಡಲಾಯಿತು.

ಮೆಟ್ರೋ DPR ಸಲ್ಲಿಕೆ

ಬೆಂಗಳೂರು ಮಡವಾರದಿಂದ ತುಮಕೂರಿಗೆ ಮೆಟ್ರೋ ಮಾರ್ಗ ವಿಸ್ತರಣೆಗಾಗಿ ಸಿದ್ಧಪಡಿಸಿದ ವಿವರವಾದ ಯೋಜನಾ ವರದಿ (DPR) ಸಲ್ಲಿಕೆಯಾಗಿದೆ ಎಂದು ಡಾ ಪರಮೇಶ್ವರ್ ತಿಳಿಸಿದರು. ಈ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಕಳೆದ ಹತ್ತು ವರ್ಷಗಳಿಂದ ಮೆಟ್ರೋ ವಿಸ್ತರಣೆ ಕುರಿತು ಚರ್ಚೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಟೆಂಡರ್ ಮತ್ತು ಇತರೆ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಹೇಳಿದರು.

ಸಣ್ಣ ಕೈಗಾರಿಕೆಗಳಿಗೆ ಪ್ರತ್ಯೇಕ ಕೈಗಾರಿಕಾ ನೀತಿ ಜಾರಿಗೆ ಸಂಬಂಧಿಸಿ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಲಾಗುವುದು ಎಂದೂ ಹೇಳಿದರು.

HAL ವಿಸ್ತರಣೆ

ಗುಬ್ಬಿಯ HAL ಘಟಕಕ್ಕೆ ಹೆಚ್ಚುವರಿಯಾಗಿ 300 ಏಕರೆ ಭೂಮಿ ನೀಡಲು ಜಾಗ ಗುರುತಿಸಲಾಗಿದೆ. ಲೈಟ್ ಕಾಂಪ್ಯಾಕ್ಟ್ ಹೆಲಿಕಾಪ್ಟರ್ ಉತ್ಪಾದನಾ ಘಟಕ ಸ್ಥಾಪಿಸಲು HAL ಅಧಿಕಾರಿಗಳು ಭೂಮಿ ಕೇಳಿದ್ದಾರೆ. ಅವರು ಕೇಳಿದ ಕೂಡಲೇ ಭೂಮಿ ಹಸ್ತಾಂತರಿಸಲಾಗುವುದು. ಇದರಿಂದ ಜಿಲ್ಲೆಯಲ್ಲಿ ಸುಮಾರು 6,000 ದಿಂದ 8,000 ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com